– ದ್ವಿಪಕ್ಷೀಯ ಮಾತುಕತೆಯಲ್ಲಿ ಆರ್ಥಿಕ, ರಕ್ಷಣಾ ಒಪ್ಪಂದ
– 2 ದಿನಗಳ ಭೇಟಿಗೆ ಆಗಮಿಸಿದ ಜರ್ಮನ್ ಚಾನ್ಸಲರ್
ಗಾಂಧೀನಗರ: ಜರ್ಮನ್ ಚಾನ್ಸೆಲರ್ ಫ್ರೀಡ್ರಿಕ್ ಮೆರ್ಜ್ (German Chancellor Friedrich Merz) ಅವರು ತಮ್ಮ ಮೊದಲ ಏಷ್ಯಾ ಪ್ರವಾಸದಲ್ಲಿ ಭಾರತಕ್ಕೆ ಭೇಟಿ ನೀಡಿ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಈ ವೇಳೆ ಪಹಲ್ಗಾಮ್ ದಾಳಿ ಮತ್ತು ದೆಹಲಿ ಸ್ಫೋಟವನ್ನು ಜಂಟಿಯಾಗಿ ಖಂಡಿಸಿದರು.
ಇಬ್ಬರು ನಾಯಕರು ಅಹಮದಾಬಾದ್ನ (Ahmedabad) ಗಾಂಧಿ ಆಶ್ರಮಕ್ಕೆ ಭೇಟಿ ನೀಡಿ, ಮಹಾತ್ಮ ಗಾಂಧಿಯ (Mahatma Gandhi) ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಸಬರಮತಿ ನದಿ ತೀರದಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಉದ್ಘಾಟಿಸಿ, ಮಹಿಳಾ ಕಲಾವಿದರೊಂದಿಗೆ ಸಂವಾದ ನಡೆಸಿ, ಗಾಳಿಪಟ ಹಾರಿಸಿದರು. ಈ ಉತ್ಸವದಲ್ಲಿ 50 ದೇಶಗಳಿಂದ 135 ಗಾಳಿಪಟ ಹಾರಿಸುವವರು ಮತ್ತು 1,000ಕ್ಕೂ ಹೆಚ್ಚು ಭಾರತೀಯರು ಭಾಗವಹಿಸಿದ್ದರು. ದ್ವಿಪಕ್ಷೀಯ ಮಾತುಕತೆಯಲ್ಲಿ ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಶಿಕ್ಷಣ, ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಇದನ್ನೂ ಓದಿ: ನಾವು ನಿಜವಾದ ಸ್ನೇಹಿತರು, ಮುಂದಿನ ವರ್ಷದ ಒಳಗಡೆ ಭಾರತಕ್ಕೆ ಬರಲಿದ್ದಾರೆ ಟ್ರಂಪ್: ಅಮೆರಿಕ
ಈ ವೇಳೆ ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿ (Pahalgam Attack) ಮತ್ತು ನವೆಂಬರ್ 10ರಂದು ನಡೆದ ದೆಹಲಿ ಸ್ಫೋಟವನ್ನು (Delhi Blast) ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ತೀವ್ರವಾಗಿ ಖಂಡಿಸಿದರು.
ನಂತರ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಜರ್ಮನ್ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್ ಸ್ಥಾಪಿಸಲು ಆಹ್ವಾನ ನೀಡಲಾಯಿತು. ಅಲ್ಲದೆ, ನವೀಕರಣೀಯ ಇಂಧನದಲ್ಲಿ ಸಹಕಾರಕ್ಕಾಗಿ ಭಾರತ-ಜರ್ಮನಿ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಯಿತು. ಗ್ರೀನ್ ಅಮೋನಿಯಾ ಕ್ಷೇತ್ರದಲ್ಲಿ ಜರ್ಮನಿಯ ಯುನಿಪರ್ ಮತ್ತು ಭಾರತದ ಎಎಂ ಗ್ರೀನ್ ನಡುವೆ ದೀರ್ಘಕಾಲೀನ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರಡಿ ವಾರ್ಷಿಕ 5 ಲಕ್ಷ ಟನ್ ಗ್ರೀನ್ ಅಮೋನಿಯಾ ಸರಬರಾಜು ಮಾಡಲಾಗುವುದು. ಯುಎನ್ ಸುರಕ್ಷಾ ಮಂಡಳಿ ಅಭಿವೃದ್ಧೀಗಾಗಿ ಜಿ4 ಗುಂಪಿನ ಮೂಲಕ ಜಂಟಿ ಪ್ರಯತ್ನಗಳನ್ನು ಮುಂದುವರಿಸುವುದಾಗಿ ಒಪ್ಪಿಕೊಳ್ಳಲಾಯಿತು.
It was a pleasure hosting Chancellor Friedrich Merz in Ahmedabad. His visit has infused new momentum into India–Germany ties, as we mark 25 years of our Strategic Partnership and 75 years of diplomatic relations. India is honoured that he has chosen our nation as the place of his… pic.twitter.com/at5m1KO5NV
— Narendra Modi (@narendramodi) January 12, 2026
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ದ್ವಿಪಕ್ಷೀಯ ವ್ಯಾಪಾರ 50 ಬಿಲಿಯನ್ ಡಾಲರ್ ದಾಟಿದ್ದು, ಭಾರತದಲ್ಲಿ 2,000ಕ್ಕೂ ಹೆಚ್ಚು ಜರ್ಮನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಈ ಮೂಲಕ ಭಾರತದ 8%ಕ್ಕಿಂತ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸಲಾಗಿದೆ. ಇದೇ ವೇಳೆ ಜರ್ಮನ್ ಉದ್ಯಮಗಳನ್ನು ಭಾರತದಲ್ಲಿ ಉತ್ಪಾದನೆ ಮತ್ತು ರಫ್ತುಗಾಗಿ ಆಹ್ವಾನಿಸಿದರು. ಭಾರತೀಯ ನಾಗರಿಕರಿಗೆ ವೀಸಾ-ಮುಕ್ತ ಟ್ರಾನ್ಸಿಟ್ ಘೋಷಿಸಿದ್ದಕ್ಕಾಗಿ ಮೆರ್ಜ್ ಅವರಿಗೆ ಧನ್ಯವಾದ ಅರ್ಪಿಸಿದರು. ಭಾರತ ಮತ್ತು ಜರ್ಮನಿ ಯಾವಾಗಲೂ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿವೆ ಮತ್ತು ಅವರ ಸ್ನೇಹದ ಪರಿಣಾಮ ಜಾಗತಿಕ ಮಟ್ಟದಲ್ಲಿ ಗೋಚರಿಸುತ್ತಿದೆ. ಜಾಗತಿಕ ದಕ್ಷಿಣದ ದೇಶಗಳ ಅಭಿವೃದ್ಧಿಗಾಗಿ ಭಾರತ ಮತ್ತು ಜರ್ಮನಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ ಎಂದು ಹೇಳಿದರು.

ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಮಾತನಾಡಿ, ಎಲ್ಲಾ ದೇಶಗಳು ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಬದುಕಬಹುದಾದ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಜರ್ಮನಿ ಬೆಂಬಲಿಸುತ್ತದೆ. ಭಾರತ-ಜರ್ಮನಿ ಅಥವಾ ಇತರ ಯುರೋಪಿಯನ್ ಪಾಲುದಾರರಾಗಿರಲಿ, ಪ್ರತಿಯೊಂದು ವಿಷಯದ ಬಗ್ಗೆಯೂ ಎಲ್ಲರೂ ಒಂದೇ ಅಭಿಪ್ರಾಯವನ್ನು ಹೊಂದಿಲ್ಲ. ಆದರೆ ಇದರ ಹೊರತಾಗಿ ಪ್ರಮುಖ ವಿಷಯಗಳಲ್ಲಿ ಎರಡೂ ದೇಶಗಳ ನಡುವೆ ಬಲವಾದ ಒಮ್ಮತ ಮತ್ತು ಸಹಕಾರವಿದೆ. ಭಾರತವು ಜರ್ಮನಿಗೆ ವಿಶ್ವಾಸಾರ್ಹ ಮತ್ತು ಆದ್ಯತೆಯ ಪಾಲುದಾರ ಎಂದು ಹೇಳಿದರು.
Today’s discussions with Chancellor Friedrich Merz will further energise the India-Germany partnership!@bundeskanzler@_FriedrichMerz pic.twitter.com/9QCGfVWGu3
— Narendra Modi (@narendramodi) January 12, 2026
ಇರಾನ್ ಜನರು ಸ್ವಾತಂತ್ರ್ಯ ಮತ್ತು ಉತ್ತಮ ಜೀವನಕ್ಕಾಗಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾರೆ ಮತ್ತು ಇದು ಅವರ ಹಕ್ಕು. ಪ್ರತಿಭಟನಾಕಾರರ ಧೈರ್ಯವನ್ನು ಶ್ಲಾಘಿಸಿ, ಅವರು ಹಿಂಸಾಚಾರವನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ. ಇದಕ್ಕಾಗಿ ಇರಾನ್ ಸರ್ಕಾರ ನಾಗರಿಕರನ್ನು ಬೆದರಿಸುವ ಬದಲು ರಕ್ಷಿಸುವಂತೆ ಮನವಿ ಮಾಡಿದರು. ಇರಾನಿನ ಜನರ ವಿರುದ್ಧ ನಡೆಸಲಾಗುತ್ತಿರುವ ಹಿಂಸಾಚಾರವು ಶಕ್ತಿಯ ಸಂಕೇತವಲ್ಲ, ದೌರ್ಬಲ್ಯದ ಸಂಕೇತವಾಗಿದೆ ಮತ್ತು ಅದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರೊಂದಿಗೆ ಕಾರಿನಲ್ಲಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದು, `ಭಾರತ ಮತ್ತು ಜರ್ಮನಿ ನಡುವಿನ ಸ್ನೇಹವು ಮೌಲ್ಯಗಳ ಹಂಚಿಕೆ, ವ್ಯಾಪಕ ಸಹಕಾರ ಮತ್ತು ಪರಸ್ಪರ ತಿಳುವಳಿಕೆಯ ಮೂಲಕ ನಿರಂತರವಾಗಿ ಬಲಗೊಳ್ಳುತ್ತಿದೆ’ ಎಂದು ಬರೆದಿದ್ದಾರೆ.ಇದನ್ನೂ ಓದಿ: 1947ರ ಬಳಿಕ ಫಸ್ಟ್ ಟೈಮ್ – ಮಕರ ಸಂಕ್ರಾಂತಿಯಂದು ಪ್ರಧಾನಿ ಮೋದಿ ಹೊಸ ಕಚೇರಿಗೆ ಶಿಫ್ಟ್

