ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ಇನ್ನೂ 10 ದಿನಗಳು ಬಾಕಿಯಿರುವಾಗಲೇ ಪ್ರಧಾನಿ ಮೋದಿ (Narendra Modi) ಅವರ ʻಮನ್ ಕಿ ಬಾತ್ʼ (100th Mann Ki Baat) ಕಾರ್ಯಕ್ರಮ 100ನೇ ಸಂಚಿಕೆ ಪೂರೈಸುತ್ತಿದೆ. ಸದ್ಯ ಶನಿವಾರ ಸಂಜೆ ಬೆಂಗಳೂರಿನಲ್ಲಿ ಅದ್ಧೂರಿ ರೋಡ್ ಶೋ ನಡೆಸಿರುವ ಮೋದಿ ಅವರು ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದು, ಭಾನುವಾರ (ಏ.30) ಕಾರ್ಯಕ್ರಮ ಮುಗಿಸಿ ದೆಹಲಿಗೆ ಮರಳಲಿದ್ದಾರೆ.
ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ಬಳಿಕ ಅದೇ ವರ್ಷದ ಅಕ್ಟೋಬರ್ನಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ ಆರಂಭಿಸಿದರು. ರಾಜಕೀಯ ವಿಷಯಗಳನ್ನು ಪ್ರಸ್ತಾಪಿಸದೇ ಇರುವ ಇದೊಂದು ಆತ್ಮೀಯ ಸಂವಹನವೆನಿಸಿದೆ. ಪ್ರತಿ ತಿಂಗಳ ಕೊನೇ ಭಾನುವಾರ ಭಾಷಣ ಪ್ರಸಾರವಾಗುತ್ತದೆ. ಒಂದೇ ಒಂದು ತಿಂಗಳೂ ಕಾರ್ಯಕ್ರಮ ಪ್ರಸಾರ ನಿಂತಿಲ್ಲ. ಇದಕ್ಕೆ ಸುಮಾರು 130 ಕೋಟಿ ಶ್ರೋತೃಗಳಿರುವುದು ಹೆಮ್ಮೆಯ ವಿಚಾರ. ಇದನ್ನೂ ಓದಿ: ಓಲ್ಡ್ ಮೈಸೂರೇ ಮೋದಿ ಟಾರ್ಗೆಟ್- ಒಂದೇ ದಿನ 4 ಜಿಲ್ಲೆಗಳಲ್ಲಿ ನಮೋ ಮಿಂಚಿನ ಸಂಚಾರ
ಪ್ರಧಾನಿ ಮೋದಿ ಅವರು ಪ್ರತಿ ತಿಂಗಳು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದ ಅಭಿವೃದ್ಧಿ ಪಯಣದಲ್ಲಿ ಭಾಗವಹಿಸಲು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಿದ್ದಾರೆ. ಪ್ರತಿ ತಿಂಗಳು ವಿವಿಧ ಕ್ಷೇತ್ರದ ಸಾಧನೆಗಳು, ಸಿಹಿ – ಕಹಿ ಘಟನೆ, ಸಂತೋಷ ಮತ್ತು ಹೆಮ್ಮೆಯ ಕ್ಷಣಗಳನ್ನು ಮತ್ತು ನವ ಭಾರತಕ್ಕಾಗಿ ಸಲಹೆಗಳನ್ನು ಮೋದಿ ಈ ಕಾರ್ಯಕ್ರಮದ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಅಭಿಷೇಕ್ ಶರ್ಮಾ, ಕ್ಲಾಸೆನ್ ಕ್ಲಾಸಿಕ್ ಆಟ – ಡೆಲ್ಲಿ ವಿರುದ್ಧ ಹೈದರಾಬಾದ್ಗೆ 9 ರನ್ ಜಯ
ಬಾಲಿವುಡ್ ತಾರೆಯರಿಂದ ಮೆಚ್ಚಿಗೆ:
‘ಒಬ್ಬ ನಾಯಕ ಪರಿಣಾಮಕಾರಿ ಸಂವಹನದೊಂದಿಗೆ ದೇಶವನ್ನು ಹೇಗೆ ಮುನ್ನಡೆಸುತ್ತಾರೆ, ಅವರು ದೇಶ- ವಿದೇಶಗಳಲ್ಲಿ ನೋಡುವುದನ್ನು ಜನರಿಗೆ ಹೇಗೆ ಹೇಳುತ್ತಾರೆ, ನಾಯಕನಾದವನು ಭವಿಷ್ಯವನ್ನು ಹೇಗೆ ನೋಡುತ್ತಾನೆ ಮತ್ತು ಜನರಿಂದ ಯಾವ ರೀತಿಯಲ್ಲಿ ಬೆಂಬಲ ಬಯಸುತ್ತಾನೆ ಎಂಬುದಕ್ಕೆ ಮನ್ ಕಿ ಬಾತ್ ಉತ್ತಮ ಉದಾಹರಣೆಯಾಗಿದೆ’ ಎಂದು ಆಮಿರ್ ಖಾನ್ ಅಭಿಪ್ರಾಯಪಟ್ಟಿದ್ದರು. ಈ ಬೆನ್ನಲ್ಲೇ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದು ಶ್ಲಾಘಿಸಿದ್ದರು.
100 ಗಣ್ಯರಿಗೆ ಆಹ್ವಾನ: ಮೋದಿ ಅವರು ಇದುವರೆಗಿನ ತಮ್ಮ ‘ಮನ್ ಕಿ ಬಾತ್’ ಆಕಾಶವಾಣಿ ಕಾರ್ಯಕ್ರಮದಲ್ಲಿ 700ಕ್ಕೂ ಹೆಚ್ಚು ಗಣ್ಯರ ಹೆಸರನ್ನು ನಾನಾ ಕಾರಣಗಳಿಗೆ ಪ್ರಸ್ತಾಪಿಸಿದ್ದು, ಅದರಲ್ಲಿ 100 ಗಣ್ಯರನ್ನು ಈ ಸಮಾವೇಶಕ್ಕೆ ಆಹ್ವಾನಿಸಲಾಗಿತ್ತು. ಭಾನುವಾರ 100ನೇ ಸಂಚಿಕೆ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಕಾರ್ಯಕ್ರಮ ಕೇಳಲು ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.