ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ನಾಡಪ್ರಭು ಕೆಂಪೇಗೌಡರು ಧರಿಸುತ್ತಿದ್ದ ಮಾದರಿಯ ಪೇಟ ತೊಟ್ಟು ಕಂಗೊಳಿಸಿದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Airport) ಸಮೀಪದ ಭುವನಹಳ್ಳಿಯಲ್ಲಿ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಕೆಂಪೇಗೌಡ ಪೇಟ (Kempegowda Peta) ಧರಿಸಿ ಪ್ರಧಾನಿ ನರೇಂದ್ರ ಎಲ್ಲರ ಕೇಂದ್ರ ಬಿಂದುವಾಗಿದ್ದರು.
ಇಂದು ಮಧ್ಯಾಹ್ನ 12:30 ಕ್ಕೆ ಸರಿಯಾಗಿ ಸಮಾವೇಶ ಆರಂಭವಾಯಿತು. ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು (Basavaraj Bommai) ಪ್ರಧಾನಿ ಮೋದಿಯವರಿಗೆ ಸನ್ಮಾನ ಮಾಡಿದರು. ಆಕರ್ಷಕವಾದ ಕೆಂಬಣ್ಣದ ಕೆಂಪೇಗೌಡ ಪೇಟವನ್ನು ತೊಡಿಸಿ, ಶಾಲು ಹೊದಿಸಿ ಪ್ರಧಾನಿಗೆ ಮುಖ್ಯಮಂತ್ರಿಗಳು ಸನ್ಮಾನಿಸಿದರು. ಇದೇ ವೇಳೆ ಪ್ರಧಾನಿಯವರಿಗೆ ಬೆಳ್ಳಿಯ ಕೆಂಪೇಗೌಡ ಪ್ರತಿಮೆಯನ್ನೂ ಮುಖ್ಯಮಂತ್ರಿಗಳು ಕೊಡುಗೆಯಾಗಿ ನೀಡಿದರು. ಬಳಿಕ ಸಮಾವೇಶ ಆರಂಭವಾಗಿ ಮೂವರು ಗಣ್ಯರು ಮಾತಾಡುವವರೆಗೂ ವೇದಿಕೆ ಮೇಲೆ ಕೆಂಪೇಗೌಡ ಪೇಟ ಧರಿಸಿಯೇ ಪ್ರಧಾನಿ ಮೋದಿ ಕೂತಿದ್ದರು. ಈ ಸುಂದರ ಕೆಂಪೇಗೌಡ ಪೇಟವು ಮೋದಿಯವರನ್ನು ಸಮಾವೇಶದ ಕೇಂದ್ರಬಿಂದುವಾಗಿಸಿತ್ತು. ಕೆಂಪು ಬಣ್ಣದ ಕೆಂಪೇಗೌಡ ಪೇಟದಲ್ಲಿ ಕಂಗೊಳಿಸುತ್ತಿದ್ದ ಮೋದಿಯವರನ್ನು ಕಂಡು ಜನ ಕಣ್ತುಂಬಿಕೊಂಡು ಹರ್ಷೋದ್ಘಾರ ಮೊಳಗಿಸಿದರು. ಇದನ್ನೂ ಓದಿ: ಮೋದಿಯಿಂದಾಗಿ ನಳಿನ್ ಕುಮಾರ್ ಕಟೀಲ್ ಡಾಲರ್ ಪದ ಕೇಳಿದರೆ ಬೆಚ್ಚಿ ಬೀಳುತ್ತಾರೆ: ಕಾಂಗ್ರೆಸ್
ಮೈಸೂರಿನಲ್ಲಿ ತಯಾರಾದ ಕೆಂಪೇಗೌಡ ಪೇಟ
ಹಲವು ವಿಶೇಷತೆಗಳಿಂದ ಕೂಡಿರುವ ಕೆಂಪೇಗೌಡ ಪೇಟವು ಮೈಸೂರಿನಲ್ಲಿ ಸಿದ್ಧವಾಗಿದೆ. ಈ ಪೇಟವನ್ನು ಕೆಂಪೇಗೌಡರ ಪ್ರತಿಮೆಯಲ್ಲಿರುವ ಪೇಟದಂತೆಯೇ ವಿನ್ಯಾಸಗೊಳಿಸಲಾಗಿದೆ. ಮೈಸೂರಿನ ಕಲಾವಿದ ನಂದನ್ ಎಂಬವರು ತಯಾರಿಸಿರುವ ಪೇಟವಿದು.
ಈ ಪೇಟದ ತಯಾರಿಗೆ ನಂದನ್ ಅವರು ಹತ್ತು ದಿನ ತೆಗೆದುಕೊಂಡಿದ್ದಾರಂತೆ. ಬನಾರಸ್ ರೇಷ್ಮೆ ಬಳಸಿ ಪೇಟವನ್ನು ತಯಾರಿಸಲಾಗಿದೆ. ಕೆಂಪು ಬಣ್ಣದ ಪೇಟದಲ್ಲಿ ರೇಷ್ಮೆ, ಗರಿ, ಮುತ್ತುಗಳನ್ನು ಸೇರಿಸಿ ಸೂಕ್ಷ್ಮ ಕುಸುರಿ ಕೆಲಸ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಈ ಥರದ ಪೇಟವನ್ನು ಮೋದಿಯವರಿಗಾಗಿ ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಪ್ರಧಾನಿ ಮೋದಿ ಚಾಲನೆ