ಚಿತ್ರದುರ್ಗ: ಅತಿ ಬುದ್ಧಿವಂತಿಕೆಯಿಂದ ಕೊಲೆಗೈದಿದ್ದರೂ ಪೊಲೀಸರ ಕಾರ್ಯಾಚರಣೆಯಿಂದ 36 ಗಂಟೆಯಲ್ಲಿಯೇ ಹಸೆಮಣೆ ಏರಬೇಕಿದ್ದ ಆರೋಪಿ ಈಗ ಜೈಲು ಸೇರಿದ್ದಾನೆ.
ಚಿತ್ರದುರ್ಗದ ಶೂರ ವಾರಪತ್ರಿಕೆ ಸಂಪಾದಕ ಮಂಜುನಾಥ್ ಕೊಲೆಯಾದ ದುರ್ದೈವಿ. ಆರೋಪಿ ವಿಜಯಕುಮಾರ್ ಬಂಧಿತ ಆರೋಪಿಯಾಗಿದ್ದು, ಇದೇ ಆಗಸ್ಟ್ 25 ರಂದು ವಿಜಯ್ಕುಮಾರ್ ಗೆ ಮದುವೆ ನಿಶ್ಚಯವಾಗಿತ್ತು. ಆದರೆ ಈಗ ಕೊಲೆ ಮಾಡಿ ಜೈಲು ಸೇರಿದ್ದಾನೆ.
ಏನಿದು ಪ್ರಕರಣ?
ಮೃತ ಮಂಜುನಾಥ್ ತನ್ನ ಪತ್ರಿಕೆ ಹೆಸರು ಹೇಳಿಕೊಂಡು ಹಲವು ಬೇರೆ ಬೇರೆ ವ್ಯವಹಾರಗಳನ್ನು ಸಹ ಮಾಡುತಿದ್ದನು. ಆದರೆ ಆಗಸ್ಟ್ 6 ಸಂಜೆ ಮನೆಯಿಂದ ಹೋದ ಮಂಜುನಾಥ್ ಮತ್ತೆ ವಾಪಾಸ್ ಬಾರದೇ ಹೊಳಲ್ಕೆರೆ ಪಟ್ಟಣದ ಸಮೀಪವಿರುವ ಅರಳಿಹಳ್ಳಿ ಬಳಿ ತನ್ನ ಸ್ಕಾರ್ಪಿಯೋ ವಾಹನದಲ್ಲೇ ಅರೆಬರೆ ಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆದರೆ ಪೊಲೀಸರಿಗೆ ಅರೆಬರೆ ಬೆಂದ ಸ್ಥಿತಿಯಲ್ಲಿದ್ದರಿಂದ ಮೊದಲು ಗುರುತು ಪತ್ತೆಯಾಗಿಲ್ಲ. ಬಳಿಕ ಅವರು ಹಾಕಿದ್ದ ಉಂಗುರಗಳ ಮೂಲಕ ಮಂಜುನಾಥ್ ಎಂದು ಪತ್ತೆಮಾಡಲಾಗಿತ್ತು. ಈ ಕೊಲೆ ಪ್ರಕರಣವನ್ನ ಬೆನ್ನತ್ತಿದ ಹೊಳಲ್ಕೆರೆ ಪೋಲಿಸರು, ಪ್ರಕರಣ ನಡೆದ ಕೇವಲ 36 ಘಂಟೆಯಲ್ಲಿ ಆರೋಪಿ ವಿಜಯಕುಮಾರ್ ನನ್ನು ಬಂಧಿಸಿದ್ದಾರೆ.
ಕೊಲೆಯಾದ ಮಂಜುನಾಥ್
ಮಂಜುನಾಥ್ ಮತ್ತು ವಿಜಯ್ ಕುಮಾರ್ ನಡುವೆ ಮೊದಲಿನಿಂದಲೂ ಹಣದ ವ್ಯವಹಾರ ಜೋರಾಗಿಯೇ ನಡೆಯುತ್ತಿತ್ತು. ಆದರೆ ಆಗಸ್ಟ್ 5 ರ ರಾತ್ರಿ ದೊಡ್ಡಘಟ್ಟ ಬಳಿ ಇಬ್ಬರು ತಲ್ಲಾಡಿ ಜಗಳ ಮಾಡಿಕೊಂಡಿದ್ದಾರೆ. ಈ ತಲ್ಲಾಟದಲ್ಲಿ ವಿಜಯ್ ಕುಮಾರ್ ಮಂಜುನಾಥನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ನಂತರ ಕೊಲೆ ಮಾಡಿದ ದೇಹವನ್ನ ಅರೇಹಳ್ಳಿ ಬಳಿ ಕಾರು ಸಮೇತ ತಂದು ಸುಟ್ಟು ಹಾಕಿದ್ದಾನೆ.
ಈ ಕೊಲೆಯನ್ನು ಕೇವಲ ಓರ್ವ ವ್ಯಕ್ತಿ ಮಾಡಲು ಸಾಧ್ಯವಿಲ್ಲ. ಈ ಪ್ರಕರಣದ ಹಿಂದೆ ಇನ್ನಷ್ಟು ಕಾಣದ ಕೈಗಳು ಶಾಮೀಲಾಗಿವೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥನ ಸಂಬಂಧಿಕರು ಆಗ್ರಹಿಸಿದ್ದಾರೆ. ಇತ್ತ ಅತಿ ಕಡಿಮೆ ಅವಧಿಯಲ್ಲೇ ಪ್ರಕರಣ ಭೇದಿಸಿದ ಹೊಳಲ್ಕೆರೆ ಪೋಲಿಸರನ್ನು ಎಸ್ಪಿ ಅಭಿನಂಧಿಸಿದ್ದಾರೆ.