ಬಾಗಲಕೋಟೆ: ಸಂಬಂಧದಲ್ಲಿ ಮಗಳು ಮತ್ತು ಚಿಕ್ಕಪ್ಪ, ಆದರೆ ಅವರಿಬ್ಬರ ನಡುವೆ ಪ್ರೀತಿ ಶುರುವಾಗಿದ್ದು, ಈಗ ಯುವಕ ನಂಗೆ ಅವಳೇ ಬೇಕು ಎಂದು ಪಟ್ಟು ಹಿಡಿದು ಕುಳಿತಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ನವನಗರದ 12ನೇ ಸೆಕ್ಟರ್ ನಿವಾಸಿಯಾಗಿರುವ ಸಾಗರ್ ಸುಗತೇಕರ್, ಅದೇ ಕಾಲೋನಿ ಸಂಬಂಧಿ ಯುವತಿ ಜೊತೆಗೆ ಲವ್ವಿಡವ್ವಿ ಶುರುಮಾಡಿಕೊಂಡಿದ್ದ. ಒಂದು ವರ್ಷದಿಂದ ಯಾರಿಗೂ ಗೊತ್ತಿಲ್ಲದೇ ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದಿದೆ. ಅಷ್ಟೇ ಅಲ್ಲದೇ ಒಂದು ವಾರದ ಹಿಂದೆ ಇಬ್ಬರೂ ಮನೆ ಬಿಟ್ಟು ಹೋಗಿ ದೈಹಿಕ ಸಂಪರ್ಕವನ್ನೂ ಬೆಳೆಸಿಕೊಂಡಿದ್ದಾರೆ.
ಇವರಿಬ್ಬರ ಪ್ರೀತಿ, ಓಡಾಟವೆಲ್ಲಾ ಮನೆಯವರಿಗೆ ತಿಳಿದಿದೆ. ಆದರೆ ಸಂಬಂಧದಲ್ಲಿ ಚಿಕ್ಕಪ್ಪ, ಮಗಳ ಸಂಬಂಧವಿದ್ದು, ಹುಡುಗಿಯ ಪೋಷಕರು ಇದನ್ನು ವಿರೋಧಿಸಿದ್ದಾರೆ. ಅಲ್ಲದೆ ಸಮಾಜದ ಮುಖಂಡರೂ ಸಮಕ್ಷಮವಾಗಿ ಪೊಲೀಸರ ನೆರವಿನಿಂದ ಹುಡುಗಿಯನ್ನು ಕರೆದುಕೊಂಡು ಹೋಗಿದ್ದಾರೆ.
ನಾವು ಕಾಲೇಜಿನಲ್ಲಿ ಪರಿಚಯವಾಗಿ ಒಂದು ವರ್ಷದಿಂದ ಪ್ರೀತಿಸುತ್ತಿದ್ದೇವು. ಒಂದು ವಾರದ ಹಿಂದೆ ಆಕೆ ಕರೆ ಮಾಡಿ ಬಂದು ಕರೆದುಕೊಂಡು ಹೋಗು ಎಂದಿದ್ದಳು. ನಾನು ಕರೆದುಕೊಂಡು ಹೋಗಿದ್ದೆ. ಇಬ್ಬರು 6 ದಿನ ಒಟ್ಟಿಗೆ ಇದ್ದೆವು. ಈಗ ನಾವೇ ಪೊಲೀಸರಿಗೆ ಮಾಹಿತಿ ತಿಳಿಸೋಣ ಎಂದು ಬಂದಿದ್ದೆವು. ಆದರೆ ಪೊಲೀಸರು ಈಗ ರಾತ್ರಿ ಆಗಿದೆ. ಬೆಳಗ್ಗೆ ಮಾತನಾಡೋಣ ಎಂದು ಕಳಿಸಿದರು. ಆದರೆ ಇನ್ನು ಕರೆದುಕೊಂಡು ಬಂದಿಲ್ಲ. ಸಂಬಂಧದ ಬಗ್ಗೆ ನಮಗೇನು ಗೊತ್ತಿಲ್ಲ. ಆದರೆ ನನಗೆ ಅವಳೇ ಬೇಕು. ಒಂದು ವೇಳೆ ಪೊಲೀಸರು ಹುಡುಗಿಯನ್ನ ಕರೆ ತರದಿದ್ದರೆ ಪೊಲೀಸ್ ಸ್ಟೇಷನ್ ಎದುರಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನವನಗರ ಠಾಣೆ ಎದುರು ಯುವಕ ಪ್ರತಿಭಟನೆ ನಡೆಸುತ್ತಿದ್ದಾನೆ.