ಮಂಡ್ಯ: ಎಂಬಿಎ ಪದವಿಯಲ್ಲಿ ಕಾಲೇಜಿಗೆ ಅತೀ ಹೆಚ್ಚು ಅಂಕ ಪಡೆದು ಶುಲ್ಕ ಕಟ್ಟಲು ಸಂಕಟ ಪಡುತ್ತಿದ್ದ ಮುಸ್ಲಿಂ ಯುವತಿಯೊಬ್ಬರ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ್ದು, ಇದೀಗ ವಿದ್ಯಾರ್ಥಿನಿ ಮೋದಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಮಂಡ್ಯ ನಗರದ ನಿವಾಸಿಯಾದ ಅಬ್ದುಲ್ ಇಲಿಯಾಸ್ ಎಂಬುವರ ಮಗಳು ಸಾರಾ, ನಗರದ ಪಿಇಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಎಗೆ ದಾಖಲಾತಿ ಪಡೆದಿದ್ದರು. ಆದ್ರೆ, ಕಾಲೇಜಿನ ಶುಲ್ಕ ಕಟ್ಟಲು ಹಣವಿಲ್ಲದ ಕಾರಣ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಲೋನ್ಗೆ ಮನವಿ ಸಲ್ಲಿಸಿದ್ರು. ಬ್ಯಾಂಕ್ ನಿಯಮದ ಪ್ರಕಾರ ನಿಮಗೆ ಲೋನ್ ನೀಡಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದರು.
ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ 11ರ ಪಾಕ್ ಬಾಲಕಿಯಿಂದ ಮೋದಿಗೆ ಶುಭಾಶಯ!
ಇದರಿಂದ ಖಾಸಗಿ ಸಾಲ ಮಾಡಿ ಅರ್ಧದಷ್ಟು ಶುಲ್ಕ ಕಟ್ಟಿದ್ದ ವಿದ್ಯಾರ್ಥಿನಿ, ತಮಗೆ ಬ್ಯಾಂಕ್ನಿಂದ ಲೋನ್ ಪಡೆಯಲು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ರು. ವಿದ್ಯಾರ್ಥಿನಿ ಪತ್ರ ಬರೆದ ಕೇವಲ ಹತ್ತೇ ದಿನದಲ್ಲಿ ಪ್ರಧಾನಿ ಕಚೇರಿಯಿಂದ ಕರ್ನಾಟಕ ಚೀಫ್ ಸೆಕ್ರೆಟರಿ ಅವರಿಗೆ, ವಿದ್ಯಾರ್ಥಿನಿ ಸಾರಾ ಅವರಿಗೆ ಸಹಾಯ ಮಾಡುವಂತೆ ಪತ್ರ ಬಂದಿತ್ತು. ಆ ಪತ್ರವನ್ನು ತೆಗೆದುಕೊಂಡು ಮತ್ತೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಸಾರಾ ಲೋನ್ಗೆ ಮನವಿ ಸಲ್ಲಿಸಿದ್ರು. ಆದರೂ ಬ್ಯಾಂಕ್ ಲೋನ್ ಕೊಡಲು ನಿರಾಕರಿಸಿದೆ. ಆದರೆ ಪ್ರಧಾನಿ ಪತ್ರವನ್ನ ಗಮನಿಸಿದ ವಿಜಯಾ ಬ್ಯಾಂಕ್ ಸಾರಾಗೆ ಲೋನ್ ನೀಡಿ ಸಹಾಯ ಮಾಡಿದೆ.
ಇದೀಗ ಕಾಲೇಜಿನ ಸಂಪೂರ್ಣ ಶುಲ್ಕ ಪಾವತಿಸಿರುವ ವಿದ್ಯಾರ್ಥಿನಿ ಸಾರಾ ಮತ್ತು ಆಕೆಯ ತಂದೆ ಅಬ್ದುಲ್ ಇಲಿಯಾಜ್, ನಮ್ಮಂತ ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಪ್ರಧಾನಿ ಮೋದಿ ನಿಜವಾದ ಜನನಾಯಕ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.