ಕೋಲ್ಕತ್ತಾ: ನನ್ನ ವಿದೇಶಿ ಪ್ರವಾಸಗಳಿಂದಲೇ ಭಾರತಕ್ಕೆ ಜಾಗತಿಕ ಮನ್ನಣೆ ಸಿಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವ ಮೂಲಕ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಪಶ್ಚಿಮ ಬಂಗಾಳದ ಬಿರ್ ಭುಮ್ ಜಿಲ್ಲೆಯಲ್ಲಿ ಇಂದು ನಡೆದ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮೋದಿ ಅವರು, ಚಾಯ್ವಾಲಾ ತಮ್ಮ ಆಡಳಿತ ಅವಧಿಯ ಐದು ವರ್ಷಗಳನ್ನು ವಿದೇಶಿ ಪ್ರವಾಸದಲ್ಲಿಯೇ ಕಳೆದಿದ್ದಾರೆ ಎಂದು ದೀದಿ ಹೇಳಿದ್ದಾರೆ. ಇದನ್ನು ನಾನು ಎಲ್ಲಿಯೋ ಓದಿದ್ದೇನೆ. ಆದರೆ ನನ್ನ ವಿದೇಶಗಳ ಭೇಟಿಯಿಂದಾಗಿ ಭಾರತಕ್ಕೆ ಗೌರವ ಸಿಕ್ಕಿದೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.
Speaking in Ranaghat in West Bengal. Watch. https://t.co/GXEmIbcO9E
— Narendra Modi (@narendramodi) April 24, 2019
ದೀದಿ ಮೇಲೆ ಭರವಸೆ ಇಟ್ಟು ನೀವು ಬೆಂಬಲ ನೀಡಿದ್ದೀರಿ. ಆದರೆ ದೀದಿ ನಿಮಗೆ ಏನು ಕೊಟ್ಟಿದ್ದಾರೆ? ಅವರ ಬಳಿ ಗೂಂಡಾ ತಂತ್ರದ ತಾಕತ್ ಇದೆ. ನಮ್ಮ ಬಳಿ ಜನತಂತ್ರ ಶಕ್ತಿಯಿದೆ. ಪಶ್ಚಿಮ ಬಂಗಾಳದಲ್ಲಿರುವ ತೃಣಮೂಲ ಕಾಂಗ್ರೆಸ್ ಗೂಂಡಾ ಸಂಸ್ಕøತಿಯನ್ನು ಮುಕ್ತಿ ಮಾಡಲು ನನಗೆ ಬೆಂಬಲ ನೀಡಿ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಕೇಳುವ ಮೂಲಕ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.
ಸ್ವಯಂ ಪ್ರೇರಣೆಯಿಂದ ದೇಶದಲ್ಲಿ ಅನೇಕ ಜನರು ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿಯೂ ಅಂತಹ ಜನರು ಇದ್ದಾರೆ. ನಿಮಗೆ ನಾನು ಕೃತಜ್ಞನಾಗಿದ್ದೇನೆ ಎಂದು ತಿಳಿಸಿದರು.
ಪಶ್ಚಿಮ ಬಂಗಾಳದಲ್ಲಿ ರಾಮ ನವಮಿ ಆಚರಣೆ, ಸರಸ್ವತಿ ಪೂಜೆ ಮಾಡಿದರೆ ತೊಂದರೆ. ಆದರೆ ಬಿಜೆಪಿ ಸರ್ಕಾರವು ಅಬುದಾಬಿಯಲ್ಲಿ ಹಿಂದೂ ದೇವಾಲಯ ನಿರ್ಮಾಣ ಮಾಡಿದೆ. ಹಿಂದೂ ಧರ್ಮದ ಪಾಲನೆಯನ್ನು ನನ್ನಿಂದ ಕಲಿಯದಿದ್ದರೂ ಯುಎಇ ಜನರಿಂದ ನೋಡಿ ಕಲಿಯಿರಿ ಎಂದು ದೀದಿ ವಿರುದ್ಧ ಗುಡುಗಿದರು.