ಬಾಗಲಕೋಟೆ: ಪ್ರವಾಹದಲ್ಲಿ ಸಿಲುಕಿದಾಗ ರಕ್ಷಣೆ ಮಾಡಿದರೆ ಸಾಕು ಎಂದು ಕೆಲವರು ಕಾಯುತ್ತಿರುತ್ತಾರೆ. ಆದರೆ ಇಲ್ಲೊಂದು ಕುಟುಂಬದ ಮೂವರು, ರಕ್ಷಣಾ ತಂಡ ಮನೆಯ ಬಳಿ ತೆರಳಿ ರಕ್ಷಣೆಗೆ ಮುಂದಾದರೂ ನಾವು ಜಾನುವಾರುಗಳನ್ನು ಬಿಟ್ಟು ಬರುವುದಿಲ್ಲ ಎಂದು ಪಟ್ಟು ಹಿಡಿದ ಘಟನೆ ನಡೆದಿದೆ.
ದಿನೇ ದಿನೇ ಪ್ರವಾಹ ಹೆಚ್ಚುತ್ತಿದ್ದು, ರಕ್ಷಣಾ ಕಾರ್ಯವೂ ಅಷ್ಟೇ ಸವಾಲಾಗಿ ಪರಿಣಮಿಸಿದೆ. ಅದರಂತೆ ಗ್ರಾಮದ ಮನೆಗಳಲ್ಲಿ ಸಿಲುಕಿರುವ ಜನರನ್ನು ಹುಡುಕಿ ಎನ್ಡಿಆರ್ಎಫ್ ಹಾಗೂ ನೇವಿ ತಂಡ ರಕ್ಷಣಾ ಕಾರ್ಯ ಮಾಡುತ್ತಿದೆ. ಹಾಗೆಯೇ ರಕ್ಷಣೆ ಮಾಡಲು ತೆರಳಿದಾಗ ರಾಸುಗಳನ್ನು ಬಿಟ್ಟು ಬರುವುದಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದ್ದಾರೆ.
ಅಥಣಿ ತಾಲೂಕಿನ ಜನವಾಡ ಗ್ರಾಮ ಸಂಪೂರ್ಣ ಮುಳುಗಿದ ಪರಿಣಾಮ ಇಂದು ಎನ್ಡಿಆರ್ಎಪ್ ತಂಡ 50 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆ ತಂದಿದೆ. ಆದರೆ, ಇಡೀ ಗ್ರಾಮ ಪ್ರವಾಹದಲ್ಲಿ ಮುಳುಗಿದರೂ ಜನವಾಡ ಗ್ರಾಮದ ಮೂವರು ಮಾತ್ರ ಗ್ರಾಮ ಬಿಟ್ಟು ಬರಲು ನಿರಾಕರಿಸಿದ್ದಾರೆ.
ದಂಪತಿ ಸೇರಿದಂತೆ ಮತ್ತೊಬ್ಬ ವ್ಯಕ್ತಿ ಗ್ರಾಮ ಬಿಟ್ಟು ಬರಲು ನಿರಾಕರಿಸಿದ್ದಾರೆ. ಪ್ರವಾಹದ ಮಧ್ಯೆಯೇ ನಾಗಪ್ಪ ಗುರವ್, ಮಾಲವ್ವ ಗುರವ್ ದಂಪತಿ ಮನೆಬಿಟ್ಟು ಬರಲು ನಿರಾಕರಿಸಿದ್ದಾರೆ. ಅಲ್ಲದೇ ಮತ್ತೊಬ್ಬ ವ್ಯಕ್ತಿ ಗೋಪಾಲ ಎನ್ನುವವರು ಸಹ ಪ್ರವಾಹದ ಮಧ್ಯೆಯೇ ಉಳಿದುಕೊಂಡಿದ್ದಾರೆ. ದಂಪತಿ ಸೇರಿದಂತೆ ಮೂವರಿಗೂ ಎನ್ಡಿಆರ್ಎಫ್ ತಂಡ ಹಾಗೂ ಪೊಲೀಸರು ಎಷ್ಟೇ ಮನವಿ ಮಾಡಿದರೂ ಮನೆ ಬಿಟ್ಟು ಬರಲು ನಿರಾಕರಿಸಿದ್ದಾರೆ. ಮನೆಯಲ್ಲಿನ ಜಾನುವಾರುಗಳನ್ನು ರಕ್ಷಣೆ ಮಾಡಿದರೆ ಮಾತ್ರ ನಾವು ಬರುತ್ತೇವೆ ಎಂದು ಪಟ್ಟು ಹಿಡಿದು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಆದರೆ, ದಂಪತಿಯ ಇಬ್ಬರು ಪುತ್ರರು ಪ್ರವಾಹದಿಂದ ಸುರಕ್ಷಿತ ಸ್ಥಳಕ್ಕೆ ಆಗಮಿಸಿದ್ದಾರೆ.