ಶಿವಮೊಗ್ಗ: ಕೊರೊನಾ ವೈರಸ್ ವಿರುದ್ಧ ವೈದ್ಯರು, ನರ್ಸ್ ಮತ್ತು ಪೊಲೀಸರು ಹಗಲಿರುಳು ಎನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅಗತ್ಯ ಸೇವೆ ಸಲ್ಲಿಸುತ್ತಿರುವವರಿಗೆ ಜಿಲ್ಲೆಯಲ್ಲಿ ಉಚಿತವಾಗಿ ಪೆಟ್ರೋಲ್ ವಿತರಣೆ ಮಾಡಲಾಗುತ್ತಿದೆ.
ಶಿವಮೊಗ್ಗದ ಬಾಲರಾಜ್ ಅರಸು ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್ ಬಂಕ್ನ ಮಾಲೀಕರು ಕೊರೊನಾ ಸಮಯದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ಸಲ್ಲಿಸುತ್ತಿರುವ ವೈದ್ಯರು, ನರ್ಸ್, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಪೊಲೀಸರಿಗೆ ಉಚಿತ ಪೆಟ್ರೋಲ್ ವಿತರಣೆ ಮಾಡುತ್ತಿದ್ದಾರೆ.
ಪ್ರತಿಯೊಬ್ಬರ ದ್ವಿ-ಚಕ್ರ ವಾಹನಕ್ಕೆ ಅವರವರ ಇಲಾಖೆಯ ಗುರುತಿನ ಚೀಟಿ ನೋಡಿ ತಲಾ 1 ಲೀಟರ್ ಪೆಟ್ರೋಲ್ಅನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಈ ಮೂಲಕ ಪೆಟ್ರೋಲ್ ಬಂಕ್ನ ಮಾಲೀಕರು ಅಗತ್ಯ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್ ಹಾಗೂ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.
ಅಲ್ಲದೇ ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರು, ಸೆಕ್ಯೂರಿಟಿ ಸಿಬ್ಬಂದಿ ಮತ್ತು ಹೋಂಗಾರ್ಡ್ ಗಳಿಗೆ ಉಚಿತ ಪೆಟ್ರೋಲ್ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ರಾಜ್ಯದ ಇತರೆ ಪೆಟ್ರೋಲ್ ಬಂಕ್ ಮಾಲೀಕರು ಸಹ ಇದೇ ರೀತಿ ಉಚಿತ ವಿತರಣೆ ಮಾಡಲು ಮುಂದಾಗಿ, ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಕೈಲಾದ ಸೇವೆ ಮಾಡಿ ಎಂದು ಪೆಟ್ರೋಲ್ ಬಂಕ್ ಮಾಲೀಕರಾದ ಸುಹಾಸ್ ಮನವಿ ಮಾಡಿದ್ದಾರೆ.