ರಾಮನಗರ: ಬಾಡಿಗೆಗೆಂದು ತೆರಳಿ ನಾಪತ್ತೆಯಾಗಿದ್ದ ಚನ್ನಪಟ್ಟಣದ ಕಾರು ಚಾಲಕ ಕೊಲೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವ ಘಟನೆ ಉಡುಪಿ ತಾಲೂಕಿನ ಹೆಬ್ರಿ ಗ್ರಾಮದಲ್ಲಿ ನಡೆದಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದ ನಿವಾಸಿ ಕಾರು ಚಾಲಕ ನಾಗರಾಜ್ ಮೃತ ದುರ್ದೈವಿ. ಅಂದಹಾಗೇ ಆಗಸ್ಟ್ 27ರಂದು ಚನ್ನಪಟ್ಟಣದಲ್ಲಿ ತಾವು ಇಂಜಿನಿಯರ್ ಗಳು ಎಂದು ಇಬ್ಬರು ಅಪರಿಚಿತರು ಶಿವಮೊಗ್ಗಕ್ಕೆ ಹೋಗಬೇಕೆಂದು ಕಾರು ಬಾಡಿಗೆ ಪಡೆದಿದ್ದರು. ಆದರೆ ಆಗಸ್ಟ್ 28ರಿಂದ ನಾಗರಾಜ್ ಕುಟುಂಬಸ್ಥರ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದ.
ಈ ಸಂಬಂಧ ಚನ್ನಪಟ್ಟಣಪುರ ಪೊಲೀಸ್ ಠಾಣೆಯಲ್ಲಿ ನಾಗರಾಜ್ನ ಪತ್ನಿ ಶಿಲ್ಪಾ ದೂರು ನೀಡಿದ್ದರು. ಆದರೆ ಆಗಸ್ಟ್ 31ರಂದು ಉಡುಪಿಯ ಹೆಬ್ರಿ ಬಳಿ ಕೊಳೆತ ಸ್ಥಿತಿಯಲ್ಲಿ ಸಿಕ್ಕ ನಾಗರಾಜ್ನ ಶವವನ್ನು ಅಪರಿಚಿತ ಶವವೆಂದು ತಿಳಿದು ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಹೂಳಲಾಗಿತ್ತು.
ಗುರುವಾರ ಪೊಲೀಸರು ಹಾಗೂ ಕುಟುಂಬದವರು ನಾಗರಾಜ್ ನ ಗುರುತು ಪತ್ತೆ ಮಾಡಿದ ಬಳಿಕ ಕುಟುಂಬಸ್ಥರ ಮನವಿ ಮೇರೆಗೆ ಶುಕ್ರವಾರ ಮತ್ತೆ ಮೃತದೇಹ ಹೊರತೆಗೆದು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಮೃತ ನಾಗರಾಜ್ನ ಕಾರು ಅತ್ತಿಬೆಲೆ ಸಮೀಪ ದೊರಕಿದ್ದು ಕಾರು ಚಲಾಯಿಸಿದ ಅಪರಿಚಿತ ವ್ಯಕ್ತಿಯ ಗುರುತು ನೆಲಮಂಗಲ ಟೋಲ್ ನಲ್ಲಿ ಸಿಕ್ಕಿದೆ.
ಸದ್ಯ ಈ ಪ್ರಕರಣ ದಾಖಲಿಸಿಕೊಂಡಿರುವ ಚನ್ನಪಟ್ಟಣ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv