ಪ್ರಧಾನಿ ಭದ್ರತೆಯಲ್ಲಿ ಲೋಪ – ನಿವೃತ್ತ ಜಡ್ಜ್‌ ಇಂದೂ ಮಲ್ಹೋತ್ರಾ ನೇತೃತ್ವದ ಸಮಿತಿ ರಚನೆ

Public TV
2 Min Read
indu malhotra

ನವದೆಹಲಿ: ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಪಂಜಾಬ್‌ಗೆ ಆಗಮಿಸಿದ್ದಾಗ ಪ್ರಧಾನಿ ಮೋದಿ ಅವರ ಭದ್ರತೆ ಲೋಪ ಪ್ರಕರಣಕ್ಕೆ  ಸಂಬಂಧಿಸಿದಂತೆ ತನಿಖೆ ನಡೆಸಲು ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ಸುಪ್ರೀಂ ಕೋರ್ಟ್‌ ರಚಿಸಿದೆ.

ಈ ಕುರಿತು ಬುಧವಾರ ಮಾಹಿತಿ ನೀಡಿದ ಸುಪ್ರೀಂ ಕೋರ್ಟ್‌, ರಾಷ್ಟ್ರೀಯ ತನಿಖಾ ಸಂಸ್ಥೆ (ಐಎನ್‌ಎ) ಹಾಗೂ ಪಂಜಾಬ್‌ ಪೊಲೀಸರು ಸಹ ತನಿಖೆಯ ಭಾಗವಾಗಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತಾ ವೈಫಲ್ಯ – ನಿವೃತ್ತ ನ್ಯಾಯಾಧೀಶರ ಸಮಿತಿಯಿಂದ ತನಿಖೆ

Supreme Court

ಇಲ್ಲಿ ಏಕಪಕ್ಷೀಯವಾಗಿ ತನಿಖೆ ನಡೆಯುವ ಪ್ರಶ್ನೆಯೇ ಬರುವುದಿಲ್ಲ. ನಮಗೆ ಸ್ವತಂತ್ರವಾಗಿ ನಡೆಸಿದ ತನಿಖೆ ಅಗತ್ಯವಿದೆ. ಸಮಿತಿಯು ತನಿಖಾ ವರದಿಯನ್ನು ಆದಷ್ಟು ಬೇಗ ಸಲ್ಲಿಸಲಿದೆ ಎಂದು ಕೋರ್ಟ್‌ ಹೇಳಿದೆ.

ಪ್ರಧಾನಿಗೆ ಭದ್ರತಾ ವೈಫಲ್ಯಕ್ಕೆ ಕಾರಣವೇನು, ಅದಕ್ಕೆ ಯಾರು ಹೊಣೆಗಾರರು, ಭವಿಷ್ಯದಲ್ಲಿ ಇಂತಹ ಲೋಪಗಳನ್ನು ತಡೆಗಟ್ಟಲು ಯಾವ ಬಗೆಯ ರಕ್ಷಣಾತ್ಮಕ ಕ್ರಮಗಳ ಅಗತ್ಯವಿದೆ ಎಂಬುದರ ಬಗ್ಗೆ ತನಿಖೆ ನಡೆಸಿ ಸಮಿತಿಯು ವರದಿ ನೀಡಲಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಭದ್ರತಾ ವೈಫಲ್ಯ -150 ಅಪರಿಚಿತರ ವಿರುದ್ಧ ಎಫ್‌ಐಆರ್‌

NARENDRA MODI CAR

ತನಿಖಾ ಸಮಿತಿಯಲ್ಲಿ ಎನ್‌ಐಎ ಮಹಾನಿರ್ದೇಶಕ, ಚಂಡೀಗಢ ಪೊಲೀಸ್‌ ಮುಖ್ಯಸ್ಥ, ಪಂಜಾಬ್‌ನ ಎಡಿಜಿಪಿ ಹಾಗೂ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರರ್‌ ಜನರಲ್‌ ಅವರು ಸದಸ್ಯರಾಗಿದ್ದಾರೆ.

ಕಳೆದ ವಾರ ಪ್ರಧಾನಿ ಮೋದಿ ಅವರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಪಂಜಾಬ್‌ಗೆ ಭೇಟಿ ನೀಡಿದ್ದರು. ಫಿರೋಜ್‌ಪುರ ಬಳಿ ರಸ್ತೆ ಮಾರ್ಗವಾಗಿ ತೆರಳುತ್ತಿದ್ದಾಗ ಪ್ರತಿಭಟನೆ ಕಾರಣದಿಂದಾಗಿ ಸುಮಾರು 20 ನಿಮಿಷಗಳ ಕಾಲ ರಸ್ತೆಯಲ್ಲಿ ಪ್ರಧಾನಿ ಸಿಲುಕಿದ್ದರು. ಇದು ಭದ್ರತಾ ಲೋಪ ಎಂದು ಕೇಂದ್ರ ಗೃಹ ಸಚಿವಾಲಯ ಗಂಭೀರ ಆರೋಪ ಮಾಡಿತ್ತು. ನಂತರ ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿತು. ಇದನ್ನೂ ಓದಿ: ಪ್ರಧಾನಿ ಮೋದಿ ಪ್ರಯಾಣದ ಮಾಹಿತಿಯನ್ನು ಸಂರಕ್ಷಿಸಲು ಸುಪ್ರೀಂಕೋರ್ಟ್ ಸೂಚನೆ

NARENDRA MODI SECURITY LAPS

ಪ್ರಕರಣದ ತನಿಖೆಗೆ ಪಂಜಾಬ್‌ ಸರ್ಕಾರ ಹಾಗೂ ಕೇಂದ್ರ ಗೃಹ ಸಚಿವಾಲಯ ಪ್ರತ್ಯೇಕ ಸಮಿತಿ ರಚಿಸಿದ್ದವು. ಆದರೆ ಈ ವಿಚಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. ಈ ಹಿನ್ನೆಲೆಯಲ್ಲಿ ಎರಡೂ ಸಮಿತಿಗಳ ತನಿಖೆಗೆ ಸುಪ್ರೀಂ ತಡೆ ನೀಡಿತು. ಈಗ ಸ್ವತಂತ್ರ ತನಿಖಾ ತಂಡವನ್ನು ಸುಪ್ರೀಂ ಕೋರ್ಟ್‌ ರಚಿಸಿದೆ.

Share This Article
Leave a Comment

Leave a Reply

Your email address will not be published. Required fields are marked *