ದಾವಣಗೆರೆ: ರೌಡಿ ಶೀಟರ್ ಬುಳ್ ನಾಗನನ್ನು ಕೊಲೆ ಮಾಡಿದ ಹಂತಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಗರಾಜ್ ಅಲಿಯಾಸ್ ಬುಳ್ ನಾಗ ಕೊಲೆಯಾಗಿದ್ದ ರೌಡಿಶೀಟರ್. ಇದೇ ತಿಂಗಳ 11 ರಂದು ಬೈಕ್ನಲ್ಲಿ ಬುಳ್ ನಾಗ ಹೋಗುವಾಗ ಆತನ ಮೇಲೆ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಿದ್ದರು. ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡ ಎಸ್ಪಿ ಆರ್. ಚೇತನ್ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ಇದೀಗ 18 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು:
ಸಂತೋಷ್ ಕುಮಾರ್, ಪರಶುರಾಮ್ ಅಲಿಯಾಸ್ ಪರಸ, ವಿಜಯನಾಯ್ಕ ವಿಜಿ, ಪವನ್ ಕುಮಾರ್, ಅಂಡಿ ಮಹಾಂತೇಶ್ ಮಾಂತೇಶ, ನವೀನ್.ಜೆ ಪಟ್ಲಿ, ರಾಕೇಶ್.ಪಿ ರಾಕಿ, ಮಂಜುನಾಥ್.ಎಂ ಅಲಿಯಾಸ್ ಖಾರದಪುಡಿ ಮಂಜ, ವಿಜಯ್.ಎಸ್ ಅಲಿಯಾಸ್ ಟಿಟಿ ವಿಜಿ, ಶಿವಕುಮಾರ್ ಕಬ್ಬಡಿ ಶಿವು, ಮೈಲಾರಿ.ಎ, ರಮೇಶ್, ಆರ್.ಎಕ್ಸ್ ರಾಮ, ಮನೋಜ್.ಎನ್, ಶ್ರೀನಿವಾಸ್ ಅಲಿಯಾಸ್ ಮೋಟ್ ಬಳ್ ಸೀನಾ, ಸುಭಾನಿ ಗಬ್ಬರ್, ರಾಬಿ, ನೀಲಗಿರಿ ನಿಖಿಲ್ ಮತ್ತು ಪರಮೇಶಿ ಪರ್ಮಿ ಎಂಬವರನ್ನು ಬಂಧಿಸಿದ್ದಾರೆ.
ಕೊಲೆ:
ಬುಳ್ ನಾಗ ಪೀಲ್ಡ್ ನಲ್ಲಿ ಒಳ್ಳೆಯ ಹೆಸರು ಮಾಡಿದ್ದ ನಾಗನಿಗೆ ದುಷ್ಮನ್ಗಳೂ ಕೂಡ ಸಾಕಷ್ಟು ಜನರಿದ್ದರು. ಹಾಗಾಗಿ ನಾಗನ ಮೇಲೆ ಎರಡು ಬಾರಿ ದಾಳಿಯಾಗಿತ್ತು. ಬೆಂಗಳೂರಿನಿಂದ ಬಂದಿದ್ದ ಸುಫಾರಿ ಕಿಲ್ಲರ್ ನಾಗನನ್ನು ಹತ್ಯೆ ಮಾಡಲು ಸ್ಕೆಚ್ ಹಾಕಿದ್ದರು. ಆದರೆ ಪೊಲೀಸರು ಘಟನೆ ನಡೆಯುವ ಮುನ್ನವೇ ಆರೋಪಿಗಳನ್ನು ಬಂಧಿಸಿದ್ದರು. ಇದಾದ ಬಳಿಕ ರಾಣೇಬೆನ್ನೂರು ತಾಲೂಕಿನ ಕುಮಾರ ಪಟ್ಟಣಂ ಬಳಿ ಮತ್ತೊಂದು ದಾಳಿ ಆದಾಗ ನಾಗ ಬದುಕಿ ಬಂದಿದ್ದನು. ಆದರೆ ಮೂರನೇ ಬಾರಿ ನಾಗ ಮಚ್ಚಿಗೆ ಬಲಿಯಾಗಿ ಹೋಗಿದ್ದಾನೆ.
ಹಣಕಾಸಿನ ವಿಚಾರವಾಗಿ ಬುಳ್ ನಾಗನಿಗೂ, ಕಣುಮ ಆಲಿಯಾಸ್ ಸಂತೋಷ್ ಕುಮಾರ್ ಗೆ ಗಲಾಟೆಯಾಗಿತ್ತು. ಇದರಿಂದಾಗಿಯೇ ಎರಡು ಬಾರಿ ಬುಳ್ ನಾಗನ ಮೇಲೆ ಕಣುಮಾ ದಾಳಿ ಮಾಡಿಸಿದ್ದನು. ನಾಗ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿದ ಕಣುಮಾ, ನಾಗನನ್ನು ಎತ್ತಲು ಸ್ಕೇಚ್ ಹಾಕಿದ್ದನು. ಇದಕ್ಕೆ ಮಾಜಿ ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ್ ಅಲಿಯಾಸ್ ಮೋಟ್ ಬೊಳ್ ಸೀನಾ ಸಾಥ್ ನೀಡಿದ್ದನು. ಅದರಂತೆ ಇದೇ ತಿಂಗಳ 11 ರಂದು ಬೈಕ್ ನಲ್ಲಿ ಬುಳ್ ನಾಗ ಹೋಗುವಾಗ ಆತನ ಮೇಲೆ ದಾಳಿ ಮಾಡಿದ ಗ್ಯಾಂಗ್ ಆತನನ್ನು ಕೊಚ್ಚಿ ಕೊಂದಿತ್ತು ಎಂದು ಎಸ್ಪಿ ಆರ್.ಚೇತನ್ ತಿಳಿಸಿದ್ದಾರೆ.
ಸದ್ಯಕ್ಕೆ ಬಂಧಿತ ಆರೋಪಿಗಳನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ದಾವಣಗೆರೆಯನ್ನ ರೌಡಿ ಮುಕ್ತ ನಗರವನ್ನಾಗಿ ಮಾಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.