ಹಾಸನ: ರಾಜ್ಯದಲ್ಲಿ ಪಠ್ಯ ಪುಸ್ತಕ ವಿಚಾರ ಚರ್ಚೆಯಲ್ಲಿರುವಾಗಲೇ, ‘ಸರ್ ನಮಗೆ ಪಠ್ಯ ಪುಸ್ತಕ ಯಾವಾಗ ಕೊಡ್ತೀರಾ, ನಮಗೆ ತೊಂದರೆಯಾಗ್ತಿದೆ’ ಎಂದು ಮಕ್ಕಳು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಪ್ರಶ್ನಿಸಿದ್ದಾರೆ.
ಮಂಗಳವಾರ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆಯುತ್ತಿರುವ ರಣಘಟ್ಟ ನೀರಾವರಿ ಯೋಜನೆ ವೀಕ್ಷಣೆಗೆ ಸಿ.ಟಿ.ರವಿ ಆಗಮಿಸಿದ್ದರು. ಈ ವೇಳೆ ಚಿಲ್ಕೂರು ಗೇಟ್ ಬಳಿ ಕಾರ್ಯಕರ್ತರನ್ನು ನೋಡಿ ಕಾರು ನಿಲ್ಲಿಸಿದ್ದರು. ಅದೇ ಸಂದರ್ಭ ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳು ಸಿ.ಟಿ.ರವಿ ಅವರನ್ನು ನೋಡಿ ತಕ್ಷಣ ಅವರ ಬಳಿ ತೆರಳಿ, ಪಠ್ಯಪುಸ್ತಕವನ್ನು ಕೇಳಿದರು. ಇದನ್ನೂ ಓದಿ: ಪಠ್ಯ ಪರಿಷ್ಕರಣೆ ನೆಪದಲ್ಲಿ ಬಿಜೆಪಿ ಸರ್ಕಾರದಿಂದ ಸಾಂಸ್ಕೃತಿಕ ಅತ್ಯಾಚಾರ: ಡಿಕೆಶಿ
ಶಾಲೆ ಆರಂಭವಾಗಿ ಒಂದು ತಿಂಗಳು ಕಳೆದರೂ ಪುಸ್ತಕ ಸಿಕ್ಕಿಲ್ಲ. ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಆದಷ್ಟು ಬೇಗ 10ನೇ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿ ಎಂದು ಮನವಿ ಮಾಡಿದರು.
ಮಕ್ಕಳ ಮನವಿಗೆ ಸ್ಪಂದಿಸಿದ ಸಿ.ಟಿ.ರವಿ, ನೀವು ಬುದ್ದಿವಂತರಿದ್ದೀರಾ! ಆದಷ್ಟು ಬೇಗ ಪುಸ್ತಕ ಕೊಡುತ್ತಾರೆ. ನೀವು ಪಾಸಾಗುತ್ತೀರಿ, ಹೋಗಿ ಎಂದು ಭರವಸೆ ನೀಡಿದರು. ಇದನ್ನೂ ಓದಿ: PUC ಪಠ್ಯ ಪರಿಷ್ಕರಣೆ – ಚಕ್ರತೀರ್ಥ ಸಮಿತಿಯಿಂದ ವರದಿ ಪಡೆಯದಿರಲು ಶಿಕ್ಷಣ ಇಲಾಖೆ ತೀರ್ಮಾನ
ಬಿಸಿಯೂಟದ ಬಗ್ಗೆ ಮಕ್ಕಳೊಂದಿಗೆ ವಿಚಾರಿಸಿದ ಅವರು, ಇಂದು ಬಿಸಿಯೂಟ ಇತ್ತಾ? ಏನು ಊಟ ಮಾಡಿದ್ರಿ ಎಂದು ಕೇಳಿದರು. ಅದಕ್ಕೆ ಮಕ್ಕಳು ಅನ್ನ-ಸಾಂಬಾರ್ ಸಾರ್ ಎಂದರು. ತರಕಾರಿ ಇರಲಿಲ್ವಾ ಎಂದು ಸಿ.ಟಿ.ರವಿ ಅವರು ಮಕ್ಕಳಿಗೆ ಮರು ಪ್ರಶ್ನೆ ಮಾಡಿದರು. ಇತ್ತು ಸಾರ್ ಎಂದು ಮಕ್ಕಳು ಉತ್ತರ ನೀಡಿದರು.