ನವದೆಹಲಿ: ಸಲಿಂಗ ವಿವಾಹ ಸಾಂವಿಧಾನಿಕ ಸ್ವರೂಪದ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಿದೆ ಆದ್ದರಿಂದ ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠವು (Constitution Bench) ಇದರ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (DY Chandrachud) ನೇತೃತ್ವದ ಪೀಠ ಆದೇಶಿಸಿದೆ.
ಸಲಿಂಗ ವಿವಾಹವನ್ನು ವಿರೋಧಿಸಿ ಕೇಂದ್ರ ಸರ್ಕಾರ (Government Of India) ಅಫಿಡವಿಟ್ ಸಲ್ಲಿಸಿದ ಬಳಿಕ ವಿಚಾರಣೆ ನಡೆಸಿದ ಪೀಠ, ಪ್ರಕರಣವು ಸ್ವಾಭಾವಿಕ ಸಾಂವಿಧಾನಿಕ ಅರ್ಹತೆಯ ಪ್ರಕಾರ ಮದುವೆಯಾಗುವ ಹಕ್ಕಿಗೆ ಸಂಬಂಧಿಸಿದೆ. ಸಂವಿಧಾನದ ಕಲಂ 145(3) ಅಡಿಯಲ್ಲಿ 5 ನ್ಯಾಯಾಧೀಶರ ಪೀಠ ಈ ಸಮಸ್ಯೆಯನ್ನು ಪರಿಹರಿಸಲಿದೆ. ಈ ಹಿನ್ನಲೆಯಲ್ಲಿ ಸಾಂವಿಧಾನಿಕ ಪೀಠದಲ್ಲಿ ಅರ್ಜಿ ಪ್ರಸ್ತಾಪಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಹೈದರಾಬಾದ್ ಮೂಲದ ಸಲಿಂಗಕಾಮಿಗಳಾದ ಸುಪ್ರಿಯೋ ಚಕ್ರವರ್ತಿ ಮತ್ತು ಅಭಯ್ ಡ್ಯಾಂಗ್, ಪಾರ್ಥ್ ಫಿರೋಜ್ ಮೆಹ್ರೋತ್ರಾ ಮತ್ತು ಉದಯ್ ರಾಜ್ ಸಲ್ಲಿಸಿರುವ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸುತ್ತಿದೆ. ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ LGBTQIA+ ವ್ಯಕ್ತಿಗಳು ಸಮಾನತೆ, ಘನತೆ ಮತ್ತು ಗೌಪ್ಯತೆಯ ಹಕ್ಕನ್ನು ಇತರ ಎಲ್ಲಾ ನಾಗರಿಕರಂತೆಯೇ ಸಂವಿಧಾನವು ಖಾತರಿಪಡಿಸುತ್ತದೆ. ಸಲಿಂಗ ವಿವಾಹಗಳನ್ನ ಗುರುತಿಸದಿರುವುದು ಸಂವಿಧಾನದ 14ನೇ ವಿಧಿಯ ಅಡಿಯಲ್ಲಿ ಗುಣಮಟ್ಟದ ಹಕ್ಕು ಮತ್ತು ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಲಾಗಿದೆ.
ಈ ವಾದವನ್ನು ಕೇಂದ್ರ ಸರ್ಕಾರ ವಿರೋಧಿಸಿದೆ. ಈ ಬಗ್ಗೆ ಅಫಿಡವಿಟ್ ಸಲ್ಲಿಸಿರುವ ಸರ್ಕಾರ ಸಲಿಂಗ ಸಂಬಂಧ ಕಾನೂನುಬಾಹಿರವಲ್ಲದಿದ್ದರೂ, ಭಾರತೀಯ ವ್ಯವಸ್ಥೆಯಲ್ಲಿ ಪುರುಷ ಮತ್ತು ಮಹಿಳೆಯ ನಡುವೆ ಮದುವೆ ವ್ಯವಸ್ಥೆ ಹೊಂದಿದೆ. ಸಲಿಂಗ ವ್ಯಕ್ತಿಗಳು ಪಾಲುದಾರರಾಗಿ ಒಟ್ಟಿಗೆ ವಾಸಿಸುವುದು ಮತ್ತು ಒಂದೇ ಲಿಂಗದ ವ್ಯಕ್ತಿಗಳು ಲೈಂಗಿಕ ಸಂಬಂಧ ಹೊಂದುವುದನ್ನು ಭಾರತೀಯ ಕೌಟುಂಬಿಕ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.