– ದೇಶದ ಯಾವೊಬ್ಬ ವ್ಯಕ್ತಿ ಸಂಕಷ್ಟಲ್ಲಿದ್ದಾಗ ಸರ್ಕಾರ ಕಣ್ಣುಮುಚ್ಚಿ ಕುಳಿತುಕೊಳ್ಳಲ್ಲ ಎಂದ ಮೋದಿ
ಶಿವಮೊಗ್ಗ: ಅಂತರ್ಯುದ್ಧಪೀಡಿತ ಸುಡಾನ್ನಲ್ಲಿ (Sudan Violence) ಸಿಲುಕಿದ್ದ ಭಾರತೀಯರನ್ನ ಆಪರೇಷನ್ ಕಾವೇರಿ ಮೂಲಕ ಕೇಂದ್ರ ಸರ್ಕಾರ ರಕ್ಷಣೆ ಮಾಡಿತ್ತು. ಹೀಗೆ ರಕ್ಷಣೆ ಆದವರಲ್ಲಿ ರಾಜ್ಯದ ಹಕ್ಕಿಪಿಕ್ಕಿ ಸಮುದಾಯದ ನೂರಾರು ಮಂದಿ ಇದ್ದರು. ಅವರಲ್ಲಿ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯವರೇ ಹೆಚ್ಚಿದ್ದರು.
ಶಿವಮೊಗ್ಗಕ್ಕೆ (Shivamogga) ಬಂದಿಳಿದ ಪ್ರಧಾನಿ ಮೋದಿಯನ್ನು ಏರ್ಪೋರ್ಟ್ನಲ್ಲಿಯೇ ಭೇಟಿ ಮಾಡಿದ ಹಕ್ಕಿಪಿಕ್ಕಿ ಸಮುದಾಯದ 40ಕ್ಕೂ ಹೆಚ್ಚು ಮಂದಿ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಪ್ರಧಾನಿ ಮೋದಿ ಹಕ್ಕಿಪಿಕ್ಕಿ ಜನರೊಂದಿಗೆ ಸಂವಾದ ನಡೆಸಿ ಕಷ್ಟ ಸುಖಗಳನ್ನು ಆಲಿಸಿದರು. ಸುಡಾನ್ನಲ್ಲಿ ಪರಿಸ್ಥಿತಿ ಹೇಗಿತ್ತು? ಅಲ್ಲಿ ನಿಮಗೆ ಯಾವ ರೀತಿ ಸಂಕಷ್ಟ ಎದುರಾಗಿತ್ತು? ನೀವೆಲ್ಲಾ ಬೇರೆ ಬೇರೆ ಕಡೆ ನೆಲೆಸಿದ್ದಿರಿ, ಹೇಗೆ ಒಂದೆಡೆ ಸೇರಿದ್ರಿ? ಅನ್ನೋದನ್ನ ಕೇಳಿ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು.
ಈ ವೇಳೆ ಪ್ರಧಾನಿ ಮೋದಿ ಮಾತನಾಡುತ್ತಾ, ಹಿಂದೂಸ್ತಾನದ ಯಾವುದೇ ಒಬ್ಬ ಪ್ರಜೆ ಸಂಕಷ್ಟದಲ್ಲಿದ್ದರೆ ಅದನ್ನು ನೋಡಿಕೊಂಡು ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಳ್ಳಲ್ಲ. ತಕ್ಷಣವೇ ಸಹಾಯಕ್ಕೆ ಧಾವಿಸುತ್ತೆ. ನಿಮ್ಮಲ್ಲಿಯೂ ಸಹ ಯಾರಿಗಾದರೂ ಸಹಾಯ ಮಾಡುವ ಅವಕಾಶ ಸಿಕ್ಕರೆ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಕಿಚ್ಚ ಸುದೀಪ್ ಕಿಚ್ಚು ಕಾಂಗ್ರೆಸ್ ಕಚೇರಿಯನ್ನೇ ಸುಟ್ಟು ಹಾಕ್ತಿದೆ: ಪ್ರತಾಪ್ ಸಿಂಹ
ಭಾರತ ದೇಶವಿಂದು ಪ್ರಬಲವಾಗಿ ಬೆಳೆದಿದೆ. ಈ ದೇಶದಲ್ಲಿ ಎಂದಾದರೂ ಯುದ್ಧವನ್ನ ನೋಡಿದ್ದೀರಾ? ಗುಂಡಿನ ಸದ್ದು ಕೇಳಿದ್ದೀರಾ? ಹಾಗೆ ಕೇಳಲು ಸಾಧ್ಯವಿಲ್ಲ. ಏಕೆಂದರೆ ಇದು ಶಾಂತಿ ನೆಲೆಸಿರುವ ದೇಶ ಎಂದು ಹೇಳಿದರು. ಇದನ್ನೂ ಓದಿ: ಶ್ರೀಕಂಠೇಶ್ವರನ ದರ್ಶನ ಪಡೆದು ಚುನಾವಣಾ ಪ್ರಚಾರ ಮುಗಿಸಿದ ಮೋದಿ
ಬಳಿಕ ಹಕ್ಕಿಪಿಕ್ಕಿ ಸಮುದಾಯದ ಮಂದಿ ಹಾಡಿದ ಹಾಡನ್ನು ಕೇಳಿ ಖುಷಿ ಪಟ್ಟರು. ಆಪರೇಷನ್ ಕಾವೇರಿ ಬಗ್ಗೆ ನಂಜನಗೂಡು ಸಮಾವೇಶದಲ್ಲಿ ಮೋದಿ ಪ್ರಸ್ತಾಪ ಮಾಡಿದ್ರು. ಈ ವಿಚಾರದಲ್ಲಿಯೂ ಕಾಂಗ್ರೆಸ್ ರಾಜಕೀಯ ಮಾಡಲು ನೋಡಿತು ಎಂದು ಆಪಾದಿಸಿದ್ರು.