ಬೆಂಗಳೂರು: ಜೀವ ಉಳಿಸಿಕೊಡುತ್ತೇನೆಂದು ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಬಾಲಕನೋರ್ವ ತಮ್ಮ ಪೋಷಕರೊಂದಿಗೆ ಸಿಎಂ ಕುಮಾರಸ್ವಾಮಿಗೆ ಅಂಗಲಾಚಿಕೊಳ್ಳುತ್ತಿದ್ದಾನೆ.
ಮನೋಜ್ ಕುಮಾರ್ ಜೀವ ಉಳಿಸಿಕೊಳ್ಳಲು ಅಂಗಲಾಚುತ್ತಿರುವ ಬಾಲಕ. ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಲಕ್ಕರಸನಪಾಳ್ಯದ ಮಹದೇವಪ್ಪ ಹಾಗೂ ಜ್ಯೋತಿ ದಂಪತಿಯ ಒಬ್ಬನೇ ಮಗನಾಗಿದ್ದು, ಎಲ್ಲರಂತೆ ಚೆನ್ನಾಗಿ ಆಟವಾಡಿಕೊಂಡು ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ಭೀಕರ ಕಾಯಿಲೆಯಿಂದಾಗಿ ಆಸ್ಪತ್ರೆಯ ಬೆಡ್ ಮೇಲೆಯೇ ಮಲಗುವ ಸ್ಥಿತಿಯಲ್ಲಿದ್ದಾನೆ.
ಇನ್ನೂ ಒಂದು ತಿಂಗಳಲ್ಲಿ ಬಾಲಕ ಮನೋಜ್ಗೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡದೇ ಹೋದರೆ, ಒಂದು ತಿಂಗಳು ಮಾತ್ರ ಬದುಕಿರುವುದಾಗಿ ವೈದ್ಯರು ಹೇಳಿದ್ದಾರೆ. ಆದರೆ ಶಸ್ತ್ರಚಿಕಿತ್ಸೆಗೆ ಸುಮಾರು 13 ಲಕ್ಷ ರೂಪಾಯಿ ಹಣ ಬೇಕಾಗಿರುವುದರಿಂದ, ಹಣ ಭರಿಸಲು ಶಕ್ತವಿಲ್ಲದ ಕುಟುಂಬ ಸಿಎಂ ಕುಮಾರಸ್ವಾಮಿಯವರ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ದತ್ತು ಪಡೆದ ಬಾಲಕನನ್ನ ನಡುನೀರಿನಲ್ಲಿ ಕೈ ಬಿಟ್ಟ ಬಿಎಸ್ವೈ!
ಪೋಷಕರು ಈ ಮೊದಲು ಕೊಳ್ಳೇಗಾಲದಲ್ಲಿ ನಡೆದ ವಿಕಾಸ ಪರ್ವದ ವೇಳೆ ಮನೋಜ್ನ ಅನಾರೋಗ್ಯದ ಕುರಿತು ಕುಮಾರಸ್ವಾಮಿಯವರಿಗೆ ಮನವಿ ಮಾಡಿಕೊಂಡಿದ್ದರು. ಆಗ ಬಾಲಕನನ್ನು ಉಳಿಸಿಕೊಡುವುದು ನನ್ನ ಜವಬ್ದಾರಿ ಎಂದು ಕುಮಾರಸ್ವಾಮಿ ಮಾತು ಕೊಟ್ಟಿದ್ದರು. ಇದಾದ ಬಳಿಕ ಪುನಃ ಶಿರಾ ಹಾಗೂ ಹಾಸನದ ವಿಕಾಸ ಪರ್ವದ ಸಮಯದಲ್ಲಿ ಪ್ರಸ್ತಾಪಿಸಿದಾಗ, ಚಿಕಿತ್ಸೆ ನೀಡುವ ಕುರಿತು ಮಾತನಾಡಿದ್ದರು. ಅಲ್ಲದೇ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಜನತಾ ದರ್ಶನದಲ್ಲೂ ಪಾಲ್ಗೊಂಡು ಮಗನನ್ನು ಉಳಿಸಿಕೊಡುವಂತೆ ಅಂಗಲಾಚಿದ್ದರು. ಆದರೆ ಬರೀ ಭರವಸೆಗಳನ್ನೇ ನೀಡುತ್ತಿದ್ದರೆ, ನಮ್ಮ ಮಗ ನಮ್ಮಿಂದ ದೂರವಾಗುತ್ತಾನೆ. ಕೂಡಲೇ ಅವನಿಗೆ ಚಿಕಿತ್ಸೆಗೆ ನೆರವು ನೀಡಿ ಎಂಬುದು ಪೋಷಕರ ಮನವಿಯಾಗಿದೆ.
ಈಗಾಗಲೇ ಬಾಲಕನ ಜೀವ ಇಂಚಿಂಚಾಗಿ ಅಳಿದು ಹೋಗುತ್ತಿದ್ದು, ದೇಹದಲ್ಲಿ ರಕ್ತ ಕೂಡ ಉತ್ಪತ್ತಿಯಾಗುತ್ತಿಲ್ಲ. ಬಾಲಕನಿಗೆ ಮೂರು ದಿನಗಳಿಗೊಮ್ಮೆ ಕಡ್ಡಾಯವಾಗಿ ರಕ್ತ ಕೊಡಿಸಲೇಬೇಕು. ಸದ್ಯ ಎರಡು ಹೊಟ್ಟೆ ಆಪರೇಷನ್ ಮಾಡಿದ್ದು, ಅದರಲ್ಲಿ ಸಣ್ಣ ಕರುಳನ್ನ 23 ಸೆಂ.ಮೀ ಕತ್ತರಿಸಿದ್ದಾರೆ. ಇದರಿಂದಾಗಿ ರಾತ್ರಿ ನೋವಿನಲ್ಲೇ ನರಳಾಡಿ ಒದ್ದಾಡುತ್ತಿದ್ದಾನೆ. ಈಗಲಾದರೂ ನಮ್ಮ ಮಗನನ್ನು ಸಿಎಂ ಕುಮಾರಸ್ವಾಮಿಯವರು ಉಳಿಸಿ ಕೋಡುತ್ತಾರೆಯೇ ಎನ್ನುವ ನಿರೀಕ್ಷೆಯಲ್ಲಿ ಪೋಷಕರು ಕಾಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv