ಕಲಬುರಗಿ: ಜನರ ಬಾಗಿಲಿಗೆ ಕಂದಾಯ ಇಲಾಖೆಯ ಸೇವೆಗಳನ್ನು ಉಚಿತವಾಗಿ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಶನಿವಾರದಿಂದಲೇ ಜಿಲ್ಲೆಯಾದ್ಯಂತ ಜಾರಿಗೆ ತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ತಿಳಿಸಿದರು.
ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಕರೆಯಲಾದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿ ಮಾಹಿತಿ ನೀಡಿದರು. ಈ ವೇಳೆ ಅವರು, ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಗೆ ಶನಿವಾರ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಚಾಲನೆ ನೀಡುತ್ತಿದ್ದು, ಜಿಲ್ಲೆಯಲ್ಲಿ ಗಡಿ ಭಾಗವಾದ ಸೇಡಂ ತಾಲೂಕಿನ ಮುಧೋಳ ಹೋಬಳಿಯ ಖಂಡೆರಾಯನಪಳ್ಳಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದರು. ಇದನ್ನೂ ಓದಿ: ಕೆಲಸ ಬಿಟ್ಟು ಬಿರಿಯಾನಿ ಸ್ಟಾಲ್ ತೆರೆದ ಇಂಜಿನಿಯರ್ ಯುವಕರು
ಜಿಲ್ಲೆಯಲ್ಲಿ 5 ಲಕ್ಷ ಪಹಣಿ ಹಕ್ಕುಳ್ಳವರಿದ್ದು, ಈ ಪೈಕಿ ಪಿ.ಎಂ-ಕಿಸಾನ್ ಯೋಜನೆಯಡಿ ನೋಂದಾಯಿಸಿದ 1.5 ಲಕ್ಷ ಕುಟುಂಬಗಳಿಗೆ 2,77,867 ಪಹಣಿ, 1,04,264 ಅಟ್ಲಾಸ್ ಮ್ಯಾಪ್, 4,32,746 ಜಾತಿ-ಆದಾಯ ಪ್ರಮಾಣ ಪತ್ರಗಳನ್ನು ವಿಳಾಸ ಲೇಬಲ್ ಸಂಖ್ಯೆ ಜೊತೆಗೆ ಪ್ಲಾಸ್ಟಿಕ್ ಕವರ್ ರಕ್ಷೆಯೊಂದಿಗೆ ಕಂದಾಯ ಇಲಾಖೆಯ ಸಿಬ್ಬಂದಿ ಜಿಲ್ಲೆಯಾದ್ಯಂತ ಶನಿವಾರದಿಂದ ಮನೆ ಬಾಗಿಲಿಗೆ ಹೋಗಿ ವಿತರಿಸಲಿದ್ದಾರೆ ಎಂದರು.
ಈ ಎಲ್ಲ ದಾಖಲೆಗಳನ್ನು ಪಡೆಯಲು ಸಾಮಾನ್ಯವಾಗಿ ನೆಮ್ಮದಿ ಕೆಂದ್ರದಲ್ಲಿ ಸುಮಾರು 100 ರೂ. ತಗಲುತ್ತದೆ. ಆದರೆ ಸರ್ಕಾರ ಈ ಯೋಜನೆಯಡಿ ರೈತಾಪಿ ವರ್ಗ ಇವುಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಕೆಲವೊಮ್ಮೆ ರೈತಾಪಿ ವರ್ಗಕ್ಕೆ ತಮ್ಮ ದಾಖಲೆಗಳ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದೆ ಅಸ್ತಿ ಮಾರಾಟ, ವರ್ಗಾವಣೆ ಸಂದರ್ಭದಲ್ಲಿ ಅವರು ಅನುಭವಿಸುವ ತೊಂದರೆಗಳನ್ನು ಇದು ನಿವಾರಿಸಲಿದೆ ಎಂದು ವಿವರಿಸಿದರು. ಇದನ್ನೂ ಓದಿ: ಮೋದಿಯವರು ಈಗ ಪ್ಯಾನ್ ಇಂಡಿಯಾ ನಾಯಕ: ಬೊಮ್ಮಾಯಿ
ಕುಡಿಯುವ ನೀರಿಗೆ 35 ಲಕ್ಷ ರೂ.!
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಪ್ರದೇಶಕ್ಕೆ ನೀರು ಸರಬರಾಜು ಮಾಡಲು 35 ಲಕ್ಷ ರೂ. ಅನುದಾನ ಜಿಲ್ಲೆಯ ಎಲ್ಲ ಪೌರಸಂಸ್ಥೆಗಳು ಮತ್ತು ತಾಲೂಕು ಪಂಚಾಯತಿಗಳಿಗೆ ಬಿಡುಗಡೆ ಮಾಡಿದೆ ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.