ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೊ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಮುರುಘಾ ಶ್ರೀಗಳನ್ನು ನಸುಕಿನಲ್ಲಿ ಪೊಲೀಸರು ಬಂಧನಕ್ಕೊಳಪಡಿಸಿದರು. ನಂತರ ಅವರಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಕೊಡಿಸಲಾಯಿತು. ನಸುಕಿನ 2.25ಕ್ಕೆ ಆಸ್ಪತ್ರೆಯಿಂದ ಹೊರಟ ಪೊಲೀಸರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕೋಮಲಾ ಅವರ ಮುಂದೆ ಹಾಜರುಪಡಿಸಿದರು. ಶರಣರ ಪರ ಜಾಮೀನು ಕೋರಿ ಸ್ಥಳದಲ್ಲೇ ಅರ್ಜಿ ಸಲ್ಲಿಸಿದರು. ಅರ್ಜಿ ತಿರಸ್ಕರಿಸಿದ ನ್ಯಾಯಾಧೀಶರು ಶುಕ್ರವಾರ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಸೂಚಿಸಿ, ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಇದನ್ನೂ ಓದಿ: ಮಠದಲ್ಲೇ ಮುರುಘಾಶ್ರೀ ಬಂಧನ
ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಚಿತ್ರದುರ್ಗದ ಎಸ್ಪಿ ಕೆ.ಪರಶುರಾಮ್, ದಸ್ತಗಿರಿ ಮಾಡಿ ವೈದ್ಯಕೀಯ ಪರೀಕ್ಷೆ ನಡೆಸಿ ಶ್ರೀಗಳನ್ನು ನ್ಯಾಯಧೀಶರ ಮುಂದೆ ಹಾಜರು ಪಡಿಸಲಾಗಿತ್ತು. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಒಬ್ಬ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದೇವೆ. ಉಳಿದವರನ್ನು ಕೂಡ ವಿಚಾರಣೆ ನಡೆಸುತ್ತೇವೆ. ಸಾಕ್ಷ್ಯಾಧಾರ ಕಲೆ ಹಾಕಲು ವಿಳಂಬ ಆಯಿತು. ಆದ್ದರಿಂದ ಬಂಧನವೂ ವಿಳಂಬವಾಯಿತು. ಮುರುಘಾ ಶ್ರೀಗಳು ಸದ್ಯಕ್ಕೆ ಇಲ್ಲೇ ಇರುತ್ತಾರೆ. ಶ್ರೀಗಳ ಆರೋಗ್ಯ ಕುರಿತ ವರದಿಯನ್ನು ವೈದ್ಯರು ನ್ಯಾಯಲಯದ ಮುಂದೆ ನೀಡುತ್ತಾರೆ. ಅದನ್ನು ನೋಡಿ ನ್ಯಾಯಾಧೀಶರು ವಿಚಾರಣೆ ನಡೆಸುತ್ತಾರೆ ಎಂದು ತಿಳಿಸಿದ್ದಾರೆ.
ಇಂದು ಶ್ರೀಗಳ ಪರ 10 ಗಂಟೆ ನಂತರ ಕೋರ್ಟ್ಗೆ ವಕೀಲರು ಜಾಮೀನಿ ಕೋರಿ ಅರ್ಜಿ ಸಲ್ಲಿಸಲಿದ್ದಾರೆ. ಅರೆಸ್ಟ್ ಆದ್ದರಿಂದ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ. ಈ ನಿಟ್ಟಿನಲ್ಲಿ ರೆಗ್ಯುಲರ್ ಬೇಲ್ಗಾಗಿ ಅರ್ಜಿ ಸಲ್ಲಿಸಲಿದ್ದಾರೆ. ಸದ್ಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇವತ್ತು ತನಿಖಾಧಿಕಾರಿಯಿಂದ ಪೊಲೀಸ್ ಕಸ್ಟಡಿಗೆ ಕೇಳಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಶ್ರೀಗಳ ಡೀಟೈಲ್ ವಿಚಾರಣೆ ಅವಶ್ಯಕತೆಯಿದೆ. ಇದನ್ನೂ ಓದಿ: ಮುರುಘಾಶ್ರೀ ಪೋಕ್ಸೊ ಪ್ರಕರಣದಲ್ಲಿ ಸರ್ಕಾರ ಎಂಟ್ರಿ ಕೊಡಲ್ಲ: ಆರ್.ಅಶೋಕ್
ಸ್ಥಳ ಮಹಜರ್ ಮಾಡಬೇಕು, ಅಲ್ಲದೆ ಆರೋಪಿಯ ಹೇಳಿಕೆ ದಾಖಲಿಸಬೇಕು. ಪೋಕ್ಸೊ ಕೇಸ್ನಡಿ ಆರೋಪಿಯ ಕೃತ್ಯದ ಸ್ಥಳ ಸೇರಿದಂತೆ ಕೆಲವು ಸ್ಥಳಗಳ ಮಹಜರು ಅವಶ್ಯಕತೆ ಇದೆ. ಸಾಕ್ಷಿಗಳನ್ನ ಸಂಗ್ರಹಿಸಬೇಕಿದೆ. ಹೀಗಾಗಿ ಶ್ರೀಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು ಅಂತಾ ಪೊಲೀಸರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.