ಮಧ್ಯರಾತ್ರಿ ಪೆಟ್ರೋಲ್ ಬಂಕ್ ದರೋಡೆಗೆ ಯತ್ನ – ಸರಿಯಾದ ಸಮಯಕ್ಕೆ ಬಂದ ಪೊಲೀಸರಿಂದ ಆರೋಪಿಗಳು ಆರೆಸ್ಟ್

Public TV
1 Min Read
BGK PETROL

ಬಾಗಲಕೋಟೆ: ಮಧ್ಯರಾತ್ರಿ ಪೆಟ್ರೋಲ್ ಬಂಕ್‍ಗೆ ನುಗ್ಗಿ ಕಾರ್ಮಿಕರು ಹಾಗೂ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ಗ್ರಾಮದಲ್ಲಿ ನಡೆದಿದೆ.

ಭಾನುವಾರ ರಾತ್ರಿ 12.30ರ ಸುಮಾರಿಗೆ ಪೆಟ್ರೋಲ್ ಪಂಪ್‍ಗೆ ನುಗ್ಗಿದ ಎಂಟು ಜನರ ಗ್ಯಾಂಗ್ ಬಂಕ್‍ನ ಕಾರ್ಮಿಕರು ಹಾಗೂ ಮ್ಯಾನೇಜರ್ ಮೇಲೆ ಮನಬಂದತೆ ಹಲ್ಲೆ ನಡೆಸಿದೆ. ರಾಯಲ್ ಎನ್ ಫೀಲ್ಡ್ ಬೈಕ್ ಹಾಗೂ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಎಂಟು ಜನ ಪುಡಾರಿಗಳು ಹಲ್ಲೆ ಮಾಡಿದ್ದು, ಬಂಕ್‍ಗೆ ಸೇರಿದ ಕಾರನ್ನು ಒಡೆದು ಹಣ ಕಳ್ಳತನ ಮಾಡಲು ಯತ್ನಿಸಿದ್ದಾರೆ. ತಕ್ಷಣ ಪೆಟ್ರೋಲ್ ಬಂಕ್ ಸಿಬ್ಬಂದಿ ಲೋಕಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸರಿಯಾದ ಸಮಯಕ್ಕೆ ಪೊಲೀಸರು ಸ್ಥಳಕ್ಕೆ ಬಂದ ಕಾರಣ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಈ ವೇಳೆ ಪೊಲೀಸ್ ಬಂದಿದ್ದನ್ನ ಗಮನಿಸಿದ 6 ಮಂದಿ ಪರಾರಿಯಾಗಿದ್ದಾರೆ.

BGK PETROL1

ಪೆಟ್ರೋಲ್ ಬಂಕ್ ಮ್ಯಾನೇಜರ್ ಸಂಗಮೇಶ್ ಸಣ್ಣಕ್ಕಿ, ಕಾರ್ಮಿಕರಾದ ಮಲ್ಲಿಕಾರ್ಜುನ ಮೋಟಗಿ, ಶಿವು ಚಂದರಗಿ, ಶಿವಪ್ಪ ಎಂಬುವರ ಘಟನೆಯಲ್ಲಿ ಗಾಯಗೊಂಡಿದ್ದಾರೆ. ದರೋಡೆಗೆ ಯತ್ನಿಸಿದ್ದ ಶಿವಯ್ಯ ವಿರಕ್ತಮಠ, ವೀರೇಶ್ ಪಂಚಗಟ್ಟಿಮಠರನ್ನು ಲೋಕಾಪುರ ಪೊಲೀಸರು ಬಂಧಿಸಿದ್ದಾರೆ. ಉಳಿದಂತೆ ಆರೋಪಿಗಳಾದ ಮಲ್ಲಿಕಾರ್ಜುನ ವಿರಕ್ತಮಠ, ಅಯ್ಯಪ್ಪಗೌಡ ಪಾಟಿಲ್, ಪ್ರಶಾಂತ ಪಾಟಿಲ್, ಪ್ರಕಾಶ್ ಚಿತ್ತರಗಿ ಪರಾರಿಯಾಗಿದ್ದಾರೆ. ದರೋಡೆಗೆ ಯತ್ನಿಸಿದ ಆರೋಪಿಗಳು ಲೋಕಾಪುರ, ಬಂಟನೂರ, ಬುದ್ನಿ ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೆಟ್ರೋಲ್ ಬಂಕ್ ದರೋಡೆಗೆ ಯತ್ನಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಹಲ್ಲೆ ನಡೆಸಿದ ಭಾರತ್ ಪೆಟ್ರೋಲ್ ಬಂಕ್ ಜಿಲ್ಲೆಯ ಎಎಂ ಪಾಟೀಲ್ ಎಂಬುವವರಿಗೆ ಸೇರಿದೆ. ಈ ಕುರಿತು ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಲೋಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article