ನವದೆಹಲಿ: ರಾಜಸ್ಥಾನದ ಬನ್ಸವಾರಾದಲ್ಲಿ 421000 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 2,800 ಮೆಗಾವ್ಯಾಟ್ ಸಾಮರ್ಥ್ಯದ `ಮಹಿ ಬನ್ಸವಾರಾ ಪರಮಾಣು ವಿದ್ಯುತ್’ ಯೋಜನೆ ಸೇರಿದಂತೆ ನವೀಕರಿಸಬಹುದಾದ ಇಂಧನ, ನೀರು ಸರಬರಾಜು, ರಸ್ತೆ ಮತ್ತು ಮೂಲಸೌಕರ್ಯಗಳ ಒಟ್ಟಾರೆ 1,22,100 ಕೋಟಿ ರೂ. ವೆಚ್ಚದ ಹಲವು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ, ರಾಜಸ್ಥಾನ ರಾಜ್ಯಪಾಲ ಹರಿಭಾವು ಬಗಾಡೆ, ಸಿಎಂ ಭಜನ್ಲಾಲ್ ಶರ್ಮಾ ಮತ್ತಿತರರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ಸೆ.25) ರಿಮೋಟ್ ಬಟನ್ ಒತ್ತುವ ಮೂಲಕ ಲಕ್ಷಕ್ಕೂ ಅಧಿಕ ಕೋಟಿ ವೆಚ್ಚದ ಅನೇಕ ಅಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ದೇಶಾಭಿವೃದ್ಧಿಯ ಮತ್ತೊಂದು ಪರ್ವಕ್ಕೆ ನಾಂದಿ ಹಾಡಿದರು.ಇದನ್ನೂ ಓದಿ: ತಿಂಡಿ ತಿನ್ನಲೂ ಒಂದು ಗಂಟೆ ಬೇಕಿತ್ತು, ಆತ್ಮಹತ್ಯೆ ಯೋಚನೆ ಬಂದಿತ್ತು – ಜೀವನದಲ್ಲಿ ಕಾಡಿದ ನರರೋಗದ ಬಗ್ಗೆ ಸಲ್ಮಾನ್ ಖಾನ್ ಮಾತು
ಬನ್ಸವಾರಾದಲ್ಲಿ 42,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ 2,800 ಮೆಗಾವ್ಯಾಟ್ ಸಾಮರ್ಥ್ಯ-ಸೌಲಭ್ಯದ ಮಹಿ-ಬನ್ಸವಾರಾ ಪರಮಾಣು ವಿದ್ಯುತ್ ಯೋಜನೆ ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಮೋದಿ, `ಇಂಧನ ಸ್ವಾವಲಂಭನೆಯತ್ತ ಭಾರತ ಇರಿಸಿದ ಸದೃಢ ಹೆಜ್ಜೆ’ಯನ್ನು ಪ್ರತಿಪಾದಿಸಿದರು.
ಬಿಕಾನೆರ್ನಲ್ಲಿ 590 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನ ಯೋಜನೆ, ಜೈಸಲ್ಮೇರ್, ಬಾರ್ಮರ್, ಸಿರೋಹಿ, ನಾಗೌರ್ ಮತ್ತು ಬಿಕಾನೆರ್ನಾದ್ಯಂತ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಪ್ರಸರಣ ಮಾರ್ಗಗಳು, ಬನ್ಸವಾರಾ, ಉದಯಪುರ, ಡುಂಗರಪುರ, ಸಿಕಾರ್ ಮತ್ತು ಅಜ್ಮೀರ್ ಸೇರಿದಂತೆ 11 ಜಿಲ್ಲೆಗಳಲ್ಲಿ 15 ಹೊಸ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಪ್ರಧಾನಿ ಶಿಲಾನ್ಯಾಸ ನೆರವೇರಿಸಿದರು. ಎರಡು ಹೊಸ ಮೇಲ್ಸೇತುವೆ ನಿರ್ಮಾಣ, ಬನಾಸ್ ನದಿ ಮೇಲ್ಸೇತುವೆ ಮತ್ತು ಭರತ್ಪುರದಲ್ಲಿ ಅಟಲ್ ಪ್ರಗತಿ ಪಥ ಯೋಜನೆಯಡಿ ನಿರ್ಮಿಸಿದ 119 ರಸ್ತೆಗಳು ಮತ್ತು ಬಿಕಾನೆರ್ ಮತ್ತು ಜೈಸಲ್ಮೇರ್ನಲ್ಲಿ ಮೂರು ಹೊಸ ಗ್ರಿಡ್ ಸಬ್ಸ್ಟೇಷನ್, ಫಲೋಡಿಯಲ್ಲಿ ಸೌರಶಕ್ತಿ ಸ್ಥಾವರಗಳು, ಪಿಎಂ-ಕುಸುಮ್ ಸಿ ಯೋಜನೆಯಡಿಯಲ್ಲಿ 895 ಮೆಗಾವ್ಯಾಟ್ ಸಾಮರ್ಥ್ಯದ ವಿಕೇಂದ್ರೀಕೃತ ಸೌರಶಕ್ತಿ ಸ್ಥಾವರಗಳು, ಇಸಾರ್ದಾ ಅಣೆಕಟ್ಟಿನ ಕಾಮಗಾರಿಗಳು, ಧೋಲ್ಪುರ್ ಲಿಫ್ಟ್ ಯೋಜನೆ ಮತ್ತು ಇತರ ಪ್ರಾದೇಶಿಕ ನೀರಾವರಿ ಯೋಜನೆಗಳು ಸೇರಿದಂತೆ ಬಹು ಪೂರ್ಣಗೊಂಡ ಯೋಜನೆಗಳನ್ನು ಉದ್ಘಾಟಿಸಿದರು.
ಇದೇ ವೇಳೆ “ಬಿಕಾನೇರ್ನಿಂದ ದೆಹಲಿ ಕಂಟೋನ್ಮೆಂಟ್ ಮತ್ತು ಜೋಧ್ಪುರ್ನಿಂದ ದೆಹಲಿ ಕಂಟೋನ್ಮೆಂಟ್-ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮತ್ತು ಉದಯಪುರ-ಚಂಡೀಗಢ ಎಕ್ಸ್ಪ್ರೆಸ್ ರೈಲಿಗೆ ಪ್ರಾಯೋಗಿಕ ಚಾಲನೆ ನೀಡಲಾಯಿತು.ಇದನ್ನೂ ಓದಿ: ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ಐಸಿಸಿ ವಾರ್ನಿಂಗ್
ಮೋದಿ ನಾಯಕತ್ವದಲ್ಲಿ ಭಾರತದ ಚಿತ್ರಣವೇ ಬದಲು:
ಈ ಬೃಹತ್ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಚಾಲನೆ ಸಮಾರಂಭದಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಚಿತ್ರಣವೇ ಬದಲಾಗಿದೆ. ಅಭಿವೃದ್ಧಿಯಲ್ಲಿ ಇಂದು ಆಮೂಲಾಗ್ರ ಬದಲಾವಣೆ ಕಂಡಿದೆ ಎಂದು ಸಂತಸ ಹಂಚಿಕೊಂಡರು.
ಸೌರಶಕ್ತಿಯಲ್ಲಿ ಜಗತ್ತಿಗೇ ಬೆಳಕು:
ಸೌರಶಕ್ತಿ ಉತ್ಪಾದನೆ ಮತ್ತು ನವೀಕರಿಸಬಹುದಾದ ಇಂಧನದಲ್ಲಿ ಭಾರತ ಜಾಗತಿಕ ನಾಯಕತ್ವ ವಹಿಸುತ್ತಿದೆ. ಸೌರಶಕ್ತಿಗೆ ಉತ್ತೇಜನ ನೀಡಿ ಅಂತರಾಷ್ಟ್ರೀಯ ಗಮನ ಸೆಳೆದಿರುವ ಪ್ರಧಾನಿ ಅವರು ಭಾರತವನ್ನು ಇಂಧನ ಸ್ವಾವಲಂಬಿ ರಾಷ್ಟ್ರ ನಿರ್ಮಾಣದ ಜೊತೆಗೆ ಜಗತ್ತಿಗೇ ಬೆಳಕು ಚೆಲ್ಲುತ್ತಿದ್ದಾರೆ. ನವೀಕರಿಸಬಹುದಾದ ಇಂಧನದಲ್ಲಿ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಬದ್ಧವಾಗಿ ಮುನ್ನಡೆ ಸಾಧಿಸಲಾಗುತ್ತಿದೆ ಎಂದು ಪ್ರತಿಪಾದಿಸಿದರು.
2012ರಲ್ಲಿ ಇಡೀ ಉತ್ತರ ಭಾರತವೇ ಮೂರು ದಿನಗಳ ಕಾಲ ಕತ್ತಲೆಯಲ್ಲಿ ಮುಳುಗಿತ್ತು. ಇದನ್ನು ರಾಷ್ಟ್ರೀಯ ದೌರ್ಬಲ್ಯದ ಸಂಕೇತವೆಂದೇ ಪರಿಗಣಿಸಲ್ಪಟ್ಟಿತ್ತು. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಉತ್ತರ ಭಾರತ ಮಾತ್ರವಲ್ಲ ಸಮಗ್ರ ದೇಶವೇ ಬೆಳಕಿನಲ್ಲಿ ಪ್ರಜ್ವಲಿಸುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಪ್ರಧಾನಿ ಬಡವರ ಜೀವನಾಡಿ:
ಪ್ರಧಾನಿ ಮೋದಿಜಿ ಬಡವರ ಜೀವನಾಡಿಯಾಗಿದ್ದಾರೆ. ಬಡ ಕುಟುಂಬದಿಂದಲೇ ಬಂದ ಅವರಿಗೆ ಕಡುಬಡವರ ಜನಜೀವನದ ಅರಿವು-ಅನುಭವವಿದೆ. ಜಿಎಸ್ಟಿ ಕಡಿತದ ಮಹತ್ತರ ಕ್ರಾಂತಿಕಾರಿ ನಿಲುವನ್ನು ತೆಗೆದುಕೊಂಡರು. ತೆರಿಗೆ ಕಡಿತಗೊಳಿಸುವ ಮೂಲಕ ಜನೋಪಯೋಗಿ ಸರ್ವ ವಸ್ತುಗಳ ದರ ಇಳಿಸಿ ಬಡ ಮತ್ತು ಮಧ್ಯಮ ವರ್ಗದವರಿಗೆ ಅಭೂತಪೂರ್ವ ಕೊಡುಗೆ ಕೊಡಮಾಡಿದ್ದಾರೆ ಎಂದು ಹೇಳಿದರು.
ಬಡವರ ಸೇವೆಗೆ ಜಿಎಸ್ಟಿ ಕಡಿತ:
ಜಿಎಸ್ಟಿ ಕಡಿತ ಬಡವರಿಗೆ ಸೇವೆ ಸಲ್ಲಿಸುವ ಮಹೋನ್ನತ ಗುರಿಯನ್ನೇ ಹೊಂದಿದೆ. 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತದ ಸರ್ವ ವಲಯವೂ ಸಂಪೂರ್ಣ ಬದಲಾಯಿತು. ಜಾಗತಿಕ ಮಟ್ಟದಲ್ಲಿ ಭಾರತ ವಿಶಿಷ್ಠ ಛಾಪು ಮೂಡಿಸುತ್ತಿದೆ ಎಂದು ಹೇಳಿದರು.
ರಾಜಸ್ಥಾನ ಸಿಎಂ ಶರ್ಮಾ ಮಾತನಾಡಿ, ಸೌರಶಕ್ತಿ ಉತ್ಪಾದನೆಯಲ್ಲಿ ರಾಜಸ್ಥಾನ ಮುಂಚೂಣಿಯಲ್ಲಿದೆ. ಪ್ರಧಾನಮಂತ್ರಿ ಕುಸುಮ್ ಯೋಜನೆಯ ಮೂರು ಘಟಕಗಳಲ್ಲಿ ಗಮನಾರ್ಹ ಕಾರ್ಯಗಳನ್ನು ಮಾಡಲಾಗಿದೆ. ಸರ್ಕಾರಿ ಕಟ್ಟಡಗಳ ಮೇಲೆ ಮೇಲ್ಛಾವಣಿ ಸೌರ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು. ರಾಜ್ಯದಲ್ಲಿ ಹೂಡಿಕೆಯಿಂದಾಗಿ ಖಾಸಗಿ ವಲಯದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಪ್ರಧಾನಮಂತ್ರಿ ಅವರ `ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಿಂದ ಪ್ರೇರಿತವಾಗಿ ತಮ್ಮ ರಾಜ್ಯದಲ್ಲಿ 19 ಕೋಟಿ ಸಸಿಗಳನ್ನು ನೆಡಲಾಗಿದೆ. ಒಟ್ಟಾರೆ 50 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಿದೆ ಎಂದು ಹೇಳಿದರು.ಇದನ್ನೂ ಓದಿ: ಸಿಂಧೂ ನದಿ ನೀರು ಈಶಾನ್ಯ ರಾಜ್ಯಗಳಿಗೆ ಹರಿಸಲು ಕೇಂದ್ರ ಸರ್ಕಾರ ಪ್ಲ್ಯಾನ್

