ನವದೆಹಲಿ: ದೇಶಭಕ್ತಿ ಗೀತೆ ‘ವಂದೇ ಮಾತರಂ’ನ 150 ವರ್ಷಗಳನ್ನು ಗುರುತಿಸಲು ಪ್ರಧಾನಿ ನರೇಂದ್ರ ಮೋದಿ (PM Modi) ಸೋಮವಾರ ಲೋಕಸಭೆಯಲ್ಲಿ ವಿಶೇಷ ಚರ್ಚೆಗೆ ಚಾಲನೆ ನೀಡಲಿದ್ದಾರೆ.
ಬಂಕಿಮ್ ಚಂದ್ರ ಚಟರ್ಜಿ ಅವರು ಬರೆದ ಈ ಗೀತೆ 1875 ರ ನವೆಂಬರ್ 7 ರಂದು ಸಾಹಿತ್ಯ ನಿಯತಕಾಲಿಕೆ ಬಂಗದರ್ಶನ್ನಲ್ಲಿ ಮೊದಲು ಪ್ರಕಟವಾಯಿತು. ಈ ಹಾಡು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ, ಅದರ ಐತಿಹಾಸಿಕ ಮಹತ್ವ ಮತ್ತು ಪ್ರಸ್ತುತತೆಯನ್ನು ಪ್ರಧಾನಿ ಮೋದಿ ತಿಳಿಸಲಿದ್ದಾರೆ. ಇದನ್ನೂ ಓದಿ: ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ – ಏರ್ ಆಂಬ್ಯುಲೆನ್ಸ್ ದರವೂ ಹೆಚ್ಚಳ
ಕಳೆದ ತಿಂಗಳು ಗೀತೆಯ ವಾರ್ಷಿಕೋತ್ಸವದ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ, 1937 ರ ಫೈಜಾಬಾದ್ನಲ್ಲಿ ನಡೆದ ಪಕ್ಷದ ಅಧಿವೇಶನದಲ್ಲಿ ಕಾಂಗ್ರೆಸ್ ಮೂಲ ಹಾಡಿನಿಂದ ಪ್ರಮುಖ ಚರಣಗಳನ್ನು ತೆಗೆದುಹಾಕಿದೆ ಎಂದು ಮೋದಿ ಆರೋಪಿಸಿದ್ದರು.
ಕಾಂಗ್ರೆಸ್ ನಿರ್ಧಾರವು ವಿಭಜನೆಯ ಬೀಜಗಳನ್ನು ಬಿತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದಾಗ್ಯೂ, ಈ ನಿರ್ಧಾರವು ರವೀಂದ್ರನಾಥ ಟ್ಯಾಗೋರ್ ಅವರ ಸಲಹೆಯನ್ನು ಆಧರಿಸಿದೆ. ಇತರ ಸಮುದಾಯಗಳು ಮತ್ತು ನಂಬಿಕೆಗಳ ಸದಸ್ಯರ ಭಾವನೆಗಳನ್ನು ಒಪ್ಪುವಂತಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ರಾಜ್ಯಸಭೆಯಲ್ಲಿ ವಂದೇ ಮಾತರಂ ಕುರಿತ ಚರ್ಚೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಪ್ರಾರಂಭಿಸುವ ಸಾಧ್ಯತೆಯಿದೆ. ವಂದೇ ಮಾತರಂ ಚರ್ಚೆಗೆ ಲೋಕಸಭೆಯಲ್ಲಿ 10 ಗಂಟೆಗಳನ್ನು ಮೀಸಲಿಡಲಾಗಿದೆ. ಅದರಲ್ಲಿ ಆಡಳಿತಾರೂಢ ಎನ್ಡಿಎ ಸದಸ್ಯರಿಗೆ ಮೂರು ಗಂಟೆಗಳನ್ನು ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ; ಆಡಳಿತ ಪಕ್ಷ v/s ವಿಪಕ್ಷಗಳ ಮಧ್ಯೆ ಫೈಟ್
ಚಳಿಗಾಲದ ಅಧಿವೇಶನ ಪ್ರಾರಂಭವಾಗುವುದಕ್ಕೂ ಮೊದಲು ರಾಜಕೀಯ ಘರ್ಷಣೆ ಭುಗಿಲೆದ್ದಿತ್ತು. ರಾಜ್ಯಸಭಾ ಸಚಿವಾಲಯವು ಸಂಸದರು ಸಂಸತ್ತಿನೊಳಗೆ ‘ವಂದೇ ಮಾತರಂ’ ಮತ್ತು ‘ಜೈ ಹಿಂದ್’ ನಂತಹ ಘೋಷಣೆ ಕೂಗಿವುದನ್ನು ತಡೆಯಬೇಕು ಎಂದು ಪುನರುಚ್ಚರಿಸಿತು.
ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 19 ರವರೆಗೆ ನಡೆಯಲಿದೆ. ಗೀತೆಯ ಬಗ್ಗೆ ಸರ್ಕಾರದ ಮತ್ತು ವಿರೋಧ ಪಕ್ಷದ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳಿವೆ. ಇದರಿಂದ ಮುಂದಿನ ದಿನಗಳಲ್ಲಿ ‘ವಂದೇ ಮಾತರಂ’ ಕುರಿತ ಚರ್ಚೆ ಗದ್ದಲದ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ.

