ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಪಿಸ್ತೂಲ್ ಸದ್ದು ಮಾಡಿದ್ದು, ರೌಡಿಶೀಟರ್ಗಳ ಮೇಲೆ ಜಾಲಹಳ್ಳಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
ಆರೋಪಿಗಳಾದ ವಿಜಯ್ ದಡಿಯಾ ವಿಜಿ ಹಾಗು ಮೋರಿ ಅನಿ ಮೇಲೆ ಜಾಲಹಳ್ಳಿ ಇನ್ಸ್ಪೆಕ್ಟರ್ಗಳಾದ ಯಶವಂತ್ ಹಾಗೂ ಪಿಎಸ್ಐ ಲೇಪಾಕ್ಷಿ ಫೈರಿಂಗ್ ನಡೆಸಿದ್ದಾರೆ. ದಡಿಯಾ ವಿಜಿ ನಂದಿನಿ ಲೇಔಟ್ನ ರೌಡಿಶೀಟರ್ ಆಗಿದ್ದು, ಸುಮಾರು 15 ಪ್ರಕರಣದಲ್ಲಿ ಭಾಗಿಯಾಗಿದ್ದನು. ಅಲ್ಲದೆ ಇಬ್ಬರು ಹಲವು ಪ್ರಕರಣದಲ್ಲಿ ಬೇಕಾಗಿದ್ದರು.
ಕಳೆದ ವಾರ ವಿಜಿ ಹಾಗೂ ಅನಿ ಸರಗಳ್ಳತನ ಮಾಡಿದ್ದರು. ಅಲ್ಲದೆ ಸರಗಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆರೋಪಿಗಳು ಮುಂಜಾನೆ ನಂದಿನಿ ಲೇಔಟ್ನ ಕೂಲಿನಗರದಲ್ಲಿ ಅಡಗಿಕೊಂಡಿದ್ದರು. ಹಾಗಾಗಿ ಇನ್ಸ್ಪೆಕ್ಟರ್ ಯಶವಂತ್ ಅಂಡ್ ಟೀಂ ಆರೋಪಿಗಳ ಬಂಧನಕ್ಕೆ ತೆರಳಿದ್ದರು.
ಬಂಧನಕ್ಕೆ ತೆರಳಿದ್ದ ವೇಳೆ ಆರೋಪಿಗಳು ಪೊಲೀಸ್ ಸಿಬ್ಬಂದಿ ಶ್ರೀನಿವಾಸ್ ಮೂರ್ತಿ ಮತ್ತು ನರೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ಯಶವಂತ್ ಮತ್ತು ಪಿಎಸ್ ಐ ಲೇಪಾಕ್ಷಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗಾಯಾಳು ಆರೋಪಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.