– ಭಾರತದಲ್ಲಿ ಹಿಂದೆಂದೂ ನೋಡದ ಬ್ರಿಡ್ಜ್ ನಿರ್ಮಾಣ
ಚೆನ್ನೈ: ರಾಮನವಮಿಯ ದಿನದಂದೇ ಪ್ರಧಾನಿ ನರೇಂದ್ರ ಮೋದಿ (PM Modi) ದೇಶದ ಮೊದಲ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆ ಮಾಡಿದ್ದಾರೆ. ಹೊಸ ಬ್ರಿಡ್ಜ್ ತಮಿಳುನಾಡು ಪ್ರಾವಸೋದ್ಯಮಕ್ಕೆ ಇನ್ನಷ್ಟು ವೇಗವನ್ನು ನೀಡಲಿದ್ದು, ಈ ಬ್ರಿಡ್ಜ್ ರಾಮೇಶ್ವರಂಗೆ ತೆರಳುವ ಭಕ್ತರಿಗೆ ಹಾಗೂ ಧನುಷ್ಕೋಡಿ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ.
ತಮಿಳುನಾಡಿನ (Tamil Nadu) ಪಂಬನ್ನಲ್ಲಿ ನಿರ್ಮಿಸಲಾದ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನ (Vertical Lift Sea Bridge) ಪ್ರಧಾನಿ ಮೋದಿ ಭಾನುವಾರ ಉದ್ಘಾಟಿಸಿದರು. ಮಧ್ಯಾಹ್ನ 12:30 ರ ಸಮಯಕ್ಕೆ ಪಂಬನ್ ಮತ್ತು ರಾಮೇಶ್ವರಂ ನಡುವಿನ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನ ಲೋಕಾರ್ಪಣೆ ಮಾಡಿದರು. ಇದೇ ವೇಳೆ ಅವರು ರಸ್ತೆ ಸೇತುವೆಯಿಂದ ರೈಲು ಮತ್ತು ಹಡಗು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ ಇಂದು ಉದ್ಘಾಟನೆ
ಈ ಹಳೇ ಪಂಬನ್ ರೈಲು ಸೇತುವೆಯನ್ನ 111 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ್ದು, ಹಳೆಯ ಸೇತುವೆ ಶಿಥಿಲಗೊಂಡಿದ್ದರಿಂದ ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಿಸಲಾಗಿದೆ. ಹಳೇ ಬ್ರಿಡ್ಜ್ ಮಾನವ ಸಹಿತವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಈ ನೂತನ ಬ್ರಿಡ್ಜ್ ಮಾನವ ರಹಿತವಾಗಿ ಕಾರ್ಯನಿರ್ವಹಿಸುತ್ತೆ. ಇದು ಎಲೆಕ್ಟ್ರಿಕಲ್ ಆಟೋಮೆಕ್ಯಾನಿಕಲ್ ತಂತ್ರಜ್ಞಾನ ಒಳಗೊಂಡಿದೆ. ಹಳೇ ಬ್ರಿಡ್ಜ್ ತೆರೆದುಕೊಳ್ಳಲು 45 ನಿಮಿಷ ಕಾಲಾವಕಾಶ ತೆಗೆದುಕೊಳ್ಳುತ್ತಿತ್ತು. ಆದರೆ ಹೊಸ ಬ್ರಿಡ್ಜ್ 5.3 ನಿಮಿಷದಲ್ಲಿ ತೆರೆದುಕೊಳ್ಳಲಿದೆ.
ಸುಮಾರು 2.5 ಕಿಲೋ ಮೀಟರ್ ಉದ್ದದ ದೇಶದ ಮೊದಲ ವರ್ಟಿಕಲ್ ಲಿಫ್ಟ್ ರೈಲು ಸೇತುವೆ ಇದಾಗಿದ್ದು, ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಮುಖ್ಯಭೂಮಿಯಿಂದ ರಾಮೇಶ್ವರಂಗೆ 5 ನಿಮಿಷದ ಪ್ರಯಾಣಿಸಬಹುದಾಗಿದೆ. ಒಟ್ಟು 535 ಕೋಟಿ ರೂಪಾಯಿ ವೆಚ್ಚದಲ್ಲಿ ಈ ವರ್ಟಿಕಲ್ ಲಿಫ್ಟ್ ಸೇತುವೆಯನ್ನ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ರಾಮನವಮಿ| ಅಯೋಧ್ಯೆ ಬಾಲರಾಮನ ಹಣೆ ಮೇಲೆ ಮೂಡಿದ ʼಸೂರ್ಯ ತಿಲಕʼ
ಏನಿದರ ವಿಶೇಷತೆ?
* ಇದು ಭಾರತದಲ್ಲಿ ಮೊದಲ ಬಾರಿಗೆ ನಿರ್ಮಾಣವಾದ ವರ್ಟಿಕಲ್ ಲಿಫ್ಟ್ ರೈಲ್ವೆ ಸೇತುವೆಯಾಗಿದೆ. ಈ ಸೇತುವೆ ರಾಮೇಶ್ವರಂ (ಪಾಂಬನ್ ದ್ವೀಪ) ಮತ್ತು ತಮಿಳುನಾಡಿನ ಮುಖ್ಯ ಭೂಭಾಗವಾದ ಮಂಡಪಂ ಅನ್ನು ಸಂಪರ್ಕಿಸುತ್ತದೆ.
* ಈ ಸೇತುವೆಯ ಮಧ್ಯ ಭಾಗವು 17 ಮೀಟರ್ ಎತ್ತರಕ್ಕೆ ಲಂಬವಾಗಿ ಮೇಲೇರಬಲ್ಲದು. ಇದರಿಂದಾಗಿ ದೊಡ್ಡ ಜಹಾಜುಗಳು ಮತ್ತು ಹಡಗುಗಳು ಸೇತುವೆಯ ಕೆಳಗಿನಿಂದ ಸುಲಭವಾಗಿ ದಾಟಬಹುದು.
* ಹಳೆಯ ಪಾಂಬನ್ ಸೇತುವೆ ತೆರೆಯಲು 45 ನಿಮಿಷಗಳಷ್ಟು ಸಮಯ ತೆಗೆದುಕೊಳ್ಳುತ್ತಿತ್ತು ಮತ್ತು ತಾಂತ್ರಿಕ ಸಮಸ್ಯೆಗಳು ಹೆಚ್ಚಾಗಿದ್ದವು. ಆದರೆ ಈ ಹೊಸ ಸೇತುವೆಯನ್ನು ತೆರೆಯಲು ಕೇವಲ 5 ನಿಮಿಷಗಳಷ್ಟೇ ಸಮಯ ಬೇಕಾಗುತ್ತದೆ. ಇದು ಸಮಯ ಉಳಿತಾಯ ಮತ್ತು ಸಮರ್ಥ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸುತ್ತದೆ.
* ಈ ಸೇತುವೆಯನ್ನು ಡಬಲ್ ಟ್ರ್ಯಾಕ್ಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ, ಇದರಿಂದ ಎರಡು ರೈಲುಗಳು ಏಕಕಾಲದಲ್ಲಿ ಸಂಚರಿಸಬಹುದು. ಇದು ಭವಿಷ್ಯದಲ್ಲಿ ರೈಲು ಸಂಚಾರದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
* ಈ ಸೇತುವೆಯನ್ನು ಹೆಚ್ಚಿನ ವೇಗದ ರೈಲುಗಳಿಗೆ ಸಹ ಸೂಕ್ತವಾಗುವಂತೆ ನಿರ್ಮಿಸಲಾಗಿದೆ. ಇದು ಆಧುನಿಕ ರೈಲ್ವೆ ಸಾರಿಗೆಗೆ ದೀರ್ಘಕಾಲೀನ ಪರಿಹಾರವನ್ನು ಒದಗಿಸುತ್ತದೆ.
* ಸೇತುವೆಯ ಒಟ್ಟು ಉದ್ದ 2.08 ಕಿಲೋಮೀಟರ್ ಆಗಿದ್ದು, ಇದು ಮನ್ನಾರ್ ಕೊಲ್ಲಿಯಲ್ಲಿ ಸಮುದ್ರದ ಮೇಲೆ ನಿರ್ಮಾಣವಾಗಿದೆ. ಇದು ರಾಮೇಶ್ವರಂ ದ್ವೀಪವನ್ನು ಮುಖ್ಯ ಭೂಭಾಗದೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ.
* ಇದರ ವಿನ್ಯಾಸ ಮತ್ತು ನಿರ್ಮಾಣವು ಆಧುನಿಕ ಎಂಜಿನಿಯರಿಂಗ್ನ ಉತ್ತಮ ಉದಾಹರಣೆಯಾಗಿದೆ. ಇದನ್ನು ವಿಶ್ವದ ಅತ್ಯುತ್ತಮ ಆರ್ಕಿಟೆಕ್ಚರ್ಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿದೆ.
* ಹೊಸ ತಂತ್ರಜ್ಞಾನದ ಬಳಕೆಯಿಂದ ಈ ಸೇತುವೆಯನ್ನು ಸಮುದ್ರದ ತೀವ್ರ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ಮತ್ತು ಸುರಕ್ಷಿತವಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.