ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಸ್ಲಿಂ ಹೆಂಡತಿಯರ ಬಗ್ಗೆ ಇರುವ ಚಿಂತೆ ರಾಮ ಮಂದಿರದ ಬಗ್ಗೆ ಇಲ್ಲ ಎಂದು ಮಾಜಿ ಕಾಂಗ್ರೆಸ್ ಮುಖಂಡ, ಎಂಎಲ್ಸಿ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಇಬ್ರಾಹಿಂ, ರಾಮ ಮಂದಿರ ಸಮಸ್ಯೆಯನ್ನು ಬಗೆ ಹರಿಸುವ ಇಚ್ಛೆ ಬಿಜೆಪಿಗೆ ಇಲ್ಲ. ಇದಕ್ಕೆ 2019ರ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಸೂಕ್ತ ಉತ್ತರ ನೀಡುತ್ತಾರೆ. ಅಲ್ಲದೇ ಸದ್ಯ ನಡೆಯುತ್ತಿರುವ ಉಪಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿಯೂ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದರು.
ಇದೇ ವೇಳೆ ರಾಮ ಮಂದಿರ ಕಟ್ಟುವುದಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದು ತಿಳಿಸಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ನಮ್ಮದೇ ಹವಾ ಸೃಷ್ಟಿಸುತ್ತೇವೆ. ಆದರೆ ನಾನು ಬಿಜೆಪಿ ಪಕ್ಷ ಕೋಮುವಾದಿ ಎಂದು ವಿರೋಧ ಮಾಡುತ್ತಿಲ್ಲ. ಆದರೆ ಕಳೆದ ನಾಲ್ಕುವರೆ ವರ್ಷಗಳ ಆಡಳಿತದಲ್ಲಿ ಅವರು ದೇಶದ ಆರ್ಥಿಕ ನೀತಿಯನ್ನು ಹಾಳು ಮಾಡಿದ್ದಾರೆ. 70 ವರ್ಷಗಳ ಇತಿಹಾಸಲ್ಲಿಯೇ ಕೆಟ್ಟ ಆಡಳಿತ ನೀಡಿದ್ದಾರೆ. ಮೋದಿ ಅವರಿಗೆ ಮುಸ್ಲಿಂ ಹೆಂಡತಿಯರ ಬಗ್ಗೆ ಚಿಂತೆ ಇದೆ ಹೊರತು, ರಾಮ ಮಂದಿರದ ಬಗ್ಗೆ ಕಾಳಜಿ ಇಲ್ಲ. ರಾಮ ಮಂದಿರ ನಿರ್ಮಾಣ ಮಾಡುವುದು ಬಿಜೆಪಿಗೆ ಬೇಡವಾಗಿದೆ. ರಾಮ ಮಂದಿರ ಸಮಸ್ಯೆಯನ್ನ ಜೀವಂತವಾಗಿಡಲು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಅಯೋಧ್ಯೆ ವಿವಾದವನ್ನು ಬಗೆಹರಿಸಬೇಕೆಂಬ ಇಚ್ಛಾಶಕ್ತಿ ಬಿಜೆಪಿಗೆ ಇಲ್ಲ. ಈ ಹಿಂದೆ ಕರ್ನಾಟಕದ ಹುಬ್ಬಳ್ಳಿಯ ಈದ್ಗಾ ಮೈದಾನವನ್ನ ಇಟ್ಟುಕೊಂಡು ಬಿಜೆಪಿಯವರು ಮತಗಳನ್ನ ಕೇಳುತ್ತಿದ್ದರು. ಈಗ ಅಯೋಧ್ಯೆ ವಿವಾದವನ್ನು ಮುಂದಿಟ್ಟು ಬಿಜೆಪಿ ಮತ ಕೇಳುತ್ತಿದೆ. ಈಗಿನ ರಾಜಕೀಯ ಬಹಳ ಕೀಳು ಮಟ್ಟವನ್ನ ತಲುಪಿದೆ. ಬಿಜೆಪಿಯವರು ಹಿಂದೂ ಹಿಂದೂ ಎಂದು ಹೇಳುತ್ತಾರೆ. ಆದರೆ ಗುಡಿ ಮತ್ತು ಮಸೀದಿ ಕಟ್ಟುವುದು ಧರ್ಮ ಅಲ್ಲ. ಧರ್ಮ ಎಂದರೇ ಊಟ ಇಲ್ಲದವರಿಗೆ ಊಟ, ಮನೆ ಇಲ್ಲದವರಿಗೆ ಮನೆ ಕೊಡುವುದು ಎಂದರ್ಥ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಗೋ ಸಂರಕ್ಷಣೆ ಎಂದು ಹೇಳುವ ಬಿಜೆಪಿ ಮುಖಂಡರು ಉತ್ತರ ಪ್ರದೇಶದಲ್ಲಿ ಗೋ ಪೂಜೆ ಮಾಡಿ ಗೋವಾದಲ್ಲಿ ಏನೂ ಮಾಡುತ್ತಿದ್ದಾರೆ? ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದಿಂದ ಗೋ ಮಾಂಸ ರಪ್ತು ಹೆಚ್ಚಾಗಿದೆ. ಈ ಉದ್ಯಮದಲ್ಲಿ ಬಿಜೆಪಿ ನಾಯಕರ ಹೆಸರಿನಲ್ಲಿ ಹಲವಾರು ಕಂಪನಿಗಳು ಇವೆ ಎಂದು ಆರೋಪಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv