ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ 6ರ ಬಳಿ ಮೇಲುಸೇತುವೆಗಾಗಿ ತೋಡಿದ್ದ ಗುಂಡಿಗೆ ವಾಹನವೊಂದು ಬಿದ್ದು ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಆನೇಕಲ್ ತಾಲೂಕಿನ ತಿರುಮಗೊಂಡನಹಳ್ಳಿ ಬಳಿ ನಡೆದಿದೆ.
ಪರಮಶಿವಂ(57) ಮೃತ ದುರ್ದೈವಿಯಾಗಿದ್ದು, ಈ ಘಟನೆ ಇಂದು ಬೆಳಗ್ಗೆ 6.30ರ ಸುಮಾರಿಗೆ ನಡೆದಿದೆ. ಪರಮಶಿವಂ ಅವರು ತಿರುಮಗೊಂಡನಹಳ್ಳಿ ಬಳಿ ತನ್ನ ಓಮ್ನಿ ಕಾರಿನಲ್ಲಿ ಚಲಿಸುತ್ತಿದ್ದಾಗ ಮೇಲುಸೇತುವೆಗಾಗಿ ತೋಡಿದ್ದ ಬೃಹತ್ ಗುಂಡಿಗೆ ಓಮ್ನಿ ಸಮೇತ ಬಿದ್ದಿದ್ದಾರೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಭಾಸ್ಕರನ್, ಸತೀಶ್ ಹಾಗೂ ಸತ್ಯರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಸತ್ಯರಾಜು ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಘಟನೆಗೆ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದ್ದು, ಕಾಮಗಾರಿ ಸ್ಥಳದಲ್ಲಿ ಸರಿಯಾದ ಸೂಚನಾ ಫಲಕ, ಬ್ಯಾರಿಕೇಡ್ ಗಳನ್ನು ಆಳವಡಿಸಿಲ್ಲ. ಇದನ್ನು ಗಮನಿಸದ ಓಮಿನಿ ಚಾಲಕ ನೇರವಾಗಿ ಗುಂಡಿಗೆ ಕಾರನ್ನು ನುಗ್ಗಿಸಿದ್ದಾನೆ. ಬಿದ್ದ ರಭಸಕ್ಕೆ ವಾಹನ ಸಂಸಪೂರ್ಣ ನಜ್ಜುಗುಜ್ಜಾಗಿದೆ.
ಘಟನೆ ಸಂಬಂಧ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.