ಮೈಸೂರು: ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಆಶೀರ್ವಾದ ಮಾಡಿ, ನನಗೆ ಶಕ್ತಿ ತುಂಬಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಾಂಸ್ಕೃತಿಕ ನಗರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಮಾಜಿ ಸಚಿವ, ನಟ ಅಂಬರೀಶ್ ಕನ್ನಡ ನಾಡಿನ ಜನರ ಹೃದಯದಲ್ಲಿದ್ದಾರೆ. ಅಂಬರೀಶ್ ಅವರು ಸುಮಲತಾ ಜೊತೆ ಸೇರಿಕೊಂಡು ಈ ಸಂಸ್ಕೃತಿ ಸೇವೆ ಮಾಡಿದ್ದಾರೆ. ಅವರನ್ನು ಗೆಲ್ಲಿಸಿ ಎಂದು ಮತದಾರರಿಗೆ ಮನವಿ ಮಾಡಿಕೊಂಡರು.
ಬಿಜೆಪಿ ವಿರೋಧಿ ಪಕ್ಷಗಳಿಗೆ ಗೊತ್ತಿರುವುದು ಮೋದಿ ಹಠಾವೋ, ಮೋದಿ ಹಠವೋ ಎನ್ನುವ ಮಾತು ಅಷ್ಟೇ. ಆದರೆ ನೀವು ನನಗೆ ತೋರಿಸುವ ಪ್ರೀತಿಯಿಂದ ಅವರಿಗೆ ನಿದ್ದೆ ಬರುತ್ತಿಲ್ಲ. ಕಾಂಗ್ರೆಸ್ ಓಡಿಸಿದರೆ ದೇಶದಲ್ಲಿ ಗರೀಬಿ ಹಠಾವೋ ಆಗುತ್ತದೆ. ಎಲ್ಲಿಯವರೆಗೂ ಈ ಚೌಕಿದಾರ ಇರುತ್ತಾನೋ ಅಲ್ಲಿಯವರೆಗೂ ನೀವು ಕಟ್ಟುವ ತೆರಿಗೆ ಹಣದ ಒಂದು ಪೈಸೆಯೂ ವ್ಯರ್ಥವಾಗಲ್ಲ ಎಂದು ಭರವಸೆ ನೀಡಿದರು.
ಕರ್ನಾಟಕದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ನಂಗಾನಾಚ್ ನಡೆಸುತ್ತಿದೆ. ಸಿಎಂ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ನವರು ಪಂಚಿಂಗ್ ಬ್ಯಾಗ್ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಈ ಹಿಂದೆ ಎಚ್.ಡಿ.ದೇವೇಗೌಡ ಪ್ರಧಾನಿಯಾಗಿದ್ದಾಗ ಅವರ ಬೆನ್ನಿಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಚೂರಿ ಹಾಕಿದ್ದರು. ಆ ಸೇಡನ್ನು ದೇವೇಗೌಡ ತೀರಿಸಿಕೊಳ್ಳಬಹುದು ಎನ್ನುವ ಭೀತಿ ಸೋನಿಯಾ ಗಾಂಧಿ ಅವರಿಗೆ ಕಾಡುತ್ತಿತ್ತು. ಕರ್ನಾಟಕದಿಂದ ಪುತ್ರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸಿದರೆ ಎಚ್.ಡಿ.ದೇವೇಗೌಡರೇ ಸೋಲಿಸುತ್ತಾರೆ ಎನ್ನುವ ಅನುಮಾನವಿತ್ತು. ಹೀಗಾಗಿ ಕೇರಳದ ವಯನಾಡಿನಿಂದ ರಾಹುಲ್ ಗಾಂಧಿ ಕಣಕ್ಕೆ ಇಳಿದರು ಎಂದು ಹೊಸ ಬಾಂಬ್ ಸಿಡಿಸಿದರು.
ಕಾಂಗ್ರೆಸ್ ದೇಶಕ್ಕೆ 2ಜಿ ಹಗರಣ ನೀಡಿತ್ತು. ಇದು ನೆನಪಿದೆಯಾ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದ ಮೋದಿ ಅವರು, ನಾವು ನಿಮ್ಮ ಕೈಗೆ ಕಡಿಮೆ ದರದಲ್ಲಿ ಸ್ಮಾರ್ಟ್ ಫೋನ್ ಕೊಟ್ಟಿದ್ದೇವೆ. ಇಂಟರ್ ನೆಟ್ ಡಾಟಾ ನೀಡಿದ್ದೇವೆ ಎಂದು ಹೇಳಿದರು.