ನವದೆಹಲಿ: ರಾಜ್ಯಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ. ಯಾವುದಾದರೂ ಒಂದು ರಾಜ್ಯಕ್ಕೆ ಧಕ್ಕೆಯಾದರೆ ದೇಶಕ್ಕೆ ಧಕ್ಕೆಯಾದಂತೆ . ನನ್ನ ತೆರಿಗೆ, ನನ್ನ ಹಕ್ಕು ದೇಶಕ್ಕೆ ಮಾರಕ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಭಾಷಣ ಮಾಡಿದ ಮಾಡಿದ ಅವರು ಕಾಂಗ್ರೆಸ್ (Congress) ಈಗ ಉತ್ತರ-ದಕ್ಷಿಣದ ಹೆಸರಿನಲ್ಲಿ ದೇಶವನ್ನು ಒಡೆಯಲು ಮುಂದಾಗುತ್ತಿದೆ ಎಂದು ಹೇಳುವ ಮೂಲಕ ಡಿಕೆ ಸುರೇಶ್ (DK Suresh) ವಿರುದ್ಧ ವಾಗ್ದಾಳಿ ನಡೆಸಿದರು.
ರಾಷ್ಟ್ರವೆಂದರೆ ನಮಗೆ ಕೇವಲ ಒಂದು ತುಂಡು ಭೂಮಿ ಅಲ್ಲ. ನಮಗೆಲ್ಲರಿಗೂ ಇದು ಸ್ಪೂರ್ತಿ ನೀಡುವ ಜಾಗ. ದೇಹದ ಒಂದು ಅಂಗವು ಕಾರ್ಯನಿರ್ವಹಿಸದಿದ್ದರೆ, ಇಡೀ ದೇಹವನ್ನು ನಿಷ್ಕ್ರಿಯವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ ದೇಶದ ಒಂದು ಮೂಲೆಯಲ್ಲಿ ಅಭಿವೃದ್ದಿಯಿಲ್ಲದಿದ್ದರೆ ದೇಶ ಅಭಿವೃದ್ಧಿಯಾಗಲಾರದು ಎಂದು ಹೇಳಿದರು.
ರಾಜಕೀಯ ಸ್ವಾರ್ಥದಿಂದ ದೇಶ ಒಡೆಯುವ ಹೊಸ ಕಥೆಗಳು ಸೃಷ್ಟಿಯಾಗುತ್ತಿದೆ. ದೇಶಕ್ಕೆ ಇದಕ್ಕಿಂತ ದೊಡ್ಡ ದೌರ್ಭಾಗ್ಯ ಏನಿದೆ? ಇಂತಹ ಮನಸ್ಥಿತಿ ರಾಷ್ಟ್ರೀಯ ಪಕ್ಷದಿಂದ ಹೊರಬರುತ್ತಿದೆ. ಇದು ದುರದೃಷ್ಟಕರ. ಇದು ದೇಶದ ಭವಿಷ್ಯಕ್ಕೆ ಅಪಾಯಕಾರಿ. ಕಾಂಗ್ರೆಸ್ ಈಗ ದೇಶವನ್ನು ವಿಭಜಿಸುವ ಹೇಳಿಕೆ ನೀಡುವ ಹವ್ಯಾಸ ಬೆಳೆಸಿಕೊಂಡಿದೆ ವಾಗ್ದಾಳಿ ನಡೆಸಿದರು.
ಒಂದು ವರ್ಷ ಕಾಲ ನಡೆದ ಜಿ20 ವಿವಿಧ ಸಭೆಗಳನ್ನು ಉಲ್ಲೇಖಿಸಿದ ಅವರು, ಜಿ20ಗೆ ಸಂಬಂಧಿಸಿದ ಎಲ್ಲಾ ಸಭೆಗಳನ್ನು ಸರ್ಕಾರ ದೆಹಲಿಯಲ್ಲೇ ನಡೆಸಬಹುದಿತ್ತು. ಆದರೆ ನಾವು ಆ ರೀತಿ ಮಾಡಲಿಲ್ಲ. ಎಲ್ಲಾ ರಾಜ್ಯಗಳಲ್ಲಿ ಸಭೆ ಆಯೋಜಿಸಿದ್ದೇವೆ. ಈ ರಾಜ್ಯಕ್ಕೆ ವಿದೇಶಿ ಅತಿಥಿಗಳು ಬರಲಿ. ಪ್ರವಾಸೋದ್ಯಮ ಅಭಿವೃದ್ಧಿಯಾಗಲಿ. ರಾಜ್ಯ ಪ್ರಸಿದ್ಧ ಸ್ಥಳಗಳು ವಿದೇಶಿಯರಿಗೆ ತಿಳಿಯಲಿ ಎಂಬ ಕಾರಣ ರಾಜ್ಯಗಳಲ್ಲಿ ಒಂದೊಂದು ಸಭೆ ಆಯೋಜಿಸಿದ್ದೆವು. ರಾಜ್ಯಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ. ರಾಜ್ಯಗಳು ಅಭಿವೃದ್ಧಿ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟರೆ ನಾನು ಎರಡು ಹೆಜ್ಜೆ ಮುಂದೆ ಇಡುತ್ತೇನೆ ಎಂದು ಹೇಳಿದರು.