ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ನ (UAE) ಮೊದಲ ಹಿಂದೂ ದೇವಾಲಯ ಸ್ವಾಮಿನಾರಾಯಣ್ ಮಂದಿರದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ತೆರಳಿದ್ದಾರೆ. ಇಂದು (ಮಂಗಳವಾರ) ಅಬುಧಾಬಿಯ (Abu Dhabi) ಜಾಯೆದ್ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ಆಯೋಜಿಸಲಾದ ಅಹ್ಲಾನ್ ಮೋದಿ ಕಾರ್ಯಕ್ರಮದಲ್ಲಿ ಭಾರತೀಯ ಅಭಿಮಾನಿಗಳತ್ತ ಕೈಬೀಸಿ ಮಾತನಾಡಿದ ಪ್ರಧಾನಿ ಮೋದಿ, `ಭಾರತ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ’ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ್ದಾರೆ.
ಅಲ್ಲದೇ ಮಲಯಾಳಂ, ತಮಿಳು, ಕನ್ನಡದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, 10 ವರ್ಷದಲ್ಲಿ ಇದು ನನ್ನ 7ನೇ ಯಾತ್ರೆ ಎಂದು ಹೇಳಿಕೊಂಡಿದ್ದಾರೆ. ಮುಂದುವರಿದು ಮಾತನಾಡಿದ ಅವರು, ಭಾರತ-ಯುಎಇ ಪರಸ್ಪರರ ಪ್ರಗತಿಯಲ್ಲಿ ಪಾಲುದಾರರಾಗಿದ್ದೇವೆ. ಈ ಸಂಬಂಧದಿಂದ ಅಭೂತಪೂರ್ವ ಪ್ರಗತಿಯನ್ನು ನಾವು ಸಾಧಿಸುತ್ತೇವೆ. ಈ ಮೂಲಕ ತಮ್ಮ ಮೂರನೇ ಅವಧಿಯಲ್ಲಿ ಭಾರತವನ್ನು ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಭರವಸೆ ನೀಡಿದ್ದಾರೆ. 2015 ರಲ್ಲಿ ನಾನು ಅವರಿಗೆ (ಶೇಖ್ ಮೊಹಮ್ಮದ್ ಬಿನ್ ಜಾಯೆದ್) ಎಲ್ಲರ ಪರವಾಗಿ ಅಬುಧಾಬಿಯಲ್ಲಿ ದೇವಾಲಯವನ್ನು ನಿರ್ಮಿಸುವ ಪ್ರಸ್ತಾಪವನ್ನು ಪ್ರಸ್ತುತಪಡಿಸಿದ್ದೆ. ಅವರು ತಕ್ಷಣವೇ ಅದಕ್ಕೆ ಹೌದು ಎಂದು ಹೇಳಿದ್ದರು. ಈಗ ಈ ಭವ್ಯವಾದ ದೇವಾಲಯವನ್ನು ಉದ್ಘಾಟಿಸುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಅಬುಧಾಬಿಯಲ್ಲಿ ಯಕ್ಷಗಾನ ವೇಷಧಾರಿಗಳಿಂದ ಮೋದಿಗೆ ಸ್ವಾಗತ
ಪ್ರವಾಸದ ವೇಳೆ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ. ನಿಮ್ಮ ಬೆಂಬಲವಿಲ್ಲದೇ ಇದ್ದಿದ್ದರೆ ಇಲ್ಲಿ ದೇವಾಲಯದ ನಿರ್ಮಾಣವು ಸಾಧ್ಯವಾಗುತ್ತಿರಲಿಲ್ಲ. ಇದಕ್ಕಾಗಿ ನಾನು ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಇಲ್ಲಿಗೆ ಬಂದಾಗಲೆಲ್ಲ ನಾನು ನನ್ನ ಕುಟುಂಬವನ್ನು ಭೇಟಿಯಾಗಲು ಬಂದಿದ್ದೇನೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ ಎಂದರು.
ಸ್ವಾಮಿನಾರಾಯಣ್ ದೇವಾಲಯದ ವಿಶೇಷತೆ: ಪಶ್ಚಿಮ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ದೇವಾಲಯ ಇದಾಗಿದ್ದು, 108 ಅಡಿ ಎತ್ತರ, 262 ಅಡಿ ಉದ್ದ, 180 ಅಡಿ ಅಗಲವಿದ್ದು, 402 ಸ್ತಂಭಗಳನ್ನು ದೇವಾಲಯ ಹೊಂದಿದೆ. ರಾಜಸ್ಥಾನದ ಗುಲಾಬಿ ಕಲ್ಲು, ಇಟಾಲಿಯನ್ ಮಾರ್ಬಲ್ ಬಳಕೆ ಮಾಡಿ ಭಾರತದಲ್ಲಿ ಶಿಲ್ಪಗಳ ಕೆತ್ತನೆ ಮಾಡಲಾಗಿದ್ದು, ಯುಎಇಗೆ ಕೊಂಡೊಯ್ದು ಜೋಡಣೆ ಮಾಡಲಾಗಿದೆ.
2015ರಲ್ಲಿ ಮೋದಿ ಪ್ರವಾಸದ ವೇಳೆ ದೇಗುಲಕ್ಕೆ 13.5 ಎಕರೆ ಜಾಗವನ್ನು ಅಬುಧಾಬಿ ದೊರೆ ದಾನ ನೀಡಿದ್ದರು. 2019ರಲ್ಲಿ ಯುಎಇ ಸರ್ಕಾರದಿಂದ ಮತ್ತೊಮ್ಮೆ 13.5 ಎಕರೆ ದಾನ ನೀಡಲಾಗಿತ್ತು. ಒಟ್ಟು 27 ಎಕರೆ ಪ್ರದೇಶದಲ್ಲಿ ಅತಿದೊಡ್ಡ ಭವ್ಯ ಮಂದಿರ ನಿರ್ಮಾಣವಾಗಿದ್ದು ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.
ಯುಎಇಯ ಏಳು ಎಮಿರೆಟ್ ಸಂಕೇತಿಸಲು ಮಂದಿರಕ್ಕೆ ಏಳು ಶಿಖರ, ವಿಶೇಷ ಫಲಕಗಳಲ್ಲಿ ರಾಮಾಯಣ, ಮಹಾಭಾರತ, ಶಿವಪುರಾಣ, ಭಾಗವತವನ್ನು ಬರೆಸಲಾಗಿದೆ. ಮಂದಿರದ ಕೆಳ ಭಾಗದಲ್ಲಿ ಕೃತಕ ಪ್ರವಾಹ, ಪ್ರತ್ಯೇಕ ಫೋಕಸ್ ಲೈಟ್ ಅಳವಡಿಕೆ ಮಾಡಲಾಗಿದೆ. ದೇಗುಲ ಕಾಂಪ್ಲೆಕ್ಸ್ನಲ್ಲಿ ಪ್ರಾರ್ಥನಾ ಮಂದಿರ, ಗಾರ್ಡನ್, ವಿಸಿಟಿಂಗ್ ಸೆಂಟರ್ ಇದೆ. ಕಂಪನ ಅಧ್ಯಯನಕ್ಕೆ ಮಂದಿರದ ಬುನಾದಿಯಲ್ಲಿ 100 ಸೆನ್ಸಾರ್ ಅಳವಡಿಕೆ ಮಾಡಲಾಗಿದೆ. ಈ ಮಂದಿರ ನಿರ್ಮಾಣಕ್ಕೆ ತಗುಲಿದ ಒಟ್ಟು ವೆಚ್ಚ 400 ಮಿಲಿಯನ್ ದಿರ್ಹಮ್ (900 ಕೋಟಿ ರೂ.) ಆಗಿದೆ. ಈ ಮಂದಿರ ನಿರ್ಮಾಣಕ್ಕೆ 2017ರಲ್ಲಿ ಪ್ರಧಾನಿ ಮೋದಿಯವರು ಭೂಮಿ ಪೂಜೆ ನೆರವೇರಿಸಿದ್ದರು. ಇದನ್ನೂ ಓದಿ: ಮೋದಿಯಿಂದ ಬುಧವಾರ UAEಯ ಮೊದಲ ಹಿಂದೂ ದೇಗುಲ ಉದ್ಘಾಟನೆ – 65,000ಕ್ಕೂ ಹೆಚ್ಚು ಗಣ್ಯರ ನೋಂದಣಿ!