ಬೆಂಗಳೂರು: ನಿಪಾ ವೈರಸ್ ಸುದ್ದಿ ಎಷ್ಟರ ಮಟ್ಟಿಗೆ ಜನರ ಕಂಗೆಡಿಸಿದೆಯೋ ಗೊತ್ತಿಲ್ಲ. ಆದರೆ ಬಿಬಿಎಂಪಿ ವನ್ಯಜೀವಿ ಘಟಕದ ಸ್ವಯಂ ಸೇವಕರ ನಿದ್ದೆಗೆಡಿಸಿರೋದಂತೂ ಸತ್ಯ.
ನಿಪಾ ವೈರಸ್ ಹರಡೋದು ಬಾವಲಿಗಳಿಂದ ಅಂತೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡಿದ್ದೇ ತಡ ಬೆಂಗಳೂರಿನ ಜನ ತಮ್ಮ ಸುತ್ತಮುತ್ತಲಿನ ಬಾವಲಿಗಳನ್ನ ಶತ್ರುಗಳಂತೆ ನೋಡೋಕೆ ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ಬಾವಲಿಗಳನ್ನ ಕೊಲ್ಲಿ ಇಲ್ಲದಿದ್ದರೆ ನಾವು ಬಾವಲಿಗಳಿಂದ ಸತ್ತು ಹೋಗ್ತೇವೆ ಎಂದು ಬಿಬಿಎಂಪಿ ವನ್ಯಜೀವಿ ವಿಭಾಗದ ಸ್ವಯಂ ಸೇವಕರಿಗೆ ದೂರವಾಣಿ ಕರೆಗಳು ಬರುತ್ತಿವೆ.
ಸ್ವಯಂ ಸೇವಕರು ಬಾವಲಿಯಿಂದ ನಿಪಾ ಸೋಂಕು ಹರಡಲ್ಲ ಎಂದರೂ ಜನ ಮಾತ್ರ ಒಪ್ಪೋಕೆ ತಯಾರಿಲ್ಲ. ಬಾವಲಿಯಿಂದ ರಕ್ಷಿಸಿ ಎಂದು ಬಸವನಗುಡಿ, ಜಯನಗರ, ಸ್ಯಾಂಕಿಟ್ಯಾಂಕ್, ಬನ್ನೇರುಘಟ್ಟ ಈ ಭಾಗದಿಂದ ಹೆಚ್ಚೆಚ್ಚು ಕರೆಗಳು ಬರ್ತಿವೆ.
ಸ್ವಯಂ ಸೇವಕರು ಬಾವಲಿಗಳಿಂದ ಯಾವುದೇ ತೊಂದರೆ ಇಲ್ಲ ಎಂದು ಜಾಗೃತಿ ಮೂಡಿಸುತ್ತಿದ್ದರು. ಜನ ಒಂದು ಹೆಜ್ಜೆ ಮುಂದೆ ಹೋಗಿ ಸ್ಥಳೀಯ ಕಾರ್ಪೊರೇಟರ್ ಗಳ ಬಳಿ ಸ್ವಯಂ ಸೇವಕರ ವಿರುದ್ಧ ದೂರುತ್ತಿದ್ದಾರೆ. ಕರೆ ಮಾಡಿದರೆ ಯಾರೂ ಸರಿಯಾಗಿ ರೆಸ್ಪಾನ್ಸ್ ಮಾಡುತ್ತಿಲ್ಲ ಎಂದು ಕಂಪ್ಲೇಂಟ್ ಮಾಡುತ್ತಿದ್ದಾರೆ. ಕಾರ್ಪೊರೇಟರ್ ಗಳ ಮೂಲಕ ಒತ್ತಡ ಹಾಕಿಸುವ ಪ್ರಯತ್ನವನ್ನೂ ಮುಂದುವರೆಸಿದ್ದಾರೆ. ಅಷ್ಟರಮಟ್ಟಿಗೆ ಬಾವಲಿಗಳು ಬೆಂಗಳೂರಿಗರನ್ನು ಬೆಚ್ಚಿಬೀಳಿಸಿವೆ. ಇದನ್ನೂ ಓದಿ: ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು
ಜನರ ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ನಕಲಿ ಸ್ವಯಂ ಸೇವಕರು ದುಡ್ಡು ಪಡೆದು ಬಾವಲಿಗಳನ್ನ ಕೊಂದಿರುವ ಘಟನೆಗಳು ನಡೆದಿವೆ. ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಬಾವಲಿಗಳಿಂದ ಸೋಂಕು ಹರಡುವುದಿಲ್ಲ ಎಂದು ವರದಿ ನೀಡಿದೆ. ಹೀಗಿದ್ದೂ ಬೆಂಗಳೂರು ಜನ ಮಾತ್ರ ಬಾವಲಿಗಳಿಂದ ಬದುಕಿಸಿ ಅಂತಿರೋದು ವಿಪರ್ಯಾಸ. ಇದನ್ನೂ ಓದಿ: ನಿಪಾ ಜ್ವರಕ್ಕೆ ಹೆದರಿ ಬಾವಲಿಗಳನ್ನು ಸಾಯಿಸಿ ಮಣ್ಣಲ್ಲಿ ಹೂಳಲು ನಿರ್ಧರಿಸಿದ ಗ್ರಾಮಸ್ಥರು