ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಇನ್ಮುಂದೆ ನವಿಲುಗಳ ನರ್ತನ ಕಾಣಬಹುದಾದ ನಿರೀಕ್ಷೆ ಇದೆ. ವಿಧಾನಸೌಧದ ಮುಂದೆ ರಾಷ್ಟ್ರಪಕ್ಷಿ ನವಿಲು ತಂದು ಬಿಡುವ ಯೋಜನೆ ಕುರಿತು ಚಿಂತನೆ ನಡೆದಿದೆ.
ದಿಲ್ಲಿಯ ಸಂಸತ್ ಭವನ, ರಾಷ್ಟ್ರಪತಿ ಭವನದ ಮಾದರಿಯಲ್ಲಿ ನವಿಲುಗಳನ್ನ ತಂದು ಬಿಡುವ ಬಗ್ಗೆ ಯೋಚಿಸಲಾಗಿದ್ದು, ಪರಿಷತ್ ಸದಸ್ಯ ಉಗ್ರಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.
ವಿಧಾನಸೌಧವನ್ನ ಆಕರ್ಷಣೀಯ ತಾಣವನ್ನಾಗಿಸಲು ಪರಿಷತ್ ಸದಸ್ಯ ಉಗ್ರಪ್ಪರಿಂದ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಈಗಾಗಲೇ ಸಂಸತ್ ಭವನ ಹಾಗೂ ರಾಷ್ಟ್ರಪತಿ ಭವನದ ಆವರಣಗಳ ಬಳಿ ಈ ಯೋಜನೆ ಇದೆ.
ನವಿಲು ವಾಸಿಸಲು ಅನುಕೂಲವಾಗುವ ಈಚಲು ಗಿಡ ನೆಡಲು ತೋಟಗಾರಿಕೆ ಇಲಾಖೆ ನಿರ್ಧಾರ ಮಾಡಿದೆ. ನವಿಲಿಗೆ ತಾತ್ಕಾಲಿಕ ವಾತಾವರಣ ನಿರ್ಮಿಸಲು ತೋಟಗಾರಿಕಾ ಇಲಾಖೆ ಭರವಸೆ ನೀಡಿದ್ದು, ವಿಧಾನಸೌಧದ ನಾಲ್ಕು ಭಾಗಗಳಲ್ಲಿ ಈಚಲು ಗಿಡ ನೆಡಲು ನಿರ್ಧಾರಿಸಲಾಗಿದೆ ಎಂದು ತಿಳಿದುಬಂದಿದೆ.