ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿರುವ ಪ್ರಕರಣ ಪೊಲೀಸರಿಗೆ ಕಬ್ಬಿಣದ ಕಡಲೆಯಾಗಿದೆ.
ದರ್ಶನ್ ಮನೆ ಮೇಲೆ ಕಲ್ಲೇಟು ಹೊಡೆದವನು ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ಮೊಬೈಲ್ ಇದ್ದರೆ ಪೊಲೀಸರು ಪತ್ತೆ ಹಚ್ಚುತ್ತಾರೆ ಎಂದು ಕಿಡಿಗೇಡಿ ಮೊಬೈಲ್ ಬಳಸದೇ ಎಚ್ಚರ ವಹಿಸಿದ್ದಾನೆ. ಟವರ್ ಡಂಪ್ ಲೋಕೇಷನ್ ತೆಗೆದರೂ ಕಲ್ಲು ತೂರಿದವನ ಸುಳಿವು ಸಿಗಲೇ ಇಲ್ಲ.
ಕಲ್ಲು ತೂರಾಟ ನಡೆಸಿದ ಸಮಯದಲ್ಲಿ ಮನೆ ಕೆಲಸದವರು, ಸುತ್ತಮುತ್ತಲ ಕಾರ್ಮಿಕರು, ಪೌರಕಾರ್ಮಿಕರ ಮೊಬೈಲ್ ನೆಟ್ವರ್ಕ್ ಮಾತ್ರ ಸಿಕ್ಕಿದೆ. ಆದರೆ ಅವರನ್ನೆಲ್ಲಾ ವಿಚಾರಣೆ ಮಾಡಿದರೂ ಯಾವುದೇ ಸುಳಿವು ಸಿಗಲಿಲ್ಲ. ಕಲ್ಲು ತೂರಿದ ಸಮಯದಲ್ಲಿ ಯಾವುದೇ ಮೊಬೈಲ್ ಆಕ್ಟೀವ್ ಆಗಿರಲಿಲ್ಲ ಎಂಬುದು ತಿಳಿದುಬಂದಿದೆ.
ಏನಿದು ಪ್ರಕರಣ?
ಮಾರ್ಚ್ 23ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ದರ್ಶನ್ ಮನೆ ಹಾಗೂ ಕಚೇರಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದರು. ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಕಲ್ಲು ತೂರಿ ಎಸ್ಕೇಪ್ ಆಗಿದ್ದರು. ಕಲ್ಲು ತೂರಾಟದಿಂದ ದರ್ಶನ್ ಅವರ ಕಾರಿನ ಗಾಜು ಜಖಂ ಆಗಿತ್ತು. ರಾಜರಾಜೇಶ್ವರಿನಗರ ಪೊಲೀಸರು ಹಾಗೂ ಕೆಂಗೇರಿ ಎಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಈ ಘಟನೆ ನಡೆದಾಗ ದರ್ಶನ್ ಮನೆಯಲ್ಲಿ ಇರಲಿಲ್ಲ. ದರ್ಶನ್ ಗಿರಿನಗರದಲ್ಲಿ ಇರುವ ತಮ್ಮ ಪತ್ನಿ ವಿಜಯಲಕ್ಷ್ಮಿ ಫ್ರೆಸ್ಟಿಜ್ ಅಪಾರ್ಟ್ಮೆಂಟ್ನಲ್ಲಿ ಇದ್ದರು. ಕಲ್ಲು ತೂರಾಟ ನಡೆಸಿದ್ದ ವೇಳೆ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಮಾತ್ರ ಇದ್ದು, ಪೊಲೀಸರಿಗೆ ದೂರು ನೀಡಿದ್ದರು.