ಮಂಗಳೂರು: ಬಜರಂಗದಳ ಮುಖಂಡನ ಕಿರುಕುಳದಿಂದ ಸಾಲಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗರೋಡಿಯ ತಾರಾನಾಥ್ ಆತ್ಮಹತ್ಯೆಗೆ ಶರಣಾಗಿರುವವರು. ಇವರು ತಮ್ಮ ಕಾರನ್ನು ಬಜರಂಗದಳದ ಮುಖಂಡ ಪ್ರಮೋದ್ ಪಂಪ್ವೆಲ್ಗೆ ಫೈನಾನ್ಸ್ ನಲ್ಲಿ ಅಡವಿಟ್ಟು ಸುಮಾರು 2.5 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ತಿಂಗಳಿಗೆ 25 ಸಾವಿರ ರೂಪಾಯಿ ಬಡ್ಡಿ ಕಟ್ಟೋ ಷರತ್ತಿನಡಿ ಹಣ ಪಡೆದಿದ್ದ ತಾರಾನಾಥ್ 6 ತಿಂಗಳ ನಂತರ ಬಡ್ಡಿ ಕಟ್ಟಲಾರದೇ ಸಾಲದಲ್ಲಿ ಮುಳುಗಿದ್ದಾರೆ.
ಈ ವೇಳೆ ತಾರಾನಾಥ್ ಬಡ್ಡಿ ಕಟ್ಟಿಲ್ಲ ಎಂದು ಪ್ರಮೋದ್ ತನ್ನ ಸಹಚರರ ಜೊತೆಗೂಡಿ ತಾರನಾಥ್ ಮನೆಗೆ ತೆರಳಿ ಪತ್ನಿ ಮತ್ತು ಮಕ್ಕಳನ್ನು ಪೀಡಿಸಿದ್ದಾನೆ. ಇದರಿಂದ ಬೇಸತ್ತ ತಾರನಾಥ್, ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಮೋದ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಆರೋಪಿಯ ಬಂಧನಕ್ಕೆ ಮೀನಾಮೇಷ ಎಣಿಸುತ್ತಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.