ಪಂಜಾಬ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭದಲ್ಲಿ ಫ್ಲೈಓವರ್ ಬಳಿ ಪ್ರಧಾನಿ ಮೋದಿ ಅವರ ಕಾರು ಸಿಲುಕಿದ ವಿಚಾರ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಇದು ಬಹುದೊಡ್ಡ ಭದ್ರತಾ ಲೋಪ ಎಂದು ಗಂಭೀರ ಆರೋಪ ಮಾಡಲಾಗಿದೆ. ಈ ವಿಚಾರವಾಗಿ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಅಷ್ಟಕ್ಕೂ ಪ್ರಧಾನಿಗಳ ಭದ್ರತೆಯ ಪೂರ್ವ ಸಿದ್ಧತೆ ಹೇಗಿರುತ್ತೆ, ಅದರ ಹೊಣೆಗಾರಿಕೆ ಯಾರದು, ಪಂಜಾಬ್ನಲ್ಲಿ ನಡೆದದ್ದಾದರೂ ಏನು ಎಂಬ ನಾನಾ ಪ್ರಶ್ನೆಗಳು ಮೂಡುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.
ಪ್ರಧಾನಿಗಳ ಭದ್ರತೆಯ ಪ್ಲಾನ್ ಹೇಗಿರುತ್ತೆ?
ಬ್ಲೂ ಬುಕ್: ಇದು ಗಣ್ಯರ ಭದ್ರತೆ ಕುರಿತ ಮಾರ್ಗಸೂಚಿಗಳ ಸಂಗ್ರಹವಾಗಿದೆ. ಪ್ರಧಾನಿಗಳ ಭದ್ರತೆಯನ್ನು ಹೇಗೆ ಕೈಗೊಳ್ಳಬೇಕು ಎಂಬ ನಿಯಮಗಳನ್ನು ‘ಬ್ಲೂ ಬುಕ್’ನಲ್ಲಿ ನಮೂದಿಸಲಾಗುತ್ತದೆ. ಈ ಯೋಜನೆಯು ಕೇಂದ್ರೀಯ ಸಂಸ್ಥೆಗಳು ಮತ್ತು ರಾಜ್ಯ ಪೊಲೀಸ್ ಪಡೆಗಳನ್ನೂ ಒಳಗೊಂಡಿರುತ್ತದೆ. ಭದ್ರತೆಯ ಒಟ್ಟು ಜವಾಬ್ದಾರಿಯನ್ನು ವಿಶೇಷ ಭದ್ರತಾ ದಳ (ಎಸ್ಪಿಜಿ) ಹೊತ್ತಿರುತ್ತದೆ. ಇದನ್ನೂ ಓದಿ: ಪ್ರಧಾನಿ ಕಾರು ಸಿಲುಕಿದ್ದ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರ ದಂಡು – ವೀಡಿಯೋ ವೈರಲ್
ಪ್ರಧಾನಿಯು ಸಭೆಯಲ್ಲಿ ಭಾಗವಹಿಸಿದರೆ, ರಸ್ತೆ-ವಿಮಾನದಲ್ಲಿ ಪ್ರಯಾಣಿಸಿದರೆ ಏನೇನು ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು? ಎಷ್ಟು ಸಿಬ್ಬಂದಿ ನಿಯೋಜಿಸಬೇಕು ಹಾಗೂ ಯಾವ ವಾಹನಗಳನ್ನು ಬಳಸಬೇಕು ಎಂಬುದನ್ನು ಮುಂಚಿತವಾಗಿಯೇ ಪ್ರತ್ಯೇಕ ಮಾರ್ಗಸೂಚಿಗಳನ್ನು ರಚಿಸಿಕೊಳ್ಳಲಾಗುತ್ತದೆ. ಅದರನ್ವಯ ಎಸ್ಪಿಜಿ ಹಾಗೂ ರಾಜ್ಯ ಪೊಲೀಸ್ ಪಡೆಗಳು ನಿಯಮಗಳನ್ನು ಪಾಲಿಸಬೇಕಿರುತ್ತದೆ.
ಭದ್ರತೆಗಾಗಿ ಸಭೆ
ಪ್ರಧಾನಿಯವರಿಗೆ ಪ್ರಯಾಣ ಸಂದರ್ಭದಲ್ಲಿ ಭದ್ರತೆ ಒದಗಿಸುವ ಸಂಬಂಧ ಸಭೆ ನಡೆಸಿ ಚರ್ಚಿಸಿ ಕ್ರಮವಹಿಸಲಾಗುತ್ತದೆ. ಪ್ರಧಾನಿ ಅವರು ಹೇಗೆ (ವಾಯು, ರಸ್ತೆ) ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡುತ್ತಾರೆ ಕಾರು ಅಥವಾ ಹೆಲಿಕಾಪ್ಟರ್ನಿಂದ ಇಳಿದು ಕಾರ್ಯಕ್ರಮ ಸ್ಥಳಕ್ಕೆ ಹೇಗೆ ತಲುಪುತ್ತಾರೆ ಎಂಬುದನ್ನೂ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇದನ್ನು ಯೋಜಿಸುವಾಗ ಕೇಂದ್ರೀಯ ಏಜೆನ್ಸಿಗಳು ಮತ್ತು ಸ್ಥಳೀಯ ಗುಪ್ತಚರ ಘಟಕದ ಮಾಹಿತಿಗಳನ್ನೂ ಪರಿಗಣೆಗೆ ತೆಗೆದುಕೊಳ್ಳಲಾಗುತ್ತದೆ. ಪ್ರಧಾನಿ ಪ್ರಯಾಣದ ಮೂರು ದಿನಗಳ ಮುನ್ನವೇ ಈ ಎಲ್ಲಾ ಯೋಜನೆಯನ್ನು ಮಾಡಿಕೊಳ್ಳಲಾಗುತ್ತದೆ.
ಕಾರ್ಯಕ್ರಮ ಸ್ಥಳದ ಭದ್ರತೆ
ಕಾರ್ಯಕ್ರಮ ಸ್ಥಳದಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರ ವ್ಯವಸ್ಥೆ ಮಾಡಲಾಗುತ್ತದೆ. ಬರುವವರನ್ನು ಪರೀಕ್ಷಿಸಲಾಗುವುದು. ವೇದಿಕೆಯ ರಚನಾತ್ಮಕ ಸ್ಥಿರತೆಯನ್ನು ಸಹ ಪರಿಶೀಲಿಸಲಾಗುವುದು. ಸ್ಥಳದಲ್ಲಿ ಅಗ್ನಿ ಸುರಕ್ಷತೆ ಬಗ್ಗೆಯೂ ಪರಿಶೋಧನೆ ಮಾಡಲಾಗುವುದು. ಹವಾಮಾನ ವರದಿಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಇದನ್ನೂ ಓದಿ: ಪ್ರಧಾನಿಗೆ ಭದ್ರತಾ ವೈಫಲ್ಯ – ಸುಪ್ರೀಂ ಮೇಲ್ವಿಚಾರಣೆಯಲ್ಲಿ ತನಿಖೆಗೆ ಮನವಿ, ನಾಳೆ ಮಹತ್ವದ ವಿಚಾರಣೆ
ಕಾರ್ಯಕ್ರಮ ದಿಢೀರ್ ಬದಲಾವಣೆಯಾದರೆ?
ಇದಕ್ಕೂ ಸಹ ಮುಂಚಿತವಾಗಿ ಸೂಕ್ತ ತಯಾರಿ ಮಾಡಲಾಗುತ್ತದೆ. ಪ್ರಧಾನಿಗಳು ಹೆಲಿಕಾಪ್ಟರ್ ಮೂಲಕ ಕಾರ್ಯಕ್ರಮ ಸ್ಥಳ ತಲುಪಲು ಹವಾಮಾನ ಅಡ್ಡಿಯಾದರೆ, ಮುಂಚಿತವಾಗಿಯೇ ರಸ್ತೆ ಮಾರ್ಗವನ್ನು ಆಯ್ಕೆ ಮಾಡಲಾಗಿರುತ್ತದೆ. ರಸ್ತೆ ಮಾರ್ಗ ಸುರಕ್ಷಿತ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಮಾರ್ಗದಲ್ಲಿ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ.
ಹೆಲಿಕಾಪ್ಟರ್ ಮಾರ್ಗ ಏಕೆ ಬದಲಾಗುತ್ತೆ?
ಹೆಲಿಕಾಪ್ಟರ್ ಹಾರಾಡುವಾಗ 1,000 ಮೀಟರ್ ದೂರದ ದಾರಿಯು ಪೈಲಟ್ಗೆ ಕಾಣುವಂತಿರಬೇಕು. ಚಳಿಗಾಲದಲ್ಲಿ ಅಥವಾ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ಗೊತ್ತುಪಡಿಸಿದ ಮಾರ್ಗಗಳಲ್ಲಿ ತೊಂದರೆ ಇದೆ ಎಂದಾಗ ಪ್ರವಾಸ ರದ್ದುಗೊಳಿಸಿ ಮಾರ್ಗ ಬದಲಿಸಲಾಗುತ್ತದೆ. ತಕ್ಷಣ ಅಗತ್ಯ ಸಿದ್ಧತೆಗಳೊಂದಿಗೆ ಪರ್ಯಾಯವಾಗಿ ರಸ್ತೆ ಮಾರ್ಗದಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಲಾಗುತ್ತದೆ. ಚಳಿಗಾಲ ಅಥವಾ ಮಳೆಗಾದಲ್ಲಿ ಹಲವು ಬಾರಿ ಹೆಲಿಕಾಪ್ಟರ್ ಪ್ರಯಾಣ ರದ್ದಾಗುವುದು ಸಾಮಾನ್ಯ. ಹೀಗಾಗಿ ಮೊದಲೇ ಪರ್ಯಾಯ ಮಾರ್ಗದ ಬಗ್ಗೆ ಚರ್ಚೆ ಆಗಿರುತ್ತದೆ
ರಸ್ತೆ ಮಾರ್ಗದಲ್ಲಿ ಭದ್ರತೆ ಹೇಗಿರುತ್ತೆ?
ಇಂತಹ ವೇಳೆ ರಾಜ್ಯ ಪೊಲೀಸರು ಸ್ಥಳೀಯವಾಗಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಸ್ಥಳೀಯ ಪೊಲೀಸರು ಒಪ್ಪಿಗೆ ನೀಡುವವರೆಗೂ ಪ್ರಧಾನಿ ಸಂಚಾರಕ್ಕೆ ಎಸ್ಪಿಜಿ ಅನುಮತಿ ನೀಡುವುದಿಲ್ಲ. ಪ್ರಧಾನಿ ವಾಹನ ಹಾಗೂ ಬೆಂಗಾವಲು ಪಡೆಯನ್ನು ರಾಜ್ಯ ಪೊಲೀಸರ ವಾಹನವು ಮುನ್ನಡೆಸಬೇಕು. ಆಯಾ ಜಿಲ್ಲೆಯ ಎಸ್ಪಿ ದರ್ಜೆಯ ಸಮವಸ್ತ್ರ ಇಲ್ಲದ ಅಧಿಕಾರಿ ಜೊತೆಗಿರಬೇಕು. ಪ್ರಧಾನಿಯು ಶಿಷ್ಟಾಚಾರ ಬದಿಗೊತ್ತಿ ಜನರ ಹತ್ತಿರ ಹೋಗಲು ಬಯಸಿದಾಗ, ಭದ್ರತೆಯ ಅಪಾಯವಿದ್ದಲ್ಲಿ ಎಸ್ಪಿಜಿ ಪ್ರಧಾನಿ ಅವರನ್ನು ತಡೆಯಬಹುದು. ರ್ಯಾಲಿ, ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರಧಾನಿಯನ್ನು ಜನರು ಸುತ್ತುವರಿಯುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಎಚ್ಚರವಹಿಸಬೇಕು. ಇದನ್ನೂ ಓದಿ: ಮೋದಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಇಲಾಖೆ ಕಾರಣ – ಕೇಂದ್ರ ಗೃಹ ಸಚಿವಾಲಯ
ಭದ್ರತೆಯಲ್ಲಿ ಯಾರಿರುತ್ತಾರೆ?
ಗಡಿ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಇಂಡೊ-ಟಿಬೆಟಿಯನ್ ಗಡಿ ಪೊಲೀಸ್ ಪಡೆಗಳಲ್ಲಿರುವ ಉತ್ಕೃಷ್ಟ ಸಾಮಥ್ರ್ಯದ ಯೋಧರನ್ನು ಆಯ್ಕೆ ಮಾಡಲಾಗುತ್ತದೆ. ಅವರಿಗೆ ಕಠಿಣ ತರಬೇತಿ ನೀಡಲಾಗಿರುತ್ತದೆ. ಪ್ರಧಾನಿಗೆ ಭದ್ರತೆ ವೇಳೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತಿರಬೇಕು. ಎಸ್ಪಿಜಿ ಅನುಮತಿ ಇಲ್ಲದೇ ಅವರು ಕರ್ತವ್ಯದಿಂದ ಬಿಡುಗಡೆ ಪಡೆಯುವಂತಿಲ್ಲ.
ಪ್ರಧಾನಿ ಓಡಾಟಕ್ಕೆ ವ್ಯವಸ್ಥಿತ ‘ಕಾರ್ಕೇಡ್’
ಇದನ್ನು ಗೃಹ ಸಚಿವಾಲಯ ವ್ಯವಸ್ಥೆ ಮಾಡುತ್ತದೆ. ಪ್ರಧಾನಿ ಒಬ್ಬರೇ ಭೇಟಿ ನೀಡುವಾಗ ವಾಹನಗಳ ಸಂಖ್ಯೆ 8 ಮೀರಬಾರದು. ಪ್ರಧಾನಿ ಜೊತೆಗೆ ಸಂಗಾತಿ, ಗಣ್ಯರಿದ್ದರೆ ವಾಹನಗಳ ಸಂಖ್ಯೆ ಹೆಚ್ಚಿಸಬಹುದು. ಪೈಲಟ್ ಕಾರ್ (ಕಾರ್ಕೇಡ್ ಮುಂಭಾಗ ಇರುತ್ತೆ), ಟೆಕ್ನಿಕಲ್ ಕಾರ್ (ನೆಟ್ವರ್ಕ್ ಜಾಮರ್ ಮತ್ತಿತರ ತಾಂತ್ರಿಕ ಉಪಕರಣ ಹೊಂದಿರುತ್ತದೆ), ರೈಡರ್ಸ್ (ಪ್ರಧಾನಿ ಕಾರು ಚಲಿಸುವ ನಾಲ್ಕು ದಿಕ್ಕುಗಳಿಗೂ ಒಂದೊಂದು ಕಾರು), ಫ್ಲ್ಯಾಗ್ ಕಾರ್ (ಪ್ರಧಾನಿ ಸಾಗುವ ಕಾರು), ಅಂಬುಲೆನ್ಸ್ (ಪ್ರಧಾನಿಗೆ ಅಗತ್ಯ ಚಿಕಿತ್ಸೆಗೆ), ಟೇಲ್ ಕಾರ್ (ಕಾರ್ಕೇಡ್ ವ್ಯವಸ್ಥೆಯ ಕೊನೆಯ ಕಾರು). ಹೀಗೆ ವ್ಯವಸ್ಥೆ ಮಾಡಲಾಗಿರುತ್ತದೆ. ಇದು ಪ್ರಧಾನಿ ಅವರ ಎಲ್ಲ ರಾಜ್ಯಗಳ ಪ್ರವಾಸಕ್ಕೂ ಅನ್ವಯಿಸುತ್ತದೆ.