ಮಂಗಳೂರು: ಕಡಲನಗರಿ ಮಂಗಳೂರು ಕೋಮು ಸೂಕ್ಷ್ಮ ಪ್ರದೇಶ. ಇತ್ತೀಚಿಗೆ ಮಂಗಳೂರು ನಗರ ಭಾಗದಲ್ಲೇ ನಾಗದೇವರ ಮೂರ್ತಿ ಸರಣಿ ಧ್ವಂಸ ನಡೆಸಿ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೃತ್ಯ ನಡೆದಿತ್ತು. ಮಂಗಳೂರು ಪೊಲೀಸರಿಗೆ ಸವಾಲಾಗಿದ್ದ ಈ ಪ್ರಕರಣವನ್ನು ಕೊನೆಗೂ ಬೇಧಿಸಲಾಗಿದ್ದು ಕೃತ್ಯ ನಡೆಸಿದ ಎಂಟು ಮಂದಿ ಆರೋಪಿಗಳು ಅಂದರ್ ಆಗಿದ್ದಾರೆ.
ಮಂಗಳೂರಿನಲ್ಲಿ ತಿಂಗಳ ಹಿಂದೆ ನಾಗನಮೂರ್ತಿಯ ಧ್ವಂಸ ಮಾಡುವ ಸರಣಿ ಕೃತ್ಯ ನಡೆದಿತ್ತು. ಅಕ್ಟೋಬರ್ 20ರಂದು ಬಂಗ್ರಕೂಳೂರಿನ ಕೋಟ್ಯಾನ್ ಕುಟಂಬಕ್ಕೆ ಸೇರಿದ ನಾಗಬನದ ನಾಗನ ಮೂರ್ತಿಯನ್ನು ಧ್ವಂಸಗೊಳಿಸಿದ್ರೆ, ನವೆಂಬರ್ 12ರಂದು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ನಲ್ಲಿನ ನಾಗದೇವರ ಕಟ್ಟೆಯಲ್ಲಿನ ನಾಗವಿಗ್ರಹವನ್ನು ಧ್ವಂಸಗೊಳಿಸಲಾಗಿತ್ತು. ಈ ರೀತಿಯ ಸರಣಿ ಘಟನೆ ಸಾಕಷ್ಟು ಭಕ್ತರ, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿ ಕೋಮು ಗಲಭೆ ನಡೆಯುವ ಆತಂಕ ಎದುರಾಗಿತ್ತು. ಇದೀಗ ಕೊನೆಗೂ ಈ ಪ್ರಕರಣವನ್ನು ಬೇಧಿಸಿರುವ ಮಂಗಳೂರು ಪೊಲೀಸರು ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಫ್ವಾನ್, ಪ್ರವೀಣ್ ಮೊಂತೆರೋ, ನಿಖಿಲೇಶ್, ಜಯಂತ್ ಕುಮಾರ್, ನೌಶಾದ್, ಸುಹೈಬ್, ಪ್ರತೀಕ್, ಮಂಜುನಾಥ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಭಾರೀ ಡೇಂಜರ್ – ಹೊಸ ವೈರಸ್, ಹೊಸ ಲಕ್ಷಣ!
ಬಂಧಿತರ ವಿಚಾರಣೆ ಸಂಧರ್ಭ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಸರಣಿ ಸರಗಳ್ಳತನ, ದರೋಡೆ ಪ್ರಕರಣಗಳ ತನಿಖೆಯ ಹಿಂದೆ ಬಿದ್ದ ಪೆÇಲೀಸರ ದಿಕ್ಕು ತಪ್ಪಿಸಲು ಈ ಕೃತ್ಯ ಎಸಗಿರುವುದಾಗಿ ಹೇಳಿದ್ದಾರೆ. ನಾಗದೇವರ ಮೂರ್ತಿ ಭಘ್ನಗೊಳಿಸಿ ಕೋಮು ಗಲಭೆ ಸೃಷ್ಟಿಸಿ ಶಾಂತಿ ಕದಡುವ ಸಂಚು ರೂಪಿಸಿದ್ದನ್ನು ಬಾಯ್ಬಿಟ್ಟಿದ್ದಾರೆ. ಇದಕ್ಕಾಗಿ ಸರಣಿ ಸರಗಳ್ಳತನ, ದರೋಡೆ ನಡೆಸಿದ್ದ ಆರೋಪಿಗಳಾದ ಅಬ್ದುಲ್ ಇಶಾಮ್ ಮತ್ತು ಹ್ಯಾರಿಸ್ ಯಾನೆ ಆಚಿ ಎಂಬವರು ಇವರಿಗೆ ಪ್ರೇರಣೆ ನೀಡಿದ್ದಾಗಿಯು ಗೊತ್ತಾಗಿದೆ. ಆರೋಪಿಗಳಾದ ಸಫ್ವಾನ್, ಸೊಹೈಬ್ ನೇತೃತ್ವದಲ್ಲಿ ಈ ಕೃತ್ಯಕ್ಕೆ ಸಂಚು ರೂಪಿಸಿದ್ದು ನಾಗಬನ ಕಲ್ಲು ಧ್ವಂಸಕ್ಕೆ ಪ್ರವೀಣ್ ಮೊಂತೆರೋಗೆ ಸುಪಾರಿಯನ್ನು ಕೊಡಲಾಗಿತ್ತು. ಅದರಂತೆ ಕೋಮು ಗಲೆಭೆ ಸೃಷ್ಟಿಸಿ ಪೊಲೀಸರ ಗಮನ ಬೇರೆಡೆ ಸೆಳೆಯಲು ಯತ್ನ ಮಾಡಿದ್ದರು ಎಂದು ಮಂಗಳೂರು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಕರಾವಳಿಯ ಶಾಂತಿ ಭಂಗ ತಂದಿದ್ದ ಪ್ರಕರಣವನ್ನು ಕಾವೂರು, ಉರ್ವ ಠಾಣಾ ಪೊಲೀಸರು ಸಾಕಷ್ಟು ಶ್ರಮಪಟ್ಟು ಬೇಧಿಸಿದ್ದಾರೆ. ಹೀಗಾಗಿ ಪ್ರಕರಣ ಬೇಧಿಸಿದ ಅಧಿಕಾರಿಗಳಿಗೆ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ 25 ಸಾವಿರ ನಗದು ಬಹುಮಾನ ಘೋಷಿಸಿ ಬಹುಮಾನ ಮೊತ್ತ ಹಸ್ತಾಂತರಿಸಿದ್ದಾರೆ. ಒಟ್ಟಿನಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಿ ಎಲ್ಲರಿಗೂ ಒಂದು ಪಾಠ ಆಗಬೇಕಾಗಿದೆ. ಇದನ್ನೂ ಓದಿ: ಸರ್ಕಾರಿ ಕಚೇರಿ, ಮಾಲ್, ಹೋಟೆಲ್ಗಳಲ್ಲಿ ಕೆಲಸ ಮಾಡೋರಿಗೆ ಎರಡು ಡೋಸ್ ಕಡ್ಡಾಯ: ಆರ್. ಅಶೋಕ್