ಯಾದಗಿರಿ: ವರುಣನ ಅಬ್ಬರಕ್ಕೆ ಯಾದಗಿರಿ ತಾಲೂಕಿನ ಚಕ್ರತಾಂಡದಲ್ಲಿ ವ್ಯಕ್ತಿ ಬಲಿಯಾಗಿದ್ದಾರೆ.
ಬಿರುಗಾಳಿ ಸಹಿತ ಮಳೆ ಸುರಿದ ಪರಿಣಾಮ ಮನೆ ಗೋಡೆ ಕುಸಿದು ಭೀಮಪ್ಪ (65) ಮೃತಪಟ್ಟಿದ್ದಾರೆ. ಮನೆಯಲ್ಲಿ ಮಗ ಹಾಗೂ ಸೊಸೆ ಜೊತೆ ಭೀಮಪ್ಪ ವಾಸವಾಗಿದ್ದರು. ಭೀಮಪ್ಪ ಜೊತೆ ಮಗ ಮಂಗಪ್ಪ ಹಾಗೂ ಸೊಸೆ ಗನ್ನವ್ವ ಮಳೆ ಸುರಿಯುತ್ತಿರುವಾಗ ಮನೆಯಲ್ಲಿದ್ದರು.
ಮಳೆಯಿಂದಾಗಿ ಗೋಡೆ ಕುಸಿದು ಭೀಮಪ್ಪನ ಮೈಮೇಲೆ ಕಲ್ಲುಗಳು ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಗ ಹಾಗೂ ಸೊಸೆಯಂದಿರು ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ನೀಡಿ ಈ ಕುರಿತು ಪ್ರಕರಣ ದಾಖಲಿಸಿದ್ದಾರೆ.