ಬೆಂಗಳೂರು: ಅನರ್ಹ ಶಾಸಕರ ವಿರುದ್ಧ ವಕೀಲ ಎಸ್.ಬಾಲಕೃಷ್ಣನ್ ದಾಖಲಿಸಿದ್ದ ಅರ್ಜಿಯ ವಿಚಾರಣೆಯನ್ನು ಎನ್ಐಎ (ರಾಷ್ಟ್ರೀಯ ತನಿಖಾ ದಳ) ನ್ಯಾಯಾಲಯ ನಾಳೆಗೆ ಮುಂದೂಡಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಅರ್ಜಿಯ ವಿಚಾರಣೆ ನಡೆಯಲಿದೆ. ಇಂದು ಬಾಲಕೃಷ್ಣನ್ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿ ಮಧ್ಯಾಹ್ನ 4 ಗಂಟೆಗೆ ವಿಚಾರಣೆ ನಡೆಸುವುದಾಗಿ ಹೇಳಿತ್ತು.
17 ಅನರ್ಹ ಶಾಸಕರು ಮತ್ತು ಇನ್ನಿತರರ ವಿರುದ್ಧ ಬಾಲನ್ ದೂರು ದಾಖಲು ಮಾಡಿದ್ದಾರೆ. ಅನರ್ಹ ಶಾಸಕರು ಅಕ್ರಮ ಹಣ ಪಡೆದು ಬಿಜೆಪಿ ಸೇರಿದ್ದಾರೆ. ಆಪರೇಷನ್ ಕಮಲಕ್ಕೆ ಬಿಜೆಪಿ ಅಕ್ರಮ ಹಣ ಬಳಕೆ ಮಾಡಿದ್ದು, ದುಡ್ಡಿನ ಮೂಲ ಯಾವುದು ಅಂತಾ ಗೊತ್ತಾಗಬೇಕಿದೆ. ರಾಜಕೀಯ ಪಕ್ಷಗಳಿಗೆ ಭಯೋತ್ಪಾದಕ ಸಂಘಟನೆಗಳಿಂದ ಹಣ ಬರುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಹಾಗಾಗಿ ಅನರ್ಹ ಶಾಸಕರ ಪಡೆದಿದ್ದಾರೆ ಎನ್ನಲಾದ ಹಣದ ಬಗ್ಗೆ ತನಿಖೆ ಆಗಬೇಕು ಎಂದು ಬಾಲಕೃಷ್ಣನ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಇತ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ಅನರ್ಹರಿಂದಾಗಿಯೇ ಬಿಜೆಪಿ ಸರ್ಕಾರ ರಚನೆ ಮಾಡಿದ್ದೇವೆ. ಚುನಾವಣೆಯಲ್ಲಿ ಗೆದ್ದ ಬಳಿಕ ಅನರ್ಹ ಶಾಸಕರನ್ನು ಮಂತ್ರಿ ಮಾಡುತ್ತೇವೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಅನರ್ಹ ಶಾಸಕರು ಪಡೆದಿರುವ ಹಣದ ಬಗ್ಗೆ ತನಿಖೆಯಾಗಬೇಕಿದೆ. ಆಪರೇಷನ್ ಕಮಲಕ್ಕೆ ಸಾವಿರ ಕೋಟಿ ರೂ. ಅಕ್ರಮ ಹಣ ಬಳಕೆಯಾಗಿದಿದೆ. ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರ ಆಡಿಯೋಗಳು ಸಹ ಲೀಕ್ ಆಗಿದೆ ಎಂದು ಬಾಲಕೃಷ್ಣನ್ ಆರೋಪಿಸಿದ್ದಾರೆ.