ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ (Religious Conversion Act) ಜಾರಿಯಾದ ಬಳಿಕ ರಾಜ್ಯದಲ್ಲಿ ಮೊದಲ ಪ್ರಕರಣ (FIR) ದಾಖಲಾಗಿದೆ. ಪ್ರೀತಿ ಮಾಡಿದ ಮೇಲೆ ಮದುವೆಯಾಗಬೇಕಾದ್ರೆ ಮತಾಂತರ ಆಗಲೇಬೇಕೆಂದು ಯುವತಿಯನ್ನ ಬಲವಂತವಾಗಿ ಮತಾಂತರ ಮಾಡಿದ್ದವನ ವಿರುದ್ಧ ರಾಜಧಾನಿಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಯಶವಂತಪುರ ಠಾಣಾ (Yeshwanthpur Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸೈಯದ್ ಮೊಯಿನ್ (24) ಮತಾಂತರ ನಿಷೇಧ ಕಾಯ್ದೆಯಲ್ಲಿ ಬಂಧಿತನಾದ ಮೊದಲ ಆರೋಪಿ. ಇದನ್ನೂ ಓದಿ: ಕೇರಳದಲ್ಲಿ ನರಬಲಿ ಕೇಸ್ – ಮಾಟ ಮಂತ್ರ ತಡೆಗೆ ಕಠಿಣ ಕಾನೂನು: ಕೇರಳ ಸರ್ಕಾರ ನಿರ್ಧಾರ
ಪೊಲೀಸರಿಗೆ (Police) ಮೊದಲಿಗೆ ಇದೊಂದು ಮಿಸ್ಸಿಂಗ್ ಕೇಸ್ ಆಗಿತ್ತು, ತನಿಖೆ ವೇಳೆ ಮತಾಂತರ ಪ್ರಕರಣ ಎಂಬುದು ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
ಮತಾಂತರಕ್ಕೆ ಒಳಗಾದ ಯುವತಿ ಕುಟುಂಬ ಯಶವಂತಪುರ ಠಾಣಾ (Yeshwanthpur Police Station) ವ್ಯಾಪ್ತಿಯಲ್ಲಿ ಕಳೆದ 15 ವರ್ಷಗಳಿಂದ ವಾಸ ಮಾಡುತ್ತಿದ್ದರು. ಯುವತಿಯು ತಮ್ಮ ಪಕ್ಕದ ಏರಿಯಾದಲ್ಲೇ ಇದ್ದ ಯುವಕನನ್ನು ಪ್ರೀತಿಸುತ್ತಿದ್ದಳು. ಹಾಗಾಗಿ ಯುವಕ ಪ್ರೀತಿ (love) ಮಾಡಿದ ಮೇಲೆ ಮದುವೆಯಾಗಬೇಕಾದರೆ ಮತಾಂತರವಾಗಲೇಬೇಕು ಎಂದು ಒತ್ತಡ ಹೇರಿದ್ದಾನೆ. ಯುವಕನ ಒತ್ತಡದಿಂದ ಯುವತಿ ಮತಾಂತರಗೊಂಡಿದ್ದಾಳೆ.
ಇದೇ ತಿಂಗಳ ಅಕ್ಟೋಬರ್ 5ರಂದು ಯುವತಿ ಕಾಣೆಯಾಗಿದ್ದಳು. ಈ ಬಗ್ಗೆ ಪೋಷಕರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಯುವತಿಯನ್ನು ಪತ್ತೆಹಚ್ಚಿ ಕರೆತರುವಾಗ ಆಕೆ ಬುರ್ಕಾ ಧರಿಸಿದ್ದನ್ನು ಕಂಡು ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಳಿಕವೇ ಯಶವಂತಪುರ ಠಾಣೆ ವ್ಯಾಪ್ತಿಯ ಮಸೀದಿಗೆ ಕರೆದೊಯ್ದು ಮತಾಂತರ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.
ಸದ್ಯ ಯಶವಂತಪುರ ಠಾಣೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಸೆಕ್ಷನ್ 5ರ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿ ಸೈಯದ್ ಮೊಯಿನ್ (24)ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ರಷ್ಯಾದಿಂದ ದೆಹಲಿಗೆ ಬಂದ ವಿಮಾನದಲ್ಲಿ ಬಾಂಬ್ ಬೆದರಿಕೆ – ದೆಹಲಿ ಏರ್ಪೋರ್ಟ್ ಹೈ ಅಲರ್ಟ್
ಮತಾಂತರ ಕಾಯ್ದೆ ಎಂದರೇನು?
ಯಾವುದೇ ಧರ್ಮದ ವ್ಯಕ್ತಿ ಮತ್ತೊಂದು ಧರ್ಮಕ್ಕೆ ಮತಾಂತರವಾಗಬೇಕಾದರೇ ಕಾನೂನುಬದ್ಧವಾಗಿರಬೇಕು. ಅದಕ್ಕಾಗಿ ಮೊದಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ನಂತರ ಜಿಲ್ಲಾಧಿಕಾರಿಗಳು ಮತಾಂತರದ ಬಗ್ಗೆ ಪೋಷಕರು ಹಾಗೂ ಆಪ್ತರಿಂದ ಹೇಳಿಕೆ ಪಡೆಯುತ್ತಾರೆ. ಬಳಿಕ 30 ದಿನಗಳ ಗಡುವು ನೀಡುತ್ತಾರೆ. ಒಂದು ವೇಳೆ ಯಾವುದೇ ಒತ್ತಡವಿಲ್ಲದೇ ತಮ್ಮ ಇಷ್ಟದಂತೆ ಮತಾಂತರವಾಗುತ್ತಿದ್ದರೆ ಡಿಸಿ ಅನುಮತಿ ನೀಡುತ್ತಾರೆ. ಒತ್ತಡ ಅಥವಾ ಆಮಿಷಕ್ಕೆ ಬಲಿಯಾಗಿ ಮತಾಂತರವಾದರೆ ಕಾನೂನು ಕ್ರಮ ಜರುಗಿಸುತ್ತಾರೆ. ಮತಾಂತರಕ್ಕೆ ಸಹಾಯ ಮಾಡುವ ಎಲ್ಲಾ ವ್ಯಕ್ತಿಗಳ ಮೇಲೂ ಕ್ರಮ ತೆಗೆದುಕೊಳ್ಳಲಿದ್ದಾರೆ.