ಬಾಗಲಕೋಟೆ: ಒಂದು ಕಡೆ ದಕ್ಷಿಣ ಕರ್ನಾಟಕದ ಮೊದಲ ಹಂತದ ಎಲೆಕ್ಷನ್ ಭರಾಟೆ ನಡೆಯುತ್ತಿದ್ದರೆ ಇತ್ತ ಉತ್ತರ ಕರ್ನಾಟಕದಲ್ಲಿ ಎರಡನೇ ಹಂತದ ಚುನಾವಣಾ ಪ್ರಚಾರ ಭರದಿಂದ ಸಾಗುತ್ತಿದೆ.
ಪ್ರಧಾನಿ ಮೋದಿ ಇಂದು ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶಿಸಲಿದ್ದಾರೆ. ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ದೇಶಾದ್ಯಂತ ನಾನಾ ಕ್ಷೇತ್ರಗಳಿಗೆ ಭೇಟಿ ನೀಡಿ ವಿಜಯ ಸಂಕಲ್ಪ ಯಾತ್ರೆ ಮೂಲಕ ರಣಕಹಳೆ ಮೊಳಗಿಸ್ತಿದ್ದಾರೆ.
ಇಂದು ಮಧ್ಯಾಹ್ನ 2:35ಕ್ಕೆ ಮೋದಿ ಬಾಗಲಕೋಟೆಗೆ ಆಗಮಿಸಲಿದ್ದಾರೆ. ಬಳಿಕ ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬೆಳಗಾವಿ ಅಭ್ಯರ್ಥಿ ಸುರೇಶ ಅಂಗಡಿ ಪರ ಮೋದಿ ಮತಯಾಚಿಸಲಿದ್ದಾರೆ.
ಬಿ.ಕೆ ಕಾಲೇಜಿನ ಮೈದಾನದಲ್ಲಿ ವೇದಿಕೆ ಸಿದ್ಧಗೊಂಡಿದ್ದು, ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಸಮಾವೇಶಕ್ಕೆ ಬೆಳಗಾವಿ, ಚಿಕ್ಕೋಡಿ ಹಾಗೂ ಮಹಾರಾಷ್ಟ್ರ ಭಾಗದಿಂದ 2 ಲಕ್ಷಕ್ಕೂ ಹೆಚ್ಚಿನ ಜನ ಆಗಮಿಸುವ ನಿರೀಕ್ಷೆ ಇದೆ. ಭದ್ರತೆಗೆ 150 ಪೊಲೀಸ್ ಅಧಿಕಾರಿ, 1,800 ಪೊಲೀಸರು ಹಾಗೂ ಎಸ್ಪಿಜಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ರೋಟರಿ ಸರ್ಕಲ್ ನಿಂದ ಜಿಲ್ಲಾಡಳಿತ ಭವನದ ಮುಖ್ಯರಸ್ಥೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಟ್ಟು ಒಂಬತ್ತು ಕಡೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಪ್ರಧಾನಿ ಮೋದಿಗೆ ಬೆಳ್ಳಿಯ ಬಿಲ್ಲು, ಬಾಣ ನೀಡಿ ಸನ್ಮಾನ ಮಾಡಲು ಬಿಜೆಪಿ ಮುಂದಾಗಿದೆ.