ಬಾಗಲಕೋಟೆ: ಜೇಬಲ್ಲಿ ಸಿಕ್ಕ ಕಡಲೆಕಾಯಿಯ ಸುಳಿವಿನಿಂದಲೇ ಕೊಲೆಗಾರರನ್ನು ಪತ್ತೆ ಹಚ್ಚುವಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಂಕ್ರಾಂತಿ ದಿನ ಜನವರಿ 14ರಂದು ಜಮಖಂಡಿ ತಾಲೂಕಿನ ಕುಂಚನೂರು ಪುನರ್ವಸತಿ ಕೇಂದ್ರದಲ್ಲಿ 34 ವರ್ಷದ ತುಕ್ಕಪ್ಪ ರೇವಣ್ಣವರ ಕೊಲೆಯಾಗಿತ್ತು. ಹಗ್ಗದಿಂದ ಕತ್ತು ಬಿಗಿದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಆಸ್ತಿ ವಿಚಾರವಾಗಿ ಚಿಕ್ಕಪ್ಪನಿಂದಲೇ ಕೊಲೆಗೆ ಸುಪಾರಿ ಕೊಡಲಾಗಿತ್ತು ಎಂಬ ಸುದ್ದಿ ತನಿಖೆಯಿಂದ ಹೊರ ಬಿದ್ದಿದೆ. ತುಕ್ಕಪ್ಪನ ಕೊಲೆಗೆ ಆತನ ಚಿಕ್ಕಪ್ಪನಾದ ಕರೆಪ್ಪ ರೇವಣ್ಣವರ ಸುಪಾರಿ ನೀಡಿದ್ದಾಗಿ ತನಿಖೆಯಿಂದ ಬಯಲಾಗಿದೆ.
ಧರ್ಮಣ್ಣ ಗುಡದಾರ ಹಾಗೂ ವಿಠ್ಠಲ ಬಬಲೇಶ್ವರ ಕೊಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದೆ. ಕೊಲೆ ಮಾಡುವ ಮೊದಲು ಕೊಲೆಗಾರರು ಹಾಗೂ ಕೊಲೆಯಾದ ವ್ಯಕ್ತಿ ಬಾರ್ ನಲ್ಲಿ ಮದ್ಯ ಸೇವನೆ ಮಾಡಿದ್ದರು. ಈ ವೇಳೆ ಬಾರ್ ನಲ್ಲಿ ನೆನೆಸಿಟ್ಟ ಕಡಲೆಗಳನ್ನು ಸ್ನ್ಯಾಕ್ಸ್ ರೀತಿಯಲ್ಲಿ ಕೊಡಲಾಗಿತ್ತು. ಶವ ಪರಿಶೀಲನೆ ವೇಳೆ ಮೃತ ವ್ಯಕ್ತಿಯ ಜೇಬಿನಲ್ಲಿ ಕಡಲೆಕಾಳು ಪತ್ತೆಯಾಗಿದ್ದವು. ಬಳಿಕ ಕಡಲೆಕಾಳು ಸ್ನ್ಯಾಕ್ಸ್ ರೀತಿ ಕೊಡುವ ಎಲ್ಲಾ ಬಾರ್ ಗಳನ್ನು ಪೊಲೀಸರು ತಡಕಾಡಿದ್ದರು. ಕೊನೆಗೆ ಜಮಖಂಡಿ ಬಾಲಾಜಿ ಬಾರ್ ನ ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಪ್ರಕರಣ ಬೇಧಿಸಲು ಸಹಕಾರಿಯಾಗಿದೆ.
ಕೊಲೆಗೆ ಸುಪಾರಿ ಕೊಟ್ಟ ಮೃತ ತುಕ್ಕಪ್ಪನ ಚಿಕ್ಕಪ್ಪನಾದ ಕರೆಪ್ಪ ಹಾಗೂ ಕೊಲೆ ಮಾಡಿ ಧರ್ಮಣ್ಣ ಗುಡದಾರ, ವಿಠ್ಠಲ ಬಬಲೇಶ್ವರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಕೂಡ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಮುಂಡಗನೂರು ಗ್ರಾಮದವರು ಎಂದು ತಿಳಿದು ಬಂದಿದೆ.