ಬೆಂಗಳೂರು: ಪೊಲೀಸ್ ಹಾಗೂ ಮಾಧ್ಯಮ ವರದಿಗಾರರ ವೇಷದಲ್ಲಿ ಹಗಲು ದರೋಡೆ ಮಾಡುತ್ತಿದ್ದ ಖದೀಮರನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಹೇಮಂತ್ ಕುಮಾರ್, ಮನೋಜ್, ಚೇತನ್, ಲೋಕೇಶ್ ಬಂಧಿತ ಆರೋಪಿಗಳಾಗಿದ್ದು, ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿ ಪೊಲೀಸರು, ಈ ಯಶಸ್ವಿ ಕಾರ್ಯಚರಣೆ ನಡೆಸಿ ನಾಲ್ಕು ಜನ ದರೋಡೆಕೋರರನ್ನ ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 9.50 ಲಕ್ಷ ರೂಪಾಯಿ ಮೌಲ್ಯದ 250 ಗ್ರಾಂ ಚಿನ್ನ, ಒಂದು ಸ್ಯಾಮಸಂಗ್ ಮೊಬೈಲ್, ಇಂಟಿಯೋಸ್ ಕಾರು, ಒಂದು ಟಿ.ವಿ.ಎಸ್ ಬೈಕ್ ಹಾಗೂ ಒಂದು ಬುಲೆಟ್ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೂ ಈ ಆರೋಪಿಗಳು ಪೊಲೀಸ್ ವೇಶದಲ್ಲಿ ಭಾವ ಚಿತ್ರಗಳನ್ನ ತೆಗೆಸಿಕೊಂಡು, ಜನರನ್ನ ಬೆದರಿಸಿ ಹಗಲು ದರೋಡೆ ನಡೆಸುತಿದ್ದರು ಎನ್ನಲಾಗಿದೆ.
ನಕಲಿ ನಂಬರ್ ಪ್ಲೇಟ್: ಕದ್ದ ವಾಹನಗಳಿಗೆ ನಕಲಿ ನಂಬರ್ ಪ್ಲೇಟ್ ಗಳನ್ನು ಬಳಸಿ, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಹಲವಾರು ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಮಾದನಾಯಕನಹಳ್ಳಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದು, ಆರೋಪಿಗಳ ಬಂಧನದಿಂದ ಇನ್ನು ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.