ಚಿಕ್ಕಮಗಳೂರು: ಪ್ರೀತಿ ಹೆಸರಲ್ಲಿ ಯುವತಿಯನ್ನ ಗರ್ಭಿಣಿ ಮಾಡಿ ಕೈಕೊಡಲು ಮುಂದಾಗಿದ್ದ ಯುವಕನನ್ನ ಮನವೊಲಿಸಿ ಎಸ್ಪಿ ಅಣ್ಣಾಮಲೈ ಮದುವೆ ಮಾಡಿಸಿದ್ದು, ಯುವಕ ಮತ್ತೆ ಕೈ ಕೊಟ್ಟು ಓಡಿ ಹೋಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕರಗಡ ಗ್ರಾಮದಲ್ಲಿ ನಡೆದಿದೆ.
ಕರಗಡ ಗ್ರಾಮದ ನಿವಾಸಿ ಅನಿಲ್, ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ನಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಅದೇ ಗ್ರಾಮದ ಲಕ್ಷ್ಮಿಯನ್ನು ಪ್ರೀತಿಸಿ, ಆಕೆ ಗರ್ಭಿಣಿಯಾದ ಮೇಲೆ ಕೈಕೊಡಲು ಮುಂದಾಗಿದ್ದ. ಈ ಬಗ್ಗೆ ಹುಡುಗಿ ಎಸ್ಪಿ ಗೆ ದೂರು ನೀಡಿದ್ದರು. ನಂತರ ಅಣ್ಣಾಮಲೈ ಮುಂದೆ ನಿಂತು ಎರಡು ಕುಟುಂಬದವರ ಜೊತೆ ಮಾತನಾಡಿ ಆಗಸ್ಟ್ 18 ರಂದು ನಗರದ ಮಾರ್ಕೆಟ್ ರಸ್ತೆಯ ದೇವಾಲಯದಲ್ಲಿ ಮದುವೆ ಮಾಡಿಸಿ ರಿಜಿಸ್ಟ್ರರ್ ಕೂಡ ಮಾಡಿಸಿದ್ದರು. ಆದರೆ ಕಳೆದ ಒಂದೂವರೆ ತಿಂಗಳಿಂದ ಮತ್ತೆ ಅನಿಲ್ ನಾಪತ್ತೆಯಾಗಿದ್ದಾನೆ.
ಇತ್ತ ಲಕ್ಷ್ಮಿ ಏಳು ತಿಂಗಳ ಗರ್ಭಿಣಿಯಾಗಿದ್ದು, ತನ್ನ ಗಂಡ ಹಾಗೂ ಹುಟ್ಟೋ ಮಗುವಿಗಾಗಿ ಕಣ್ಣೀರಿಡುತ್ತಿದ್ದಾರೆ. ಒಂದೂವರೆ ತಿಂಗಳ ಹಿಂದೆಯೇ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ನೊಂದ ಯುವತಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತಿಯನ್ನು ಅತ್ತೆ-ಮಾವ ಹಾಗೂ ಮಾವಂದಿರೇ ಎಲ್ಲೋ ಕಳಿಸಿದ್ದಾರೆ ಎಂದು ಲಕ್ಷ್ಮಿ ಆರೋಪಿಸುತ್ತಿದ್ದಾರೆ.