ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ನಡೆದಿತ್ತು ಎನ್ನಲಾದ ಜನಪ್ರತಿನಿಧಿಗಳು, ಅಧಿಕಾರಿಗಳ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಇಬ್ಬರು ಐಪಿಎಸ್ಗಳ ಮಧ್ಯೆ ಜಟಾಪಟಿ ಶುರುವಾಗಿದೆ.
ಕಳೆದ 2 ವರ್ಷಗಳಿಂದ ತನಿಖೆ ನಡೆಸಿದ್ದ ಸಿಬಿಐ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದೆ. ಆಡಿಯೋ ಲೀಕ್ ಆಗಿದ್ದರ ಬಗ್ಗೆ ಸಾಕ್ಷ್ಯಗಳು ಇಲ್ಲ ಎಂದು ಸಿಬಿಐ ಅಧಿಕಾರಿಗಳು ಬಿ-ರಿಪೋರ್ಟ್ ಸಲ್ಲಿಕೆ ಮಾಡಿದೆ. ಆದರೆ ಫೋನ್ ಕದ್ದಾಲಿಕೆ ಕೇಸ್ನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸೇರಿ ಇಬ್ಬರ ವಿರುದ್ಧ ಸಾಕ್ಷ್ಯ ಇದೆ. ಸಾಕ್ಷ್ಯಗಳಿದ್ದರೂ ಸಿಬಿಐ ಆರೋಪಪಟ್ಟಿ ಸಲ್ಲಿಸಿಲ್ಲ. ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಯುತ್ತಿದೆ. ಹೀಗಾಗಿ, ಮರು ತನಿಖೆ ನಡೆಸಬೇಕು ಅಂತ ಐಪಿಎಸ್ ಭಾಸ್ಕರ್ ರಾವ್ ದೂರು ಸಲ್ಲಿಸಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಭಾಸ್ಕರ್ ರಾವ್, ಬಿ ರಿಪೋರ್ಟ್ ನಲ್ಲಿ ಸಾಕ್ಷ್ಯಗಳಿಲ್ಲ ಎಂದು ಆರೋಪಪಟ್ಟಿಯಿಂದ ಇಬ್ಬರನ್ನು ಕೈಬಿಡಲಾಗಿದೆ. ಆದ್ರೆ ಸಾಕಷ್ಟು ಸಾಕ್ಷ್ಯಗಳಿರೋದು ಸತ್ಯ. ತನಿಖೆ ಅಪೂರ್ಣವಾಗಿದ್ದು, ಪೂರ್ಣವಾಗಬೇಕಿದೆ. ಸದ್ಯ ನಡೆದಿರುವ ತನಿಖೆ ಸಹ ಸರಿಯಾಗಿಲ್ಲ. ಹಾಗಾಗಿ ಈ ಪ್ರಕರಣವನ್ನು ಸಿಬಿಐ ಗಮನಕ್ಕೆ ತರಬೇಕು. ಈ ಪ್ರಕರಣದಿಂದ ವೈಯಕ್ತಿಕವಾಗಿ ನನ್ನ ವೃತ್ತಿ ಬದುಕಿಗೆ ಧಕ್ಕೆ ಆಯ್ತು. ಅಂದು ಪ್ರಕರಣದ ತನಿಖೆ ಸರ್ಕಾರ ಸಿಬಿಐಗೆ ವಹಿಸಿತ್ತು. ಆದ್ರೆ ಇಂದು ಸರ್ಕಾರ ಬಿ- ರಿಪೋರ್ಟ್ ವರದಿಯನ್ನೇ ಓದಿಲ್ಲ ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: ಫೋನ್ ಟ್ಯಾಪಿಂಗ್ ಪ್ರಕರಣ- ಅಲೋಕ್ ಕುಮಾರ್ಗೆ ಸಿಬಿಐ ಡ್ರಿಲ್
ನನ್ನ ಆಡಿಯೋ ಕ್ಲಿಪ್ ಹೊರ ಬಂದಿರೋದಕ್ಕೆ ಅಲೋಕ್ ಕುಮಾರ್ ಮತ್ತು ಇನ್ನೊಬ್ಬರು ಎಂದು ಈ ಹಿಂದೆಯೇ ಹೇಳಿದ್ದೆ. ಕೆಲವೇ ದಿನಗಳಲ್ಲಿ ಬಿ ರಿಪೋರ್ಟ್ ಹೊರ ಬರಲಿದೆ ಎಂದು ಹೇಳಿದರು. ಇದನ್ನೂ ಓದಿ: ನನ್ನ ಫೋನ್ ಟ್ಯಾಪಿಂಗ್ ಆಗ್ತಿರೋದು ನಿಜ- ಸರ್ಕಾರದ ವಿರುದ್ಧ ಡಿಕೆಶಿ ಗಂಭೀರ ಆರೋಪ