– ದೆಹಲಿ, ಬಂಗಾಳದ ವೃದ್ಧರಲ್ಲಿ ಕ್ಷಮೆಯಾಚಿಸಿದ ಪ್ರಧಾನಿ ಮೋದಿ
ನವದೆಹಲಿ: ಕೇಂದ್ರ ಸರ್ಕಾರದ ಪ್ರಮುಖ ಆರೋಗ್ಯ ವಿಮಾ ಯೋಜನೆ ‘ಆಯುಷ್ಮಾನ್ ಭಾರತ್’ (Ayushman Bharat) ಅನ್ನು 70 ವರ್ಷ ಮೇಲ್ಪಟ್ಟ ಎಲ್ಲರಿಗೂ ವಿಸ್ತರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದ್ದಾರೆ.
70 ವರ್ಷಕ್ಕಿಂತ ಮೇಲ್ಪಟ್ಟ ಜನರು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯುತ್ತಾರೆ. ಅವರಿಗೆ ‘ಆಯುಷ್ಮಾನ್ ವಯ ವಂದನಾ’ ಕಾರ್ಡ್ ನೀಡಲಾಗುವುದು ಎಂದು ಮಂಗಳವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋದಿ ಹೇಳಿದ್ದಾರೆ. ಇದನ್ನೂ ಓದಿ: 12,850 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಮಂಗಳವಾರ ಮೋದಿ ಚಾಲನೆ
ಯೋಜನೆಯ ಪ್ರಯೋಜನಗಳನ್ನು ಪಡೆಯಲು ಬಯಸುವ ವಯಸ್ಸಾದ ವ್ಯಕ್ತಿಯು ‘ಆಯುಷ್ಮಾನ್ ವಯ ವಂದನಾ ಕಾರ್ಡ್’ ಅನ್ನು ಹೊಂದಿರಬೇಕು. ಆದರೆ, ದೆಹಲಿ ಮತ್ತು ಬಂಗಾಳದ ಹಿರಿಯರು ಆಯುಷ್ಮಾನ್ ಭಾರತ್ ಯೋಜನೆ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ. ದೆಹಲಿ, ಬಂಗಾಳದ ವೃದ್ಧರಿಗೆ ನಾನು ಕ್ಷಮೆ ಯಾಚಿಸುತ್ತೇನೆ. ನಿಮಗೆ ಸಮಸ್ಯೆಯಾಗಬಹುದು, ಆದರೆ ದೆಹಲಿ, ಬಂಗಾಳ ಸರ್ಕಾರಗಳು ಯೋಜನೆಗೆ ಸೇರ್ಪಡೆಯಾಗದ ಹಿನ್ನೆಲೆಯಲ್ಲಿ ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಮೋದಿ ಕ್ಷಮೆಯಾಚಿಸಿದ್ದಾರೆ.
ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದದಲ್ಲಿ (AIIA) ಸುಮಾರು 12,850 ಕೋಟಿ ರೂ. ಮೌಲ್ಯದ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಬಹು ಯೋಜನೆಗಳ ಉದ್ಘಾಟನೆಯನ್ನು ಪ್ರಧಾನಿಗಳು ನೆರವೇರಿಸಿದರು. ಇದನ್ನೂ ಓದಿ: ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ – ಆರೋಪಿ ಅರೆಸ್ಟ್
ಈ ರಾಷ್ಟ್ರೀಯ ಆರೋಗ್ಯ ಯೋಜನೆಯು ಆಸ್ಪತ್ರೆಯ ವೆಚ್ಚಗಳಿಗಾಗಿ 5 ಲಕ್ಷದವರೆಗೆ ನೀಡುವ ಗುರಿಯನ್ನು ಹೊಂದಿದೆ. ರಾಜಕೀಯ ಹಿತಾಸಕ್ತಿಗಳು ನಿಮ್ಮ ರಾಜ್ಯಗಳಲ್ಲಿ (ದೆಹಲಿ ಮತ್ತು ಪಶ್ಚಿಮ ಬಂಗಾಳ) ಯೋಜನೆ ಅನುಷ್ಠಾನಕ್ಕೆ ಅಡ್ಡಿಪಡಿಸಿರುವುದು ವಿಷಾದನೀಯ ಎಂದು ಜನತೆಯಲ್ಲಿ ಪ್ರಧಾನಿ ಕ್ಷಮೆ ಕೋರಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯಿಂದ ಸುಮಾರು 4 ಕೋಟಿ ಜನರು ಪ್ರಯೋಜನ ಪಡೆದಿದ್ದಾರೆ. ಬಡವರಿಗಾಗಿ 5 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚವನ್ನು ಭರಿಸುವ ಮಹತ್ವದ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.