ನವದೆಹಲಿ: ವಯಸ್ಸಾದ ಮೇಲೆ ವೃದ್ಧ ತಂದೆ, ತಾಯಿಯನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳದೆ ಬೀದಿಯಲ್ಲಿ ಬಿಟ್ಟು, ನಿರ್ಲಕ್ಷಿಸಿ ಶೋಷಿಸುವ ಮಕ್ಕಳ ಮೇಲೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈಗಿರುವ ಕಾನೂನನ್ನು ಬಲಗೊಳಿಸಿ ಹೊಸ ಕರಡನ್ನು ರೂಪಿಸಿದೆ.
2007ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹೆತ್ತವರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯ್ದೆಯನ್ನು ತಿದ್ದುಪಡಿ ಮಾಡಿತ್ತು. ಇದರಲ್ಲಿ ಹಿರಿಯರನ್ನು ಶೋಷಿಸುವವರು, ಉಪೇಕ್ಷಿಸುವವರಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಮೂರು ತಿಂಗಳಿನಿಂದ ಆರು ತಿಂಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಒಳಗೊಂಡಿತ್ತು.
ಹೆತ್ತವರನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳದೆ ನಿರ್ಲಕ್ಷಿಸುವ ಮಕ್ಕಳ ಮೇಲೆ ಕ್ರಮ ತೆಗೆದುಕೊಳ್ಳುವ ಕಾನೂನನ್ನು ಬಲಪಡಿಸಿ, ಹಿರಿಯರಿಗೆ ನೆಮ್ಮದಿಯನ್ನು ನೀಡುವುದು ಮೋದಿ ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ. ಆದ್ದರಿಂದ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ ಈ ಆದ್ಯತೆಗೆ ಒತ್ತು ನೀಡಲು ನಿರ್ಧರಿಸಿದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ತಿದ್ದುಪಡಿಗಳನ್ನು ಗಮನಿಸಿದ ಪ್ರಧಾನಿ ಕಚೇರಿ, ಅದರ ಕಾರ್ಯಸಾಧುತ್ವ ಮತ್ತು ಪರಿಣಾಮವನ್ನು ಹೆಚ್ಚಿಸಲು ಮೂರನೇ ಸಂಸ್ಥೆಯೊಂದರ ಸಹಾಯ ಪಡೆಯಲಿದ್ದು, ಆ ಸಂಸ್ಥೆಗೆ ಈ ಬಗ್ಗೆ ಪರಿಶೀಲನೆಗೆ ಒಪ್ಪಿಸಲು ಮುಂದಾಗಿದೆ. ಈ ಮೂಲಕ ಈಗಿರುವ ಕಾನೂನನ್ನು ಇನ್ನಷ್ಟು ಬಲಗೊಳಿಸುವ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಖುದ್ದು ಪ್ರಧಾನಿ ಕಚೇರಿಯೇ ಮಧ್ಯಪ್ರವೇಶಿಸಿದೆ. ಹಿಂದಿನ ಕಾನೂನಿನ ಪರಿಣಾಮ ಹೇಗಿದೆ? ಇದರಿಂದ ವೃದ್ಧ ಪೋಷಕರಿಗೆ ಯಾವ ರೀತಿ ಸಹಾಯವಾಗಿದೆ? ಹೀಗೆ ಹಲವು ವಿಚಾರಗಳ ಬಗ್ಗೆ ಮೂರನೇ ಸಂಸ್ಥೆಯಿಂದ ಪರಿಶೀಲನೆಗೆ ಸೂಚಿಸಲಿದೆ.
ಇಲ್ಲಿಯವರೆಗೆ ಹೆತ್ತವರನ್ನು ನೋಡಿಕೊಳ್ಳುವ ಮಕ್ಕಳ ವ್ಯಾಖ್ಯಾನದಡಿ ಕೇವಲ ಪುತ್ರರು, ಪುತ್ರಿಯರು ಮತ್ತು ಮೊಮ್ಮಕ್ಕಳು ಬರುತ್ತಿದ್ದರು. ಆದರೆ ಮುಂದೆ ಅದನ್ನು ಮಕ್ಕಳು/ದತ್ತು ಮಕ್ಕಳು, ಅಳಿಯ, ಸೊಸೆ, ಮೊಮ್ಮಕ್ಕಳು ಮತ್ತು ಅಪ್ರಾಪ್ತರಿಗೂ ವಿಸ್ತರಿಸಲಾಗಿದೆ.
ಅಲ್ಲದೆ ಪೋಷಕರ ಜೀವನ ನಿರ್ವಹಣೆಗೆ ಗರಿಷ್ಠ ಮೊತ್ತವನ್ನು ತಿಂಗಳಿಗೆ 10,000 ರೂ. ಎಂದು ನಿಗದಿಪಡಿಸಲಾದೆ. ಆದರೆ ಈ ಮೊತ್ತ ಪ್ರಕರಣದಿಂದ ಪ್ರಕರಣಕ್ಕೆ ಬದಲಾಗಬಹುದು. ಯಾಕೆಂದರೆ ಒಳ್ಳೆಯ ಕೆಲಸದಲ್ಲಿದ್ದು, ಹೆಚ್ಚು ಸಂಬಳ ಗಳಿಸುವವರು ಹೆಚ್ಚು ಪಾವತಿ ಮಾಡಬೇಕಾಗುತ್ತದೆ.
ಹಾಗೆಯೇ ಹಿರಿಯ ನಾಗರಿಕರ ಪಾಲನಾ ಕೇಂದ್ರಗಳು, ಡೇ-ಕೇರ್ ಸೆಂಟರ್ ಗಳು, ವೃದ್ಧಾಶ್ರಮಗಳ ಗುಣಮಟ್ಟವನ್ನು ಹೆಚ್ಚಳವನ್ನು ಕಡ್ಡಾಯ ಮಾಡಲಾಗಿದೆ. ಜೊತೆಗೆ ಕ್ಯಾಲಿಟಿ ಕಂಟ್ರೋಲ್ ಆಫ್ ಇಂಡಿಯಾ ರೀತಿಯ ಸಂಸ್ಥೆಗಳು ವೃದ್ಧಾಶ್ರಮಗಳು, ಡೇ-ಕೇರ್ ಸೆಂಟರ್ ಗಳ ಪರಿಶೀಲನೆ ನಡೆಸಿ, ಅವುಗಳಿಗೆ ರೇಟಿಂಗ್ ಕೊಟ್ಟು ಗುಣಮಟ್ಟ ತಿಳಿಯಲು ಮುಂದಾಗಿದೆ.