ಹಾಸನ: ಪ್ರಧಾನಮಂತ್ರಿಯೇ ದೀಪ ಬೆಳಗಿಸಿ ಪೂಜೆ ಮಾಡಬಹುದು. ಆದರೆ ಕುಮಾರಸ್ವಾಮಿ ಪೂಜೆ ಮಾಡಬಾರದೇ ಎಂದು ಸಚಿವ ಹೆಚ್.ಡಿ.ರೇವಣ್ಣ ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.
ಸಿಎಂ ಕುಮಾರಸ್ವಾಮಿ ಮಗನಿಗಾಗಿ ಪೂಜೆಗೆ ಹೋಗಿದ್ದಾರೆ ಅಂತ ಜಗದೀಶ್ ಶೆಟ್ಟರ್ ಆರೋಪಕ್ಕೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ಪ್ರಧಾನಮಂತ್ರಿಯೇ ದೀಪ ಬೆಳಗಿ ಪೂಜೆ ಮಾಡ್ತಾರೆ ಆದರೆ ಕುಮಾರಸ್ವಾಮಿ ಪೂಜೆ ಮಾಡಬಾರದಾ? ಮಗನಿಗಾಗಿ ಅವರು ಪೂಜೆ ಮಾಡಿದರೆ ತಪ್ಪೇನಿದೆ? ಟಂಪಲ್ ರನ್ ಅಂತಾರೆ ಯಾಕೆ ನಾವು ಟೆಂಪಲ್ ಗೆ ಹೋಗಬಾರದೇ ಎಂದು ವಿರೋಧ ಪಕ್ಷದವರಿಗೆ ಪ್ರಶ್ನೆ ಹಾಕಿದ್ದಾರೆ.
ಕಾಂಗ್ರೆಸ್ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಚರ್ಚೆ ವಿಚಾರ ಪ್ರತಿಕ್ರಿಯಿಸಿ, ಈ ಬಗ್ಗೆ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನೋಡಿಕೊಳ್ಳುತ್ತಾರೆ. ಫಲಿತಾಂಶದ ಬಳಿಕ ಸರ್ಕಾರಕ್ಕೆ ಏನೂ ಆಗುವುದಿಲ್ಲ. ಯಾರೂ ತಲೆಕೆಡಿಸಿಕೊಳ್ಳಬೇಡಿ. ಬಿಜೆಪಿಯವರಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ. ಅವರಿಗೆ ಅಧಿಕಾರದ ದಾಹ ಹೆಚ್ಚಾಗಿದೆ ಎಂದು ಟಾಂಗ್ ನೀಡಿದರು.
ಜಗದೀಶ್ ಶೆಟ್ಟರ್ ಮತ್ತು ಯಡಿಯೂರಪ್ಪರವರು ಬರಗಾಲ ನಿಭಾಯಿಸಬೇಕು ಅಂತಾರೆ. ಮತ್ತೊಂದು ಕಡೆ ಕೆಲಸವಾಗಬಾರದು ಎಂದು ಚುನಾವಣಾ ಆಯೋಗಕ್ಕೆ ನೀತಿ ಸಂಹಿತೆ ಎಂದು ಅರ್ಜಿ ಕೊಡುತ್ತಿದ್ದಾರೆ. ಬರಗಾಲ ನಿಭಾಯಿಸಲು ಹಾಸನ ಜಿಲ್ಲೆಯಲ್ಲಿ 8 ಕೋಟಿ ಹಣ ಪಿಡಿ ಖಾತೆಯಲ್ಲಿದೆ. ಜಿಲ್ಲಾಧಿಕಾರಿ ಈವರೆಗೆ ಬರ ನಿಭಾಯಿಸಲು ಒಂದೇ ಒಂದು ಪೈಸೆ ಹಣ ಬಿಡುಗಡೆ ಮಾಡಿಲ್ಲ. ಜಿಲ್ಲಾಧಿಕಾರಿ ಯಾವುದೇ ಹಣ ಬಂದಿಲ್ಲ ಎನ್ನುತ್ತಿದ್ದಾರೆ. ವಿಪಕ್ಷದವರು ಒಂದುಕಡೆ ಅರ್ಜಿ ಬರೆಯೋದು ಮತ್ತೊಂದು ಕಡೆ ಬರ ನಿಭಾಯಿಸಿಲ್ಲ ಅಂತಾರೆ. ಹೀಗಿರುವಾಗ ಬರ ನಿಭಾಯಿಸುವುದು ಹೇಗೆ ಎಂದು ಮುಖ್ಯ ಚುನಾವಣಾ ಆಯುಕ್ತರೇ ಹೇಳಬೇಕು. ಬರ ನಿರ್ವಹಣೆ ಮಾಡುವ ಬಗ್ಗೆ ಚುನಾವಣಾ ಆಯುಕ್ತರು ಮತ್ತು ಮುಖ್ಯ ಕಾರ್ಯದರ್ಶಿ ಗಮನಹರಿಸಬೇಕು. ಜಿಲ್ಲಾಧಿಕಾರಿ ಅವರ ಕರ್ತವ್ಯ ಮಾಡಬೇಕು ಎಂದರು.