ನವದೆಹಲಿ: ಸಂಸತ್ ಮೇಲಿನ ದಾಳಿ (Parliament Security Breach) ತುಂಬಾ ಗಂಭೀರವಾದದ್ದು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮಾತನಾಡಿದ್ದಾರೆ.
ಲೋಕಸಭಾ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಮೊದಲ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ ಅವರು, ಪ್ರಕರಣ ಬಹಳ ಗಂಭೀರವಾದದ್ದು. ಈ ಘಟನೆಯ ಗಂಭೀರತೆಯನ್ನು ಕಡಿಮೆ ಮಾಡಬಾರದು. ಲೋಕಸಭಾ ಸ್ಪೀಕರ್ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್ನಲ್ಲಿನ ಭದ್ರತಾ ಲೋಪಕ್ಕೂ, ಸಂಸದರ ಅಮಾನತಿಗೂ ಸಂಬಂಧವಿಲ್ಲ: ಲೋಕಸಭಾ ಸ್ಫೀಕರ್ ಸ್ಪಷ್ಟನೆ
ತನಿಖಾ ಸಂಸ್ಥೆಗಳು ಈ ಬಗ್ಗೆ ತನಿಖೆ ನಡೆಸುತ್ತಿವೆ. ಇದರ ಹಿಂದೆ ಯಾರಿದ್ದಾರೆ, ಅವರ ಉದ್ದೇಶಗಳು ಏನು ಎಂಬುದನ್ನು ಪತ್ತೆಮಾಡುವುದು ಮುಖ್ಯ. ಈ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಪ್ರಕರಣದ ವಿಸ್ತೃತ ತನಿಖೆಯಾಗಬೇಕು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಡಿಸೆಂಬರ್ 13 ರಂದು ಕಲಾಪ ನಡೆಯುತ್ತಿದ್ದಾಗ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಸ್ಮೋಕ್ ಕ್ಯಾನ್ ಹಾರಿಸಿ ದಾಂಧಲೆ ಎಬ್ಬಿಸಿದ್ದರು. ಇದರಿಂದಾಗಿ ಕೆಲಕಾಲ ಸದನದಲ್ಲಿ ಆತಂಕ ಸೃಷ್ಟಿಯಾಗಿತ್ತು. ಇದನ್ನೂ ಓದಿ: ಸಂಸತ್ನಲ್ಲಿ ಭದ್ರತಾ ಲೋಪ- 6ನೇ ಆರೋಪಿ ಅರೆಸ್ಟ್
ಆರೋಪಿಗಳು ಸಂಸತ್ತಿನ ಹೊರಗೆ ಇದೇ ರೀತಿಯ ಪ್ರತಿಭಟನೆ ನಡೆಸಿದ್ದರು. ಮಣಿಪುರ ಹಿಂಸಾಚಾರ, ನಿರುದ್ಯೋಗ ಮತ್ತು ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದು ತಮ್ಮ ಉದ್ದೇಶವಾಗಿತ್ತು ಎಂದು ಅವರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಮಾಸ್ಟರ್ಮೈಂಡ್ ಲಲಿತ್ ಮೋಹನ್ ಝಾ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿ ಪೊಲೀಸರು ಅತಿಕ್ರಮಣಕಾರರ ವಿರುದ್ಧ ಕಠಿಣ ಭಯೋತ್ಪಾದನಾ-ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಸಂಸತ್ ದಾಳಿಗೆ ಪ್ರಧಾನಿ ಮೋದಿ ನೀತಿಗಳೇ ಕಾರಣ: ರಾಹುಲ್ ಗಾಂಧಿ ಆರೋಪ