ಏ.28ಕ್ಕೆ ಕೋಲಾರಕ್ಕೆ ಮೋದಿ – 1 ವಾರ 20+ ಸಮಾವೇಶದಲ್ಲಿ ಭಾಗಿ

Public TV
2 Min Read
PM Narendra Modi inaugurates Bengaluru Mysuru Expressway in Mandya 2

ಬೆಂಗಳೂರು/ ಕೋಲಾರ: ಕರ್ನಾಟಕ ಚುನಾವಣೆಯ (Karnataka Election) ಕಾವು ಏರುತ್ತಿದ್ದು ಏಪ್ರಿಲ್‌ 28 ರಂದು ಪ್ರಧಾನಿ ನರೇಂದ್ರ ಮೋದಿ (PM Modi) ಕೋಲಾರದಲ್ಲಿ (Kolara) ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮತಯಾಚನೆ ಮಾಡಲಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಭ್ಯರ್ಥಿಗಳ ಪರವಾಗಿ ಮೋದಿ ಪ್ರಚಾರ ನಡೆಸಲಿದ್ದು ಕೋಲಾರ ತಾಲೂಕಿನ ಚಲುವನಹಳ್ಳಿ ಗ್ರಾಮದ ಬಳಿ ವೇದಿಕೆ ನಿರ್ಮಾಣಕ್ಕೆ ಸಿದ್ದತೆ ನಡೆದಿದೆ.

ಸುಮಾರು 30 ಎಕರೆ ಪ್ರದೇಶದಲ್ಲಿ ವೇದಿಕೆ ನಿರ್ಮಾಣವಾಗಲಿದ್ದು ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಪ್ರಚಾರ ಮಾಡಲು ಬಿಜೆಪಿ ಮುಂದಾಗಿದೆ.  ಇದನ್ನೂ ಓದಿ: ಸ್ವರ್ಗ ಪ್ರಾಪ್ತಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ – ಬ್ರಿಟನ್ ಶಾಲೆಗಳಲ್ಲಿ ಹಿಂದೂಗಳಿಗೆ ಕಿರುಕುಳ

ಏ.28ರಿಂದ ಮೇ 7ರವರೆಗಿನ ಅವಧಿಯಲ್ಲಿ ಸುಮಾರು ಏಳು ದಿನಗಳ ಕಾಲ ಪ್ರಚಾರ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗುವ ಸಾಧ್ಯತೆಯಿದೆ. ಸುಮಾರು 20ಕ್ಕೂ ಹೆಚ್ಚು ಸಮಾವೇಶವನ್ನು ಆಯೋಜಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಸೇರಿದಂತೆ ಕೆಲ ಹಿರಿಯ ನಾಯಕರು ಕಾಂಗ್ರೆಸ್‌ ಸೇರ್ಪಡೆ, ಕೆಲವು ಕಡೆ ಟಿಕೆಟ್‌ ನಿರಾಕರಿಸಿದ್ದರಿಂದ ಕೆಲ ಕ್ಷೇತ್ರಗಳನ್ನು ಭಾರೀ ಸವಾಲು ಎದುರಿಸುತ್ತಿರುವ ಕಾರಣ ಬಿಜೆಪಿ ಈ ಬಾರಿ ಮೋದಿ ಕಾರ್ಯಕ್ರಮ ಹೆಚ್ಚು ಆಯೋಜಿಸಲು ಚಿಂತನೆ ನಡೆಸಿದೆ.

ಮೋದಿ ಅಲ್ಲದೇ ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವುಳ್ಳ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರನ್ನೂ ಪ್ರಚಾರದಲ್ಲಿ ಸಮರ್ಥವಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸ್ಮೃತಿ ಇರಾನಿ, ದೇವೇಂದ್ರ ಫಡ್ನವೀಸ್‌ ಸೇರಿದಂತೆ ಹಲವರು ಪ್ರಚಾರದಲ್ಲಿ ತೊಡಗಲಿದ್ದಾರೆ.

ಬಿಜೆಪಿ ಪ್ಲ್ಯಾನ್‌ ಏನು?
ರಾಜ್ಯದಲ್ಲಿ ಒಟ್ಟು 224 ಕ್ಷೇತ್ರಗಳಿರುವುದರಿಂದ ಪ್ರತಿ 12-14 ಕ್ಷೇತ್ರಗಳಿಗೆ ಒಂದರಂತೆ ಬೃಹತ್ ಸಮಾವೇಶ (Modi Rally) ನಡೆಸಲು ಸಿದ್ಧತೆ ನಡೆದಿದೆ.  ರಾಜ್ಯವನ್ನು 6 ಭಾಗವನ್ನಾಗಿ ವಿಂಗಡಿಸಿರುವ ಬಿಜೆಪಿ ಪ್ರದೇಶವಾರು, ಕಾಂಗ್ರೆಸ್ (Congress), ಜೆಡಿಎಸ್ (JDS) ಭದ್ರಕೋಟೆಯಲ್ಲಿ ಹೆಚ್ಚು ಸಮಾವೇಶ ಆಯೋಜಿಸಲಿದೆ. ಪ್ರತಿ ಭಾಗದಲ್ಲಿ ಕನಿಷ್ಠ 3 ಕಾರ್ಯಕ್ರಮ ಆಯೋಜಿಸುವ ಸಾಧ್ಯತೆಯಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಟಾರ್ಗೆಟ್‌ ಮಾಡಿ ಹೈದರಾಬಾದ್ ಕರ್ನಾಟಕದಲ್ಲಿ ಹೆಚ್ಚು ಸಮಾವೇಶ ನಡೆಯಲಿದೆ. ಉಳಿದಂತೆ ಹಳೇ ಮೈಸೂರು, ಕರಾವಳಿ, ಕಿತ್ತೂರು, ಮಧ್ಯ ಕರ್ನಾಟಕ, ಬೆಂಗಳೂರು ಕೇಂದ್ರೀಕರಿಸಿ ಸಮಾವೇಶ ಆಯೋಜನೆಯಾಗಲಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 18-20 ಸ್ಥಾನಗಳನ್ನು ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಂತಿಮ ಫಲಿತಾಂಶ ಪ್ರಕಟವಾದಾಗ ಬಿಜೆಪಿ 25 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಮಾಡಿಕೊಂಡು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೂ ಬಿಜೆಪಿ ಈ ಪ್ರಮಾಣದ ಸ್ಥಾನವನ್ನು ಗೆಲ್ಲಲು ಕಾರಣವಾಗಿದ್ದು ಮೋದಿ ವರ್ಚಸ್ಸು. ಈ ಕಾರಣಕ್ಕೆ ಈ ಚುನಾವಣೆಯಲ್ಲೂ ಮೋದಿ ವರ್ಚಸ್ಸು ಬಳಸಿಕೊಂಡು ಬಿಜೆಪಿ ಮತ ಬೇಟೆ ಮಾಡಲು ಪ್ಲ್ಯಾನ್‌ ರೂಪಿಸಿದೆ.

Share This Article