ಬೆಂಗಳೂರು: ಭಾರೀ ಮಳೆಯಿಂದಾಗಿ ಪೆಟ್ರೋಲ್ ಸರಬರಾಜಿನಲ್ಲಿ ವ್ಯತ್ಯಯವಾಗಿ ನಗರದಲ್ಲಿ ಮಾಲೀಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಗುಡ್ಡಗಳು ಕುಸಿದು ಬೀಳುವ ಕಾರಣ ಶಿರಾಡಿ, ಸಂಪಾಜೆ ಘಾಟಿಯಲ್ಲಿ ಸಂಚಾರವನ್ನು ಬಂದ್ ಮಾಡಲಾಗಿದೆ. ಇದರ ಜೊತೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಪರಿಣಾಮ ಮಂಗಳೂರಿನಿಂದ ಬೆಂಗಳೂರಿಗೆ ತೈಲವನ್ನು ತರಲು ಸಂಕಷ್ಟವಾಗಿದೆ.
ಕಳೆದ 2-3 ದಿನಗಳಿಂದಲೂ ಬೆಂಗಳೂರಿನ ಖಾಸಗಿ ಬಂಕ್ಗಳಲ್ಲಿ ಡೀಸೆಲ್ ಖಾಲಿಯಾಗಿದೆ. ನಗರದ ಖಾಸಗಿ ಬಂಕ್ ಗಳಾದ ಶೆಲ್, ಇಸ್ಸಾರ್ ಬಂಕ್ ಗಳಲ್ಲಿ ಡೀಸೆಲ್ ಸಂಪೂರ್ಣ ಖಾಲಿಯಾಗಿದೆ. ಬರೀ ಖಾಸಗಿ ಬಂಕ್ಗಳಿಗೆ ಮಾತ್ರ ಈ ರೀತಿಯ ಸಮಸ್ಯೆ ಉಂಟಾಗಿದ್ದು, ಸರ್ಕಾರಿ ಸ್ವಾಮ್ಯದ ಬಂಕ್ಗಳಿಗೆ ಬೇರೆ ಕಡೆಗಳಿಂದ ಪೂರೈಕೆಯಾಗುತ್ತಿವೆ. ಪೆಟ್ರೋಲ್, ಡೀಸೆಲ್ ಇಲ್ಲದ ಕಾರಣ ಮಾಲೀಕರು ಬಂಕ್ ಮುಚ್ಚಿದ್ದಾರೆ.
ಇಂಡಿಯನ್, ಭಾರತ್ ಪೆಟ್ರೋಲ್ ಬಂಕ್ ಗಳಿಗೆ ಬೆಳಗಾವಿ, ಸಜ್ಜಾಪುರ ಭಾಗಗಳಿಂದ ಪೆಟ್ರೋಲ್ ಪೊರೈಕೆ ಆಗುತ್ತಿರುವುದರಿಂದ ಅಷ್ಟಾಗಿ ಸಮಸ್ಯೆ ಕಂಡುಬಂದಿಲ್ಲ.
ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಮಂಗಳೂರಿನಿಂದ ಪೆಟ್ರೋಲ್ ತರಲು ಸಮಸ್ಯೆಯಾಗಿದೆ. ತೈಲ ಇಲ್ಲದ ಕಾರಣ ಬಂಕ್ ಗಳನ್ನು ಮುಚ್ಚಲಾಗಿದೆ ಎಂದು ಬಂಕ್ ಮಾಲೀಕರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.
ಚಾರ್ಮಾಡಿಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ ಕಾರಣ ಈಗ ಘನ ವಾಹನಗಳು ಕುದುರೆಮುಖ ಮಾರ್ಗವಾಗಿ ಮಂಗಳೂರಿಗೆ ಹೋಗಲು ಅನುಮತಿ ನೀಡಲಾಗಿದೆ. ಈ ರಸ್ತೆಯಲ್ಲೂ ಈಗ ಭಾರೀ ಸಂಖ್ಯೆಯಲ್ಲಿ ವಾಹನಗಳ ಸಂಚರಿಸುತ್ತಿದ್ದು, ಆಗಾಗ ಜಾಮ್ ಆಗುತ್ತಿದೆ. ಭಾನುವಾರ ಮಣ್ಣು ಕುಸಿದು ಬಿದ್ದ ಪರಿಣಾಮ ಸಂಚಾರ ಬೆಳಗ್ಗೆಯಿಂದ ಸಂಜೆಯವರೆಗೆ ಸ್ಥಗಿತಗೊಂಡಿತ್ತು. ಸಂಜೆ ವೇಳೆ ಮಣ್ಣು ತೆರವು ಕಾರ್ಯ ನಡೆದ ಪರಿಣಾಮ ರಾತ್ರಿ ಮತ್ತೆ ಈ ಮಾರ್ಗದಲ್ಲಿ ಸಂಚಾರ ಆರಂಭಗೊಂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv