ಬೆಂಗಳೂರು: ಪೆಟ್ರೋಲ್ ಪೂರೈಕೆ ಮಾಡೋ ಲಾರಿ ನೌಕರರು ಮುಷ್ಕರ ಕೈಗೊಂಡ ಕುರಿತಂತೆ ತೈಲ ಕಂಪನಿಗಳು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಸಫಲವಾಗಿದೆ. ಹೀಗಾಗಿ ಸದ್ಯ ಪೆಟ್ರೋಲ್ ಬಂಕ್ ಮಾಲೀಕರು ಮುಷ್ಕರ ಕೈ ಬಿಟ್ಟಿದ್ದಾರೆ.
ಮಾತುಕತೆಯಲ್ಲಿ ಅಧಿಕಾರಿಗಳು ಹದಗೆಟ್ಟ ರಸ್ತೆ ರಿಪೇರಿ ಮಾಡುವ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಮುಷ್ಕರ ಅಂತ್ಯವಾಗಿದ್ದು, ವಾಹನ ಸವಾರರಿಗೆ ರಿಲೀಫ್ ಸಿಕ್ಕಿದೆ.
ಮುಷ್ಕರ ಯಾಕೆ?: ನಗರದ ಹೊಸಕೋಟೆ ಬಳಿಯ ದೇವನಗುಂಡಿ ತೈಲ ಘಟಕ ಹಾಗೂ ಟರ್ಮಿನಲ್ ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸುವಂತೆ ಲಾರಿ ಚಾಲಕರು ಕಳೆದ ಎರಡು ವರ್ಷಗಳ ಹಿಂದೆಯೂ ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ತೈಲ ಪೂರೈಕೆ ಸಂಸ್ಥೆಗಳು ಚಾಲಕರ ಮನವೊಲಿಸಿ ಪ್ರತಿಭಟನೆಯನ್ನು ಹಿಂಪಡೆದಿದ್ದರು. ಆದರೆ ಕಳೆದ ಎರಡು ದಿನಗಳ ಹಿಂದೆ ಟ್ಯಾಂಕರ್ ಪಲ್ಟಿಯಾಗಿ ಚಾಲಕರೊಬ್ಬರು ಮೃತಪಟ್ಟಿದ್ದರು. ಇದರಿಂದ ಅನಿವಾರ್ಯವಾಗಿ ಚಾಲಕರು ಮತ್ತೆ ಪ್ರತಿಭಟನೆ ನಡೆಸಲು ಮುಂದಾಗಿದ್ದರು.
ಕಳೆದ ಬಾರಿ ಪ್ರತಿಭಟನೆ ನಡೆಸಿದ ವೇಳೆ ರಸ್ತೆ ದುರಸ್ಥಿ ಕಾರ್ಯ ನಡೆಸುವ ಭರವಸೆ ನೀಡಿದ್ದ ತೈಲ ಪೂರೈಕೆ ಸಂಸ್ಥೆಗಳು 500 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದವು. ಆದರೆ ಹಣ ಇದ್ದರು ರಸ್ತೆ ದುರಸ್ಥಿ ಕಾರ್ಯ ಆರಂಭವಾಗಿರಲಿಲ್ಲ.
ಪ್ರತಿಭಟನೆ ನಡೆಸುವ ಮೊದಲು ಟ್ಯಾಂಕರ್ ಚಾಲಕರ ಮನವೊಲಿಸಲು ತೈಲ ಕಂಪನಿಗಳು ಸಭೆ ನಡೆಸಿದ್ದವು. ಆದರೆ ರಸ್ತೆ ನಿರ್ಮಾಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಆರಂಭವಾಗುವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಭಟನಾನಿರತರು ತಿಳಿಸಿದ್ದರು. ಹೀಗಾಗಿ ದೇವನಗುಂದಿ ಸಮೀಪದ ತೈಲ ಘಟಕದ ಬಳಿ 1500ಕ್ಕೂ ಹೆಚ್ಚು ಟ್ಯಾಂಕರ್ ಚಾಲಕರು ಪ್ರತಿಭಟನೆ ಕೈಗೊಂಡಿದ್ದರು. ಈ ಹಿನ್ನೆಲೆಯಂದಾಗಿ ಇಂದು ಬೆಂಗಳೂರು ಸೇರಿದಂತೆ ರಾಮನಗರ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ತೈಲ ಪೂರೈಕೆ ಸ್ಥಗಿತವಾಗಲಿದೆ ಎಂಬುದಾಗಿ ವರದಿಯಾಗಿತ್ತು.