ಮೈಸೂರು: ನನ್ನ ಬಳಿ ನಾನು ಓಡಿಸುವ ಕಾರಿನ ಯಾವುದೇ ದಾಖಲಾತಿ ಇಲ್ಲ. ಹೀಗಾಗಿ ತಾಕತ್ ಇದ್ದರೆ ನನ್ನನ್ನು ಹಿಡಿಯಿರಿ ಎಂದು ಸಂಚಾರಿ ಪೊಲೀಸರಿಗೆ ಸವಾಲು ಹಾಕಿದವನು ಈಗ ಖಾಕಿಯ ಅತಿಥಿಯಾಗಿದ್ದಾನೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮಾಚೆಬಾಯನಹಳ್ಳಿ ಗ್ರಾಮದ ನಿವಾಸಿ ರವಿ ಪೊಲೀಸರಿಗೆ ಸವಾಲ್ ಹಾಕಿದ್ದನು. ಈ ಸವಾಲ್ ಸ್ವೀಕರಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪೊಲೀಸರಿಗೆ ಅವಾಜ್ ರೂಪದಲ್ಲಿ ಸವಾಲು ಹಾಕಿದ್ದವನ ಗುರುತು ಪತ್ತೆ ಹಚ್ಚಿ ಆತನ ಸ್ವಗ್ರಾಮದಲ್ಲೇ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕಳೆದ ಎರಡು ದಿನಗಳ ಹಿಂದೆ ಪೊಲೀಸರಿಗೆ ಚಾಲೆಂಜ್ ಮಾಡಿ ಈಗ ಜೈಲಿನಲ್ಲಿ ಕಂಬಿ ಎಣಿಸುವ ಸ್ಥಿತಿಗೆ ಬಂದಿದ್ದಾನೆ.
ತನ್ನ ಕಾರಿನಲ್ಲಿ ಕೂತು ಸೆಲ್ಫಿ ವೀಡಿಯೋ ಮಾಡಿ, ತಾನು ದಾಖಲೆ ಇಲ್ಲದೇ ವಾಹನ ಓಡಿಸುತ್ತಿದ್ದೇನೆ. ತಾಕತ್ ಇದ್ದರೆ ನನ್ನನ್ನು ಹಿಡಿಯಿರಿ ಎಂದು ರವಿ ಪೊಲೀಸರಿಗೆ ಸವಾಲ್ ಹಾಕಿದ್ದನು. ಅಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದನು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಇದನ್ನು ನೋಡಿದ ಪೊಲೀಸರು ರವಿಯ ಬಗ್ಗೆ ಮಾಹಿತಿ ಕಲೆಹಾಕಿ, ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.